ವಿರಾಜಪೇಟೆಯಲ್ಲಿ ಕೊಡವ ಸಂಸ್ಕೃತಿಯ ಜಡಿಮಳೆ
ತಮ್ಮ ವಿಶಿಷ್ಟ ಕತೆಗಳಿಂದ ಕೊಡವ ಚಿತ್ರಗಳು ಚಿತ್ರರಸಿಕರ ಗಮನಸೆಳೆಯುತ್ತಿವೆ. ಇದೀಗ ಕೊಡವ ಸಂಸ್ಕೃತಿಯನ್ನು ಬಿಂಬಿಸುವ 'ಜಡಿ ಮಳೆ' ಚಿತ್ರ ಮೇ.21ರಂದು ಬಿಡುಗಡೆಯಾಗಿದೆ. ಈ ಚಿತ್ರವನ್ನು ಮುಲ್ಲೆಂಗಡ ಮಾಧೋಶ್ ಪುವಯ್ಯ ನಿರ್ಮಿಸಿದ್ದಾರೆ. ವಿರಾಜಪೇಟೆಯ ನಯನ ಚಿತ್ರಮಂದಿರ ಹಾಗೂ ಗೋಣಿಕೊಪ್ಪದಲ್ಲಿ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗುತ್ತಿರುವ ಎಂಟನೆ ಕೊಡವ ಚಿತ್ರ ಇದಾಗಿದೆ. ಅಮೃತೇಶ್ವರ ಫಿಕ್ಚರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಮಳೆಯ ಜೊತೆಗೆ ಕೊಡವ ಸಂಸ್ಕೃತಿಯನ್ನು ಬಿಂಬಿಸಲಾಗಿದೆ ಎನ್ನುತ್ತಾರೆ ಚಿತ್ರದ ಸಹಾಯಕ ನಿರ್ದೇಶಕ ಚಮ್ಮಟಿರ ಪ್ರವೀಣ್.
ಚಿತ್ರದ ನಾಯಕ ನಟ ನೆಲ್ಲಮಾಕಡ ಸೋಮಣ್ಣ ಹಾಗೂ ನಾಯಕಿಯಾಗಿ ದೇನೂ ಅಚ್ಚಪ್ಪ ಅಭಿನಯಿಸಿದ್ದಾರೆ. ಸಿಂಗೂರು ಎಂ ಪೂವಯ್ಯ, ತಾತಂಡ ಪ್ರಭು ನಾನಯ್ಯ, ಚೆಪ್ಪುದಿರ ಮುದ್ದಪ್ಪ, ದೇರಪಾಂಡ ರೇವತಿ ಮುಂತಾದವರು ತಾರಾಗಣದಲ್ಲಿದ್ದಾರೆ. ಬಚ್ಚಮಾದ ವಿಷ್ಣು ಅವರ ಕತೆ, ಕೋಡೆಂಗಡ ಉಮೇಶ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಒಟ್ಟು ರು.25 ಲಕ್ಷದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಮೂವತ್ತೈದು ದಿನಗಳ ಕಾಲ ಚಿಕ್ಕಮಗಳೂರು, ಕೊಡಗು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಮಡಿಕೇರಿ, ಮೈಸೂರು ಮತ್ತು ಬೆಂಗಳೂರಿನಲ್ಲೂ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ವಿಶು ಉತ್ತಯ್ಯ ತಿಳಿಸಿದ್ದಾರೆ.


Click it and Unblock the Notifications











