ಕರ್ನಾಟಕಕ್ಕೆ ನಾನೊಬ್ಬನೇ ಸ್ಟಾರ್, ಚಿರಂಜೀವಿ ಸರ್ಜಾ
ಆಕ್ಷನ್ ಸ್ಟಾರ್ ಅರ್ಜುನ್ ಸರ್ಜಾ ಸೋದರಳಿಯ ಚಿರಂಜೀವಿ ಸರ್ಜಾ "ಕರ್ನಾಟಕಕ್ಕೆ ನಾನೊಬ್ಬನೇ ಸ್ಟಾರ್" ಎಂದು ತೊಡೆ ತಟ್ಟಿದ್ದಾರೆ. ಅದೂ ಅವರು ಹೀಗೆ ಹೇಳಿರುವುದು ಕರುನಾಡ ಕಿಂಗ್ ಸುದೀಪ್ ಮುಂದೆ. ಇದಕ್ಕೆ ಸುದೀಪ್ ಕೂಡ ಕ್ಲಾಪ್ ಹೊಡೆದು ಸ್ವಾಗತಿಸಿದ್ದಾರೆ.
ವಿಷಯ ಇಷ್ಟೇ, ರಿಶಿ ಯುನಿವರ್ಸಲ್ ಮೂವೀಸ್ ಲಾಂಛನದಲ್ಲಿ ಮಧುರಿಶಿ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ಚಿರು ಈ ರೀತಿಯ ಡೈಲಾಗ್ ಹೊಡೆದಿದ್ದಾರೆ. ಈ ಚಿತ್ರದ ಶೀರ್ಷಿಕೆಯೂ ವಿಚಿತ್ರವಾಗಿದೆ "ಕಲಿಕುಮಾರ್, ಕಲಿನಾಗ್, ಕಲಿವರ್ಧನ". ಈ ಚಿತ್ರದ ಚಿತ್ರೀಕರಣ ರೇಸ್ಕೋರ್ಸ್ನಲ್ಲಿ ಆರಂಭವಾಯಿತು.
ನಾಯಕ ಚಿರಂಜೀವಿ ಸರ್ಜಾ "ಕರ್ನಾಟಕಕ್ಕೆ ನಾನೊಬ್ಬನೆ ಸ್ಟಾರ್" ಎಂದು ಹೇಳುವ ಮೊದಲ ಸನ್ನಿವೇಶಕ್ಕೆ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಮುನಿರತ್ನ ಆರಂಭ ಫಲಕ ತೋರಿದರು. ಕಿಚ್ಚ ಸುದೀಪ್ ಕ್ಯಾಮೆರಾ ಚಾಲನೆ ಮಾಡಿದರು. ಕ್ಯಾಪ್ಟನ್ ಶ್ರೀವತ್ಸ ಎಸ್.ಎನ್.ರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡುತ್ತಿದ್ದಾರೆ.
ಚಿತ್ರಕ್ಕೆ ಬೆಂಗಳೂರು, ಕೆಳಗೂರು ಟೀ ಎಸ್ಟೆಟ್ನಲ್ಲಿ ಮೂವತ್ತೈದು ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಶಕ್ತಿಭೂಷಣ್ ಸಂಗೀತ ನೀಡುತ್ತಿದ್ದಾರೆ. ಸಿ.ನಾರಾಯಣ್ ಛಾಯಾಗ್ರಹಣ, ಸಿ.ಮೋಹನ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ಅಂಕಿತಾ, ರಮೇಶ್ಭಟ್, ತಬಲನಾಣಿ, ಬಿ.ಸುರೇಶ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











