ಕನ್ನಡ ಚಿತ್ರಗಳನ್ನು ಇನ್ನು ಭಗವಂತನೇ ಕಾಪಾಡಬೇಕು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ (ಸಿಸಿಐ) ರು.16.82 ಲಕ್ಷ ಭಾರಿ ದಂಡ ವಿಧಿಸಿದೆ. ರಾಜ್ಯದಲ್ಲಿ ಪರಭಾಷಾ ಚಿತ್ರಗಳಿಗೆ ಬ್ರೇಕ್ ಹಾಕಲು ಫಿಲಂ ಚೇಂಬರ್ ಕೆಲವು ಷರತ್ತುಗಳನ್ನು ವಿಧಿಸಿತ್ತು. ಪರಭಾಷಾ ಚಿತ್ರಗಳು ಸೀಮಿತ ಸಂಖ್ಯೆಯ ಕೇಂದ್ರಗಳಲ್ಲಿ ಬಿಡುಗಡೆಯಾಗಬೇಕು ಎಂದು ಕಟ್ಟಾಜ್ಞೆ ಹೊರಡಿಸಿತ್ತು.
ಈ ಸಂಬಂಧ ಬಾಲಿವುಡ್ ನಿರ್ಮಾಪಕರು ಕಾಂಪಿಟೇಷನ್ ಆಫ್ ಇಂಡಿಯಾಗೆ ದೂರಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಈ ನಿಯಮದಿಂದ ನಮಗೆ ಭಾರಿ ಲುಕ್ಸಾನ್ ಆಗಿದೆ. ನಮಗೆ ನ್ಯಾಯ ಕೊಡಿಸಿ ಎಂದು ಹಿಂದಿಯ ಕೈಟ್ಸ್, ರಾವಣ್, ರಾ.ಒನ್, ಮೈ ನೇಮ್ ಈಸ್ ಖಾನ್, ಮೌಸಂ ನಿರ್ಮಾಪಕರು ಸಿಸಿಐ ಬಾಗಿಲು ತಟ್ಟಿದ್ದರು.
ಸಿಸಿಐ ಪ್ರಕಾರ, ಇನ್ನು ಮುಂದೆ ಪರಭಾಷಾ ಚಿತ್ರಗಳನ್ನು ಎಷ್ಟೇ ಸಂಖ್ಯೆಯ ಪ್ರಿಂಟ್ಗಳಲ್ಲಿ ಕರ್ನಾಟಕದಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಿದೆ. ಸಿಸಿಐನ ಈ ನಿರ್ಧಾರದಿಂದ ಪರಭಾಷಾ ವಿತರಕರಿಗೆ ಲಕ್ಕಿ ಲಾಟ್ರಿ ಹೊಡೆದಂತಾಗಿದೆ. ಆದರೆ ಕನ್ನಡ ಚಿತ್ರೋದ್ಯಮಕ್ಕೆ ಮಾತ್ರ ಭಾರಿ ಹೊಡೆತ ಬೀಳಲಿದೆ ಎಂಬ ಮಾತುಗಳು ಕೇಳಿಬಂದಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನವರಸ ನಾಯಕ ಜಗ್ಗೇಶ್, ಕನ್ನಡ ಚಿತ್ರಗಳಿಗೆ ಇದರಿಂದ ಭಾರಿ ಹೊಡೆತ ಬೀಳಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಕೂಡ ಇದರಿಂದ ಕಂಗಾಲಾಗಿದ್ದಾರೆ. ಏತನ್ಮಧ್ಯೆ ಸಾಲು ಸಾಲು ಪರಭಾಷಾ ಚಿತ್ರಗಳು ಏ.27ರಂದು ತೆರೆಗೆ ಅಪ್ಪಳಿಸುತ್ತಿವೆ. ಜೂ.ಎನ್ಟಿಆರ್ ಅವರ 'ದಮ್ಮು', ಸುದೀಪ್ ಅವರ 'ಈಗ' ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ. ಕನ್ನಡ ಚಿತ್ರಗಳನ್ನು ಇನ್ನು ಮುಂದೆ ದೇವರೇ ಕಾಪಾಡಬೇಕು. (ಏಜೆನ್ಸೀಸ್)


Click it and Unblock the Notifications











