ಅಂತೂ ಕನ್ನಡಕ್ಕೆ ಬಂದ ಮಮ್ಮೂಟಿ

ಗುಬ್ಬಚ್ಚಿಗಳು ಎಂಬ ಸದಭಿರುಚಿಯ ಚಿತ್ರವನ್ನು ನಿರ್ದೇಶಿಸಿ ವಿಮರ್ಶಕರ ಮೆಚ್ಚುಗೆಗಳಿಸಿದ ಅಭಯ್ ಸಿಂಹ ಅವರು, ವರ್ಷದ ಕೆಳಗೆ ಮಮ್ಮೂಟಿ ಅವರನ್ನು ಸಂಪರ್ಕಿಸಿ,ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಕಥಾ ಹಂದರವುಳ್ಳ ಶಿಕಾರಿ ಚಿತ್ರಕಥೆಯನ್ನು ವಿವರಿಸಿ, ಸೈ ಎನಿಸಿಕೊಂಡು ಬಂದಿದ್ದರು. ಆದರೆ, ನಿರ್ಮಾಪಕ ಶೆಟ್ಟಿ ಅವರಿಗೆ ಆರ್ಥಿಕ ಹೊಡೆತ ಬಿದ್ದು, ಮಮ್ಮೂಟಿ ಅವರ ಕಾಲ್ ಶೀಟ್ ಸಮಸ್ಯೆ ಎದುರಾಗಿ ಚಿತ್ರ ಆರಂಭದಲ್ಲೇ ವಿಘ್ನ ಕಂಡಿತ್ತು. ಚಿತ್ರಕ್ಕೆ ಅನ್ ಮೋಲ್ ಭಾವೆ ಸಂಗೀತ. ವಿಕ್ರಂ ಶ್ರೀವಾತ್ಸವ ಛಾಯಾಗ್ರಹಣವಿದೆ. ಸುಚಿತ್ರಾ ಸಾಥೆ ಸಂಕಲನ. ಚಿತ್ರೀಕರಣ ಕರ್ನಾಟಕದಲ್ಲೇ ನಡೆಯಲಿದೆ ಎಂದು ಈ ಮುಂಚೆ ತಿಳಿಸಲಾಗಿತ್ತು.
ಸೋಮವಾರ ಪೊಲ್ಲಾಚಿಗೆ ತೆರಳಿ ಮಮ್ಮೂಟಿ ಅವರನ್ನು ಭೇಟಿ ಮಾಡಿ, ಮಮ್ಮೂಟಿ ಅವರ ಒಪ್ಪಿಗೆಯನ್ನು ಪುನಃ ಪಡೆದು ಬಂದಿದ್ದಾರೆ. ಪಳಸ್ಸಿ ರಾಜ ಚಿತ್ರದ ಒಳ್ಳೆ ಓಪನಿಂಗ್ ನಿಂದ ಖುಷಿಯಾಗಿರುವ ಮಮ್ಮೂಟಿ , ಸದ್ಯ ಶಫಿ ನಿರ್ದೇಶನದ ಮಲೆಯಾಳಂ ಚಿತ್ರವೊಂದರಲ್ಲಿ ಬ್ಯುಸಿ ಆಗಿದ್ದಾರೆ. ಕಥಾವಸ್ತು ಇಷ್ಟವಾದರೆ ಸಂಭಾವನೆ ಬಗ್ಗೆ ತಲೆಕೆಡಿಸಿಕೊಳ್ಳದ ಮಮ್ಮೂಟ್ಟಿ ಬಹುಶಃ ವರ್ಷದ ಕೊನೆಗೆ ಕನ್ನಡ ಚಿತ್ರರಂಗಕ್ಕೆ ಕಾಲಿಡಬಹುದು. ಶಿಕಾರಿ ಚಿತ್ರದ ಮಹೂರ್ತ ಬೆಂಗಳೂರಿನಲ್ಲೇ ನಡೆಯಲಿದೆ. ಚಿತ್ರೀಕರಣ ಯಾವಾಗ, ಉಳಿದ ತಾರಾಗಣ, ಬಜೆಟ್ ಇತ್ಯಾದಿ ವಿವರಗಳನ್ನು ಸದ್ಯದಲ್ಲೇ ನೀಡುತ್ತೇವೆ ಎಂದು ನಿರ್ಮಾಪಕ ಮಂಜು ಹೇಳಿದರು.
ಕೊಸರು: ಕಳೆದ ಕೆಲವು ವರ್ಷಗಳಿಂದ ಮಮ್ಮೂಟ್ಟಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆ ತರುವ ಪ್ರಯತ್ನ ನಡೆದಿದ್ದರೂ ಸಫಲವಾಗಿರಲಿಲ್ಲ. ಕನ್ನಡ ಚಿತ್ರದಲ್ಲಿ ನಟಿಸುವ ಮೊದಲೇ ಮಲೆಯಾಳಂ ನ ಯಶಸ್ವಿ ಚಿತ್ರ 'ವಿಧೇಯನ್ 'ನಲ್ಲಿ ಮಮ್ಮೂಟಿ ಕನ್ನಡದಲ್ಲಿ ಮಾತನಾಡಿದ್ದಾರೆ. ಆದರೆ, ಅದರಲ್ಲಿ ಹೆಚ್ಚು ಬೈಗುಳದ ಪದಗಳೇ ಇದ್ದವು ಅನ್ನೋದು ಮರೆಯಬೇಕಾದ ಸಂಗತಿ.


Click it and Unblock the Notifications











