ಕಠಾರಿವೀರ ಪೈಪೋಟಿ ಸರಿಯಲ್ಲ: ಪುನೀತ್ ಮಾತು
ಒಂದೇ ವಾರ ಬಿಡುಗಡೆಯಾಗಲು ಸಿದ್ಧವಾಗಿರುವ 'ಅಣ್ಣಾ ಬಾಂಡ್' ಮತ್ತು 'ಕಠಾರಿ ವೀರ ಸುರಸುಂದರಾಂಗಿ' ಚಿತ್ರಗಳ ವಿವಾದ ಈಗ ಎಲ್ಲರ ಗಮನಸೆಳೆಯುತ್ತಿವೆ. ಜೊತೆಗೆ ಉಪೇಂದ್ರರ ಎರಡು ಚಿತ್ರಗಳ ನಿರ್ಮಾಪಕರಾದ ಕೆ ಮಂಜು ಹಾಗೂ ಮುನಿರತ್ನ, ತಮ್ಮ ಚಿತ್ರವೇ ಮೊದಲು ಬಿಡುಗಡೆಯಾಗಬೇಕು ಎಂದು ಪಟ್ಟು ಹಿಡಿದು ನಟ ಉಪೇಂದ್ರರ ಮನೆಯಲ್ಲಿ ಸಭೆ ಸೇರಿ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ.
ಕಠಾರಿವೀರ ಹಾಗೂ ಅಣ್ಣಾಬಾಂಡ್ ಒಟ್ಟಿಗೆ ಬಿಡುಗಡೆಯಾಗುತ್ತಿರುವ ಬಗ್ಗೆ ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ತಮ್ಮ ಮೌನ ಮುರಿದಿದ್ದಾರೆ. ಈ ಕುರಿತು, "ಕನ್ನಡ ಸಿನಿಮಾಗಳು ಗೆಲ್ಲಬೇಕು, ಹಾಗಾಗಿ ಎರಡು ದೊಡ್ಡ ಚಿತ್ರಗಳು ಒಂದೇ ವಾರ ಬಿಡುಗಡೆ ಆಗುವುದು ಬೇಕಿರಲಿಲ್ಲ" ಎಂದಿದ್ದಾರೆ. ಬಹುಕೋಟಿ ನಿರ್ಮಾಣದ ಕನ್ನಡದ ಎರಡು ಚಿತ್ರಗಳು ಒಂದೇ ವಾರ ಬಿಡುಗಡೆ ಆಗುವುದನ್ನು ತಪ್ಪಿಸಬೇಕೆಂಬ ಚಿತ್ರರಂಗದ ಗಣ್ಯರ ಮಾತಿಗೆ ಪುನೀತ್ ದನಿಗೂಡಿಸಿದಂತಾಗಿದೆ.
"ಎರಡು ದೊಡ್ಡ ಸಿನಿಮಾಗಳು ಪೈಪೋಟಿ ನಡೆಸುವುದು ಬೇಕಿರಲಿಲ್ಲ. ಎಲ್ಲಾ ಕನ್ನಡ ಚಿತ್ರಗಳೂ ಬಾಕ್ಸಾಫೀಸ್ ನಲ್ಲಿ ಚೆನ್ನಾಗಿ ಓಡಬೇಕು. ಈ ಕಾರಣಕ್ಕೆ ಅಣ್ಣಾ ಬಾಂಡ್ ಮತ್ತು ಕಠಾರಿ ವೀರ ಸುರಸುಂದರಾಂಗಿ ಚಿತ್ರಗಳ ಸಂಘರ್ಷ ತಪ್ಪಿಸಬೇಕು ಎನ್ನುವುದು ನನ್ನ ಅಭಿಪ್ರಾಯ. ಒಟ್ಟಿಗೆ ಬಿಡುಗಡೆಯಾದರೂ ಈ ಎರಡೂ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿವೆ" ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ ಪುನೀತ್. (ಒನ್ ಇಂಡಿಯಾ ಕನ್ನಡ)


Click it and Unblock the Notifications











