ಅದ್ಭುತ ಚಿತ್ರ ಕಾಕನ ಕೋಟೆ ನೋಡೋಣ ಬನ್ನಿ

ಇಂದಿನ ರೀಮೇಕ್, ಸ್ವಮೇಕ್ ಚಿತ್ರಗಳ ಭರಾಟೆಯಲ್ಲಿ ಕಾದಂಬರಿ ಆಧಾರಿತ ಚಿತ್ರಗಳನ್ನು ಪ್ರೇಕ್ಷಕ ನಿರೀಕ್ಷಿಸುವುದು ತಿರುಕನ ಕನಸಿನಂತೆಯೇ ಸರಿ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡ ಚಲನಚಿತ್ರ ಇತಿಹಾಸದಲ್ಲಿ ತನ್ನದೇ ಆದಂತಹ ವಿಶಿಷ್ಟತೆಯನ್ನು ಮೆರೆದ 'ಕಾಕನ ಕೋಟೆ' ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
ಶನಿವಾರ (ಜು.23)ಸಂಜೆ 3.30ಕ್ಕೆ ಸರಿಯಾಗಿ ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರಕ್ಕೆ ನೀವು ಅರ್ಧ ಗಂಟೆ ಮುಂಚೆ ಬಂದರೆ ಸೀಟು ಸಿಗುತ್ತದೆ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಜನಪ್ರಿಯ ನಾಟಕ 'ಕಾಕನ ಕೋಟೆ'.ಈ ಚಿತ್ರ ಹಲವು ವಿಶೇಷಗಳಿಂದ ಕೂಡಿದೆ.
ಸಿ.ಆರ್.ಸಿಂಹ ನಿರ್ದೇಶನದ ಚೊಚ್ಚಲ ಚಿತ್ರ ಎಂಬುದು ಒಂದು ವಿಶೇಷವಾದರೆ. ಸುಗಮ ಸಂಗೀತ ಗಾರುಡಿಗ ಸಿ ಅಶ್ವತ್ಥ್ ಸಂಗೀತ ಸಂಯೋಜಿಸಿದ ಮೊದಲ ಚಿತ್ರವೂ ಹೌದು. 1976ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಲೋಕೇಶ್, ಶ್ರೀನಾಥ್, ಲೋಕನಾಥ್, ವೆಂಕಟಾಚಲಂ, ರಾಜ್ಕುಮಾರ್, ಗಿರಿಜಾ ಲೋಕೇಶ್ ಮುಂತಾದವರು ಅದ್ಭುತವಾಗಿ ಅಭಿನಯಿಸಿದ್ದರು.
ಗಿರೀಶ್ ಕಾಸರವಳ್ಳಿ ಈ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಎಂ ಎಸ್ ಸತ್ಯು ಅವರು ಚಿತ್ರದ ತಾಂತ್ರಿಕ ಬಳಗದಲ್ಲಿದ್ದರು. ಎಂ ಆರ್ ಜಯರಾಜ್ ಮತ್ತು ಎಂ ಸಿ ಸತ್ಯನಾರಾಯಣ ಚಿತ್ರದ ನಿರ್ಮಾಪಕರು. ಈ ಚಿತ್ರದ "ಕರಿಹೈದನೆಂಬೋರು ಮಾದೇಶ್ವರಾ..." ಹಾಗೂ "ನೇಸಾರ ನೋಡು ನೇಸರ ನೋಡು..." ಹಾಡುಗಳು ಇಂದಿಗೂ ಅಜರಾಮರ.
ಮೈಸೂರಿನಿಂದ ಸುಮಾರು 73 ಕಿ.ಮೀ ದೂರದಲ್ಲಿದೆ ಕಾಕನ ಕೋಟೆ. ಹೆಗ್ಗಡದೇವನ ಕೋಟೆ ತಾಲೂಕಿಗೆ ಸೇರಿದ ಸ್ಥಳ. ದಶಕಗಳಿಗೂ ಹಿಂದೆ ಅಲ್ಲಿ ಕಾಡುಕುರುಬರೇ ಹೆಚ್ಚಾಗಿ ವಾಸಿಸುತ್ತಿದ್ದರಂತೆ. ಇವರೆಲ್ಲಾ ಹೆಗ್ಗಡದೇವನ ಕೋಟೆಯಲ್ಲಿದ್ದ ಹೆಗಡೆಯವರಿಗೆ ಕಪ್ಪ ಕೊಡಬೇಕಿತ್ತಂತೆ.
ಈ ವಿಚಾರವಾಗಿ ಕಾಡುಕುರುಬರ ನಾಯಕ ಕಾಕನಿಗೂ ಹೆಗಡೆಯವರಿಗೂ ವೈಮನಸ್ಸು ಉಂಟಾಯಿತಂತೆ. ಆಗ ಮೈಸೂರನ್ನು ಪರಿಪಾಲಿಸುತ್ತಿದ್ದ ರಾಜ ರಣಧೀರ ಕಂಠೀರವ ನರಸರಾಜ ಒಡೆಯರ್ ಅವರನ್ನು ಕಾಕ ಪ್ರಾಣಾಪಯದಿಂದ ಕಾಪಾಡುತ್ತಾನೆ. ಈ ಮೂಲಕ ಮಹಾರಾಜರ ಒಲವು ಗಳಿಸುತ್ತಾನೆ ಕಾಕ. ಇದಿಷ್ಟು ಚಿತ್ರದ ಕಥಾವಸ್ತು. ಚಿತ್ರ ನೋಡವ ಆನಂದ ನಿಮ್ಮದಾಗಲಿ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











