ಚಿತ್ರ ನಿರ್ದೇಶನಕ್ಕೆ ನವರಸ ನಾಯಕ ಜಗ್ಗೇಶ್
ಇದೀಗ ತಾನೆ ಮಲ್ಲೇಶ್ವರಂನಿಂದ ಬಂದ ಸುದ್ದಿ. ನವರಸ ನಾಯಕ ಜಗ್ಗೆಶ್ ಅವರ ಹಳೆಯ ಆಸೆಗೆ ಕಡೆಗೂ ಜೀವಬಂದಿದೆ. ಏನಪ್ಪಾ ಅದು ಅಂದ್ರೆ, ಲೈಟ್ಸ್ , ಕ್ಯಾಮೆರಾ, ಆಕ್ಷನ್ ಎಂದು ಹೇಳಬೇಕೆಂಬುದು ಜಗ್ಗೇಶ್ ಅವರ ಬಹುದಿನದ ಆಸೆ. ಈ ಆಸೆಯನ್ನು ಸಮಯ ಸಿಕ್ಕಾಗಲೆಲ್ಲಾ ಅವರು ಹೇಳುತ್ತಲೇ ಬಂದಿದ್ದರು.
ಈಗ ಅವರ ಆಸೆ ನೆರವೇರುವ ಲಕ್ಷಣಗಳು ಕಾಣಿಸುತ್ತಿವೆ. ಅವರದೇ ಜೀವನ ಕಥೆಗೆ ಅವರೇ ಆಕ್ಷನ್, ಕಟ್ ಹೇಳಲು ಹೊರಟಿದ್ದಾರೆ. ಆದರೆ ಒಂದು ವಿಚಿತ್ರ ಅಂದರೆ ಜಗ್ಗೇಶ್ ಪಾತ್ರವನ್ನು ಅವರ ಮಗ ಗುರುರಾಜ್ ಜಗ್ಗೇಶ್ ಮಾಡಲಿದ್ದಾರೆ. ಹೇಗಿದೆ ಜಗ್ಗೇಶ್ ವರಸೆ!
ಸದ್ಯಕ್ಕೆ ಮುಸ್ಸಂಜೆ ಮಹೇಶ್ ಅವರ 'ಸಂಕ್ರಾಂತಿ' ಎಂಬ ಚಿತ್ರದಲ್ಲಿ ಗುರುರಾಜ್ ಬಿಜಿಯಾಗಿದ್ದಾರೆ. ಆ ಚಿತ್ರದ ಬಳಿಕ ಜಗ್ಗೇಶ್ ಚಿತ್ರ ಸೆಟ್ಟೇರಲಿದೆ ಎನ್ನುತ್ತವೆ ಮೂಲಗಳು. ಜಗ್ಗೇಶ್ ನಡೆದು ಬಂದ ಹಾದಿ ಒಂದು ರೀತಿ ವಿಚಿತ್ರ,ವಿಸ್ಮಯ. ಅದನ್ನೇ ಕತೆ ಮಾಡಿದರೆ ಹೇಗೆ ಎಂಬ ಜಿಜ್ಞಾಸೆಯೇ ಅವರನ್ನು ನಿರ್ದೇಶಕರನ್ನಾಗಿ ಮಾಡುತ್ತಿದೆ.
ತಮ್ಮ ವಿಚಿತ್ರ, ವಿಸ್ಮಯ ಕಥೆಯನ್ನು ಯಾರೋ ನಿರ್ದೇಶಿಸುವ ಬದಲು ನೀವೇ ಒಂದು ಕೈ ನೋಡಿದರೆ ಹೇಗೆ? ಎಂದು ಜಗ್ಗೇಶ್ ಆಪ್ತರು ಸಲಹೆ ಕೊಟ್ಟಿದ್ದಾರೆ. ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಗ್ಗೇಶ್ ಈಗ ನಿರ್ದೇಶಕನ ಅವತಾರ ಎತ್ತಲು ಸಿದ್ಧತೆ ನಡೆಸಿದ್ದಾರೆ. ಮಲ್ಲೇಶ್ವರದಿಂದ ಹಿಡಿದು ಗಾಂಧಿನಗರ ತನಕ ಜಗ್ಗೇಶ್ ನಿರ್ದೇಶಕರಾಗುವ ಸುದ್ದಿ ಹಬ್ಬಿದೆ. ಅದು ಎಷ್ಟು ನಿಜವೋ ಎಷ್ಟು ಸುಳ್ಳೋ ಎಂಬುದನ್ನು ಸ್ವತಃ ಜಗ್ಗೇಶ್ ಅವರೇ ಸ್ಪಷ್ಟಪಡಿಸಬೇಕಾಗಿದೆ.


Click it and Unblock the Notifications











