'ಆಪ್ತರಕ್ಷಕ'ನಿಗೆ ಶಿವಮೊಗ್ಗದಲ್ಲಿ ಕ್ಷೀರಾಭಿಷೇಕ
ರಾಜ್ಯಾದ್ಯಂತ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ಆಪ್ತರಕ್ಷಕ' ಚಿತ್ರ ತೆರೆಕಂಡಿದೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಪಟಾಕಿ ಸಿಡಿಸುವ ಮೂಲಕ, ವಿಷ್ಣು ಕಟೌಟ್ ಗಳಿಗೆ ಹಾರ ತುರಾಯಿ, ಹೂವಿನ ಮಳೆಗರೆದು ಆಪ್ತರಕ್ಷಕನಿಗೆ ಅಭಿಮಾನಿಗಳು ಸ್ವಾಗತ ಕೋರಿದ್ದಾರೆ.
ಶಿವಮೊಗ್ಗದ ಶ್ರೀ ವೀರಭದ್ರಶ್ವರ ಚಿತ್ರಮಂದಿರದಲ್ಲಿ ವಿಷ್ಣು ಅಭಿಮಾನಿಗಳು 'ಆಪ್ತರಕ್ಷಕ' ಕಟೌಟಿಗೆ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದರು. ಚಿತ್ರಮಂದಿರದಲ್ಲಿ ಪ್ರೇಕ್ಷಕರ ನೂಗು ನುಗ್ಗಲು ಹೆಚ್ಚಾದ ಕಾರಣ ಭದ್ರತೆಯನ್ನು ಒದಗಿಸಲಾಗಿದೆ. ಆಪ್ತರಕ್ಷಕ ಟಿಕೆಟ್ ಸಿಗದೆ ಪರಿತಪಿಸುತ್ತಿರುವ ಪ್ರೇಕ್ಷಕರು ದಿನಕ್ಕೆ ಐದು ಪ್ರದರ್ಶನಗಳಿಗೆ ಒತ್ತಾಯಿಸಿದ್ದಾರೆ.
ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಎದುರು ವಿಷ್ಣು ಅಭಿಮಾನಿಗಳು ಮುಂಜಾನೆ 6 ಗಂಟೆಯಿಂದಲೇ ಜಮಾಯಿಸಿದ್ದರು. ಮುಂಜಾನೆ 6 ಗಂಟೆಯಿಂದಲೇ ಟಿಕೆಟ್ ಗಳನ್ನುವಿತರಿಸಲಾಗಿದೆ. ಟಿಕೆಟ್ ಗಳನ್ನು ಬ್ಲಾಕ್ ನಲ್ಲಿ ಮಾರಾಟ ಮಾಡಲಾಗಿದೆ ಎಂದು ಟಿಕೆಟ್ ಸಿಗದೆ ನಿರಾಶರಾದ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷ್ಣು ತವರೂರು ಮೈಸೂರಿನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸುವ ಮೂಲಕ ಆಪ್ತರಕ್ಷಕನಿಗೆ ಅದ್ದೂರಿ ಸ್ವಾಗತ ಕೋರಿದರು. ಮೈಸೂರಿನ ಸಂಗಂ, ಲಕ್ಷ್ಮಿ ಮತ್ತು ಸರಸ್ವತಿ ಚಿತ್ರಮಂದಿರಗಳಲ್ಲಿ ಆಪ್ತರಕ್ಷಕ ಪ್ರದರ್ಶನ ಕಾಣುತ್ತಿದೆ. ತಾವರೆಕೆಯಲ್ಲಿ ಚಿತ್ರನಟ ಅನಿರುದ್ಧ ಬೆಳಗಿನ ಪ್ರದರ್ಶನಕ್ಕೆ ಚಾಲನೆ ನೀಡಿದರು.


Click it and Unblock the Notifications











