ಧಾರವಾಡದಲ್ಲಿ ಶೇಷಾದ್ರಿ ಮುನ್ನುಡಿ, ವಿಮುಕ್ತಿ
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ ಶೇಷಾದ್ರಿ ಅವರ ಎರಡು ಚಿತ್ರಗಳ ಪ್ರದರ್ಶನವನ್ನು ಧಾರವಾಡದ ಚಿತ್ರ ಫಿಲಂ ಸೊಸೈಟಿ ಮೇ.23ರಂದು ಕರ್ನಾಟಕ ಕಾಲೇಜು ಕ್ಯಾಂಪಸ್ ನ ಸೃಜನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಚಿತ್ರ ಪ್ರದರ್ಶನದ ಜೊತೆಗೆ ಪಿ ಶೇಷಾದ್ರಿ ಅವರೊಂದಿಗೆ ಸಂವಾದ ನಡೆಯಲಿದೆ ಎಂದು ಚಿತ್ರ ಫಿಲಂ ಸೊಸೈಟಿಯ ಕಾರ್ಯದರ್ಶಿ ಎ ಎಂ ಖಾನ್ ತಿಳಿಸಿದ್ದಾರೆ.
ಪಿ ಶೇಷಾದ್ರಿ ನಿರ್ದೇಶನದ 'ಮುನ್ನುಡಿ' ಚಿತ್ರಕ್ಕೆ 2001ರಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿತ್ತು. ಈ ಚಿತ್ರ ಅಂದು ಬೆಳಗ್ಗೆ 10 ಗಂಟೆಗೆ ಪ್ರದರ್ಶನ ಕಾಣಲಿದೆ. 2008ನೇ ಸಾಲಿನ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ 'ವಿಮುಕ್ತಿ' ಚಿತ್ರವನ್ನು ಅಂದು ಸಂಜೆ 4.30ಕ್ಕೆ ಪ್ರದರ್ಶಿಸಲಾಗುತ್ತದೆ.
ಬೊಳುವಾರು ಮೊಹಮ್ಮದ್ ಕುಂಞ್ಞ ಅವರ ಸಣ್ಣ ಕತೆ ಆಧಾರವಾಗಿ 'ಮುನ್ನುಡಿ' ಚಿತ್ರೀಕರಿಸಲಾಗಿತ್ತು. ಮುನ್ನುಡಿ'ಯಲ್ಲಿ ಬ್ಯಾರಿ ಸಮುದಾಯದ ಅಸಹಾಯಕ ಹೆಣ್ಣುಮಕ್ಕಳ ಶೋಷಣೆಯ ಚಿತ್ರಣವಿದೆ. ಗಂಡು ಹೆಣ್ಣಿನ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ಚಿತ್ರ 'ವಿಮುಕ್ತಿ'. ಈ ಚಿತ್ರದ ಮೂಲಕ ಸಂಬಂಧಗಳ ಸಂಘರ್ಷವನ್ನು ಹಾಗೂ ಸಾವಿನ ಅಂಚಿನಲ್ಲಿ ನಿಂತವರ ಮಾನಸಿಕ ತೊಳಲಾಟಗಳನ್ನು ಶೇಷಾದ್ರಿ ಚಿತ್ರಿಸಿದ್ದಾರೆ.


Click it and Unblock the Notifications











