ರಜನಿಕಾಂತ್ ಮೇಲೂ ಸೇಡು ತೀರಿಕೊಳ್ಳುವಳೇ ನಾಗವಲ್ಲಿ!?
ಇದೊಂಥರಾ ಅಸಂಬದ್ಧ ಪ್ರಶ್ನೆ ಅನ್ನಿಸುವುದಿಲ್ಲವೆ? ಅಲ್ಲಾ ರೀ ನಾಗವಲ್ಲಿ ಅನ್ನುವುದು ಕಾಲ್ಪನಿಕ ಪಾತ್ರವಷ್ಟೆ. ಆ ಹೆಸರಿನ ನಾಟ್ಯರಾಣಿಯಾಗಲಿ ಅಥವಾ ವ್ಯಕ್ತಿಯಾಗಲಿ ಇಲ್ಲ ಎಂದು ಕೆಲವರು ವಾದಿಸುತ್ತಾರೆ. ಆದರೆ ದೆವ್ವ, ಭೂತ, ಪಿಶಾಚಿ ಎಲ್ಲವೂ ಕಾಲ್ಪನಿಕವೇ. ಅವೆಲ್ಲಾ ಇಲ್ಲಾ ಎಂಬುದಾದರೆ ಜನ ಅವುಗಳಿಗೆ ಯಾಕೆ ಭಯ ಪಡಬೇಕು. ಮಂತ್ರ, ತಂತ್ರ, ಹೋಮ, ಯಜ್ಞ ಯಾಗಾದಿಗಳಿಗೆ ಯಾಕೆ ಮೊರೆಹೋಗಬೇಕು?
ನಾಗವಲ್ಲಿ ಇದ್ದಾಳೋ ಇಲ್ಲವೋ ಗೊತ್ತಿಲ್ಲ. ಅದು ಕಾಲ್ಪನಿಕ ಪಾತ್ರವೇ ಆದರೂ ಮನಸ್ಸಿನ ಮೇಲೆ ಆಳವಾಗಿ ಪರಿಣಾಮ ಬೀರುವ ಪಾತ್ರ. ದೆವ್ವ, ಭೂತಪ್ರೇತಗಳ ಚಿತ್ರಗಳನ್ನು ನೋಡಿದ ಪ್ರೇಕ್ಷಕರಿಗೆ ಅಂದು ರಾತ್ರಿಯಲ್ಲಾ ಅವೇ ಕಾಡುವುದಿಲ್ಲವೆ? ಹಾಗೆಯೇ ರಜನಿಕಾಂತ್ ಅವರಿಗೂ ನಾಗವಲ್ಲಿ ಕಾಡುತ್ತಿರಬಹುದಲ್ಲವೆ? ಅವರ ಮನಸ್ಸಿನಲ್ಲೂ ಈ ಪಾತ್ರ ಆಳವಾಗಿ ಹೊಕ್ಕಿರಬಹುದಲ್ಲವೆ?
ತನ್ನ ಆತ್ಮೀಯ ಗೆಳೆಯ ವಿಷ್ಣು ವರ್ಧನ್ ಅವರನ್ನು ಕಳೆದುಕೊಂಡ ಬಳಿಕ ರಜನಿಕಾಂತ್ ಅವರಿಗೆ ನಾಗವಲ್ಲಿಯ ಭಯ, ಅದರಲ್ಲೂ ಮುಖ್ಯವಾಗಿ ಸಾವಿನ ಭಯ ಇನ್ನಿಲ್ಲದಂತೆ ಕಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಜನಿಕಾಂತ್ ಅವರು ಕೆಲ ತಿಂಗಳ ಹಿಂದೆ ಮಹಾ ಮೃತ್ಯುಂಜಯ ಹೋಮವನ್ನು ಮಾಡಿ ಕೃತಾರ್ಥರಾಗಿದ್ದರು.
ಇಷ್ಟೇ ಅಲ್ಲ ವಿಷ್ಣು ಸಾವಿನ ಬಳಿಕ ಮೈಸೂರಿನ ಸುತ್ತಮುತ್ತಲ ಹಲವಾರು ಪುಣ್ಯಕ್ಷೇತ್ರಗಳನ್ನು ರಜನಿಕಾಂತ್ ಭೇಟಿ ಮಾಡಿದ್ದರು. ಅಲ್ಲೆಲ್ಲಾ ನಾಗವಲ್ಲಿ ಸೇರಿದಂತೆ ದುಷ್ಟಶಕ್ತಿಗಳ ನಿವಾರಣೆಗಾಗಿ ಹೋಮ ಹವನಗಳಮೊರೆಹೋಗಿದ್ದರು . ಆಪ್ತಮಿತ್ರ ಬಿಡುಗಡೆಯಾಗುವುದಕ್ಕೂ ಒಂದು ತಿಂಗಳ ಮುನ್ನ ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ಸಾವಪ್ಪಿದ್ದರು. 'ಆಪ್ತರಕ್ಷಕ' ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ವಿಷ್ಣು ಸಾವಪ್ಪಿದ್ದಾರೆ. ಇದಕ್ಕೆಲ್ಲಾ ನಾಗವಲ್ಲಿ ಶಾಪವೇ ಕಾರಣ ಎಂಬುದು ಚಾಲ್ತಿಯಲ್ಲಿರುವ ವದಂತಿ.
ಆಗಾಗ ಕನಸಿನಲ್ಲಿ ನಾಗವಲ್ಲಿ ಬಂದು ಕಾಡುತ್ತಿದ್ದ ಬಗ್ಗೆಯೂ ವಿಷ್ಣುವರ್ಧನ್ ಹೇಳಿಕೊಂಡಿದ್ದರು. 'ಆಪ್ತ ರಕ್ಷಕ' ಚಿತ್ರೀಕರಣ ವೇಳೆ ಅವರು ಕುದುರೆ ಮೇಲಿಂದ ಬಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ವಿಷ್ಣು ನೇರವಾಗಿ ಇದು ನಾಗವಲ್ಲಿಯ ಕಾಟ ಎನ್ನದಿದ್ದರೂ, ಕೆಲವು ಅನುಮಾನಾಸ್ಪದ ಘಟನೆಗಳು ನಡೆದಿವೆ ಎಂದಿದ್ದಂತೂ ನಿಜ.
ಅಭಿನೇತ್ರಿ ಸೌಂದರ್ಯ ದುರ್ಮರಣ, ವಿಷ್ಣುವರ್ಧನ್ ದಿಢೀರ್ ಸಾವು ಇವೆಲ್ಲವೂಕಾಕತಾಳೀಯವೇ ಇರಬಹುದು. ಈಗ ರಜನಿಕಾಂತ್ ಅವರ ಆರೋಗ್ಯ ಹದಗೆಟ್ಟಿರುವುದು ಅವರ ಅಭಿಮಾನಿಗಳನ್ನು ತೀವ್ರ ಆತಂಕಕ್ಕೆ ದೂಡಿದೆ. ರಜನಿಕಾಂತ್ ಅವರು ಶೀಘ್ರ ಗುಣಮುಖರಾಗಿ ಆದಷ್ಟು ಬೇಗ ಹಿಂತಿರುಗಲಿ. ನಾಗವಲ್ಲಿ ಸೇಡು, ಶಾಪದಂತಹ ಊಹಾಪೋಹಾಗಳಿಗೆ ಅಂತ್ಯ ಹಾಡಲಿ ಎಂಬುದು ನನ್ನ ಆಸೆ.


Click it and Unblock the Notifications











