ಜಯಮಾಲಾ ರಾಜಿ; ಶ್ರುತಿ ಜೀವನ ಮತ್ತೆ ಹಳಿಗೆ

ಶ್ರುತಿ ಅವರ ವಿವಾಹ ವಿಚ್ಛೇದನ ಪ್ರಕರಣ ಕನ್ನಡ ಚಿತ್ರೋದ್ಯಮದಲ್ಲಿ ಒಂದು ರೀತಿ ಸುಂಟರ ಗಾಳಿ ಎಬ್ಬಿಸಿತ್ತು. ಪತ್ರಕರ್ತ ಚಕ್ರವರ್ತಿ ಅವರನ್ನು ಮದುವೆಯಾಗುವುದಾಗಿಯೂ ಶ್ರುತಿ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಗಂಡ ಮಹೇಂದರ್ ಅವರಿಂದ ವಿವಾಹ ವಿಚ್ಛೇದನ ಕೋರಿ ಈಗಾಗಲೇ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿರುವ ವಿಚಾರ ಗೊತ್ತೇ ಇದೆ.
ಜಯಮಾಲಾ ಅವರು ಶ್ರುತಿ ಅವರನ್ನು ಭೇಟಿಯಾಗಿ, ವಿವಾಹ ವಿಚ್ಛೇದನದ ಆಲೋಚನೆಯನ್ನು ಬಿಟ್ಟುಬಿಡಿ.ಯಾವುದಕ್ಕೂ ಮತ್ತೊಮ್ಮೆ ಯೋಚಿಸಿ ಎಂದು ಹೇಳಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಸಾ ರಾ ಗೋವಿಂದು ಅವರು ವಿವಾಹ ವಿಚ್ಛೇದನದ ವಿಚಾರವನ್ನು ಬಿಟ್ಟುಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಎಲ್ಲ ಸಮಸ್ಯೆಗಳಿಗೂ ವಿವಾಹ ವಿಚ್ಛೇನದನ ಒಂದೇ ಪರಿಹಾರ ಎನ್ನುವುದಾದರೆ ಸ್ವಲ್ಪ ದಿನ ವಿವಾಹ ವಿಚ್ಛೇದನದ ವಿಚಾರನ್ನು ಮುಂದೂಡುವಂತೆ ಸಾ ರಾ ಗೋವಿಂದು ಸಲಹೆ ನೀಡಿದ್ದಾರೆ.
''ಜಯಮಾಲಾ ಅವರು ನನ್ನ ಹಿತೈಷಿ. ಅವರು ಸಲಹೆ ಕೊಡುವುದರಲ್ಲಿ ಯಾವ ತಪ್ಪಿಲ್ಲ. ವಿವಾಹ ವಿಚ್ಛೇದನ ಆಲೋಚನೆಯನ್ನು ಕೈಬಿಡುವಂತೆ ನನ್ನೊಂದಿಗೆ ಅವರು ಹಲವಾರು ಸುತ್ತಿನ ಮಾತುಕತೆ ನಡೆಸಿದ್ದಾರೆ '' ಎಂದು ಶ್ರುತಿ ಪ್ರತಿಕ್ರಿಯಿಸಿದ್ದಾರೆ. ಜಯಮಾಲಾ ಅವರ ಸಲಹೆಯ ಮೇರೆಗೆ ಮಹೇಂದರ್ ಬಳಿ ಇದ್ದ ಮಗುವನ್ನು ಶ್ರುತಿ ತನ್ನ ಬಳಿ ಉಳಿಸಿಕೊಂಡು ಕಾಲ ಕಳೆಯುತ್ತಿದ್ದಾರೆ. ''ಶ್ರುತಿ ನನ್ನ ಮಗಳಿದ್ದಂತೆ. ಮಹೇಂದರ್ ನನ್ನ ಸಹೋದ್ಯೋಗಿ. ಅವರಿಬ್ಬರೂ ಸಂತೋಷವಾಗಿರಬೇಕು ಎಂಬುದು ನನ್ನ ಬಯಕೆ'' ಎನ್ನುತ್ತಾರೆ ಜಯಮಾಲಾ.
ಜನ ಕಾಲಹರಣ ಮಾಡುವುದಕ್ಕಾಗಿ ಇವರಿಬ್ಬರ ವಿಚಾರವನ್ನು ಚರ್ಚಿಸದೆ, ಶ್ರುತಿ ಮಹೇಂದರ್ ಒಂದಾಗುವಂತೆ ಸಹಾಯ ಮಾಡಿ ಎನ್ನುತ್ತಾರೆ ಜಯಮಾಲಾ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಮಹೇಂದರ್ ಮಾತಿಗೆ ಸಿಗುತ್ತ್ತಿಲ್ಲ. ಏತನ್ಮಧ್ಯೆ ಪತ್ರಕರ್ತ ಚಕ್ರವರ್ತಿ ಅವರು, ಶ್ರುತಿ ಅವರೇನು ಸಣ್ಣ್ಣ ಮಗುವಲ್ಲ. ನಾವಿಬ್ಬರೂ ಮದುವೆ ಆಗಿಯೇ ತೀರುತ್ತೇವೆ. ಈ ವಿಚಾರದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಶ್ರುತಿ ಅವರಿಗೆ ಗೊತ್ತು. ನನ್ನೊಂದಿಗೆ ಶ್ರುತಿ ನಿರಂತರ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











