ಚಾಮುಂಡೇಶ್ವರಿಯಲ್ಲಿ ಸ್ವಯಂವರಕ್ಕೆ ಗಟ್ಟಿಮೇಳ
ಶ್ರೀನಗರ ಕಿಟ್ಟಿ ಮತ್ತು ದಿಗಂತ್ ನಟಿಸುತ್ತಿರುವ 'ಸ್ವಯಂವರ" ಚಿತ್ರದ ಚಿತ್ರೀಕರಣ ಮುಕ್ತಾಯವಾದ ಬೆನ್ನಲ್ಲೇ ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಆರಂಭವಾಗಿದೆ ಎಂದು ನಿರ್ಮಾಪಕ ಎಂ.ಚಂದ್ರು ತಿಳಿಸಿದ್ದಾರೆ. ಕರ್ನಾಟಕದ ರಮಣೀಯ ಸ್ಥಳಗಳೂ ಸೇರಿದಂತೆ ದೂರದ ಬ್ಯಾಂಕಾಕ್ನಲ್ಲೂ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ಅನಂತರಾಜು ನಿರ್ದೇಶಿಸುತ್ತಿದ್ದಾರೆ.
ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರ ಜನರ ಪ್ರಶಂಸೆಗೆ ಪಾತ್ರವಾಗಲಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.ನಿರ್ದೆಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ದಿಗಂತ್ ನಾಯಕರಾಗಿ ನಟಿಸುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ಅಭಿನಯಿಸುತ್ತಿರುವ 'ಸ್ವಯಂವರ"ದ ಉಳಿದ ತಾರಾಬಳಗದಲ್ಲಿ ತಾರಾ, ಓಂಪ್ರಕಾಶ್ರಾವ್, ಅರುಣ್ಸಾಗರ್ ಮುಂತಾದವರಿದ್ದಾರೆ.
ಮಣಿಕಾಂತ್ ಕದ್ರಿ ಸಂಗೀತ, ಎಚ್.ಸಿ.ವೇಣು ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ತುಷಾರ ರಂಗನಾಥ್ ಸಂಭಾಷಣೆ, ಹರ್ಷ ನೃತ್ಯ ಹಾಗೂ ಪಳನಿರಾಜ್ ಅವರ ಸಾಹಸ ಈ ಚಿತ್ರಕ್ಕಿದೆ.
ಪ್ರೇಂ, ಯೋಗರಾಜ್ಭಟ್, ವಿ.ನಾಗೇಂದ್ರಪ್ರಸಾದ್. ತುಷಾರ ರಂಗನಾಥ್ ಹಾಗೂ ಎ.ಪಿ.ಅರ್ಜುನ್ ಈ ಚಿತ್ರಕ್ಕೆ ಗೀತರಚನೆ ಮಾಡಿರುವುದು ವಿಶೇಷ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











