ಅಣ್ಣಾಬಾಂಡ್, ಕಠಾರಿವೀರ ಬಿಡುಗಡೆ ಮುಂದೂಡಿಕೆ
ಸಾಕಷ್ಟು ವಾದ ವಿವಾದಗಳ ಕೇಂದ್ರಬಿಂದುವಾಗಿ ಎಲ್ಲರ ಗಮನಸೆಳೆಯುತ್ತಿರುವ ಅಣ್ಣಾಬಾಂಡ್ ಹಾಗೂ ಕಠಾರಿವೀರ ಸುರಸುಂದರಾಂಗಿ ಎರಡೂ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗಿದೆ. ಸುದ್ದಿಮೂಲಗಳ ಪ್ರಕಾರ ಈ ಎರಡೂ ಚಿತ್ರಗಳು ಕ್ರಮವಾಗಿ ಮೇ 3 ಹಾಗೂ ಮೇ 4, 2012ರಂದು ತೆರೆಗೆ ಅಪ್ಪಳಿಸಲಿವೆ. ಇದೀಗ ಮೊದಲಿನಂತೆ ಎರಡೂ ಚಿತ್ರಗಳೂ ಮತ್ತೆ ಪೈಪೋಟಿಗೆ ಬಿದ್ದಂತಾಗಿದೆ.
ಎರಡೂ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗಲು ಕಾರಣ ಚಿತ್ರಗಳು ಬಿಡುಗಡೆಗೆ ಸಂಪೂರ್ಣ ಸಜ್ಜಾಗಿಲ್ಲದಿರುವುದು ಎನ್ನಲಾಗಿದೆ. ಇನ್ನೂ ವಿದೇಶಗಳಲ್ಲಿ ಹಾಡಿನ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಅಣ್ಣಾಬಾಂಡ್ ತಂಡಕ್ಕೆ, ಪೋಸ್ಟ್ ಪ್ರಾಡಕ್ಷನ್ ಮುಗಿಸಿ ಚಿತ್ರ ಬಿಡುಗಡೆ ಮಾಡಲು 26ಕ್ಕೆ ಸಾಧ್ಯವಿಲ್ಲ ಎನ್ನಲಾಗಿದೆ. ಹಾಗಾಗಿ ಒಂದು ವಾರ ಲೇಟಾಗಿ ಬರಲಿದೆ.
ಈ ಕುರಿತು ಸಂಬಂಧಿತ ಚಿತ್ರಮಂದಿರಗಳ ಮಾಲೀಕರಿಗೆ ಆಯಾ ಚಿತ್ರಗಳ ನಿರ್ಮಾಪಕರಾದ ರಾಘವೇಂದ್ರ ರಾಜ್ ಕುಮಾರ್ ಹಾಗೂ ಮುನಿರತ್ನ ನೋಟೀಸ್ ನೀಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಎರಡೂ ಚಿತ್ರಗಳು ಮತ್ತೆ ಒಂದು ದಿನಗಳ ಅಂತರದಲ್ಲಿ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಲಿವೆ.
ನಡೆಯುತ್ತಿರುವ ಇನ್ನೊಂದು ಬೆಳವಣಿಗೆಯಲ್ಲಿ ನಿರ್ಮಾಪಕರಾದ ಮುನಿರತ್ನ ಹಾಗೂ ಕೆ ಮಂಜು ಮಧ್ಯೆ ಕಗ್ಗಾಂಟಾಗಿರುವ, ಉಪೇಂದ್ರ ನಾಯಕತ್ವದ ಗಾಡ್ ಫಾದರ್ ಹಾಗೂ ಕಠಾರಿವೀರ ಚಿತ್ರಗಳ ಬಿಡುಗಡೆ ಸಮಸ್ಯೆ ಬಗೆಹರಿದಿಲ್ಲ. ಇನ್ನೂ ಸಮಸ್ಯೆ ಬಗೆಹರಿಯದಿದ್ದರೆ ಈ ಎರಡೂ ಚಿತ್ರಗಳೂ ಮೇ 4 ರಂದೇ ಬಿಡುಗಡೆಯಾಗುವ ಸಂಭವವಿದೆ ಎನ್ನಲಾಗುತ್ತಿದೆ. ಇವಿಷ್ಟು ಸದ್ಯದಲ್ಲಿ ಸಿಕ್ಕ ಸುದ್ದಿಮೂಲಗಳ ಮಾಹಿತಿ, (ಒನ್ ಇಂಡಿಯಾ ಕನ್ನಡ)


Click it and Unblock the Notifications











