ರೌಡಿಗಳಿಗೆ ಮಣ್ಣು ಮುಕ್ಕಿಸಿದ ದುನಿಯಾ ವಿಜಯ್!
ಮೈಸೂರಿನ ಲಲಿತ ಮಹಲ್ ಅರಮನೆ ಹೆಲಿಪ್ಯಾಡ್ ನಲ್ಲಿ ದುನಿಯಾ ವಿಜಯ್ ಹಾಗೂ ರೌಡಿಗಳ ನಡುವೆ ಮಾರಾಮಾರಿ. ಆದರೆ ರೌಡಿಗಳಿಗೆ ಮಣ್ಣು ಮುಕ್ಕಿಸುವಲ್ಲಿ ದುನಿಯಾ ವಿಜಯ್ ಕಡೆಗೂ ಯಶಸ್ವಿಯಾಗುತ್ತಾರೆ. ಈ ಸಾಹಸ ಸನ್ನಿವೇಶದ ಚಿತ್ರೀಕರಣವನ್ನು 'ಕಂಠೀರವ' ಚಿತ್ರಕ್ಕಾಗಿ ಮೈಸೂರಿನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.
ಕಳೆದ ಒಂದು ತಿಂಗಳಿಂದ ಮೈಸೂರಿನಲ್ಲಿ 'ಕಂಠೀರವ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ದೇವರಿಗೆ ಸಮರ್ಪಿಸಲು ಚಿನ್ನದ ಕಿರೀಟವನ್ನು ನಟರಾದ ಶ್ರೀನಿವಾಸಮೂರ್ತಿ, ರೇಖಾ, ಸಂಗೀತಾ ಮತ್ತು ವಿಜಯಕಾಶಿ ತೆಗೆದುಕೊಂಡು ಹೋಗುತ್ತಿರುತ್ತಾರೆ. ರೌಡಿಗಳ ಗುಂಪೊಂದು ದಾಳಿ ಮಾಡುತ್ತದೆ. ಆಗ ದುನಿಯಾ ವಿಜಯ್ ಬಂದು ರೌಡಿಗಳನ್ನು ಬೆಂಡೆತ್ತುವ ಸನ್ನಿವೇಶವನ್ನು ಚಿತ್ರೀಕಸಿಕೊಂಡಿದ್ದಾಗಿ ನಿರ್ದೇಶಕ ತುಷಾರ್ ರಂಗನಾಥ್ ತಿಳಿಸಿದ್ದಾರೆ.
ಸುದೀರ್ಘವಾದ ಈ ಸಾಹಸ ಸನ್ನಿವೇಶದ ಚಿತ್ರೀಕರಣದ ಬಳಿಕ ದುನಿಯಾ ವಿಜಯ್ ಸಹ ಸುಸ್ತಾದಂತೆ ಕಾಣುತ್ತಿದ್ದರು. ಬಳಿಕ ಅವರು ಮರದ ನೆರಳನ್ನು ಆಶ್ರಯಿಸಿ ಕೊಂಚ ಕಾಲ ವಿರಮಿಸಿಕೊಂಡರು. ರಾಮು ಎಂಟರ್ ಪ್ರೈಸಸ್ ನಿರ್ಮಾಣದ ಮತ್ತೊಂದು ಅದ್ದೂರಿ ಚಿತ್ರ ಕಂಠೀರವ. ರಿಶಿಕಾ ಸಿಂಗ್ ಮತ್ತು ಶುಭಾ ಪೂಂಜಾ ಚಿತ್ರದ ತಾರಾಬಳಗದಲ್ಲಿದ್ದಾರೆ.


Click it and Unblock the Notifications











