ಇದಕ್ಕೆಲ್ಲಾ ಪ್ರತಿಕ್ರಿಯಿಸ್ತಾ ಹೋದ್ರೆ ಮುಠ್ಠಾಳರಾಗುತ್ತೇವೆ
ಕಡೆಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಬ್ಬರು ನಿರ್ಮಾಪಕರ ನಡುವಿನ ಹಗ್ಗಜಗ್ಗಾಟಕ್ಕೆ ತಣ್ಣೀರೆರಚಿದ್ದಾರೆ. 'ಅಂದರ್ ಬಾಹರ್' ಚಿತ್ರೀಕರಣದಲ್ಲಿದ್ದ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಕೆರಳಿದ ಕೇಸರಿಯಂತಾದರು. ಮುನಿರತ್ನ ಹಾಗೂ ಕೆ.ಮಂಜು ಜಟಾಪಟಿಯನ್ನು ಶಿವಣ್ಣ ಕಾಮಿಡಿಯಾಗಿ ಪರಿಗಣಿಸಿರುವುದಾಗಿ ತಿಳಿಸಿದರು.
ಇಷ್ಟು ದಿನ ಈ ಬಗ್ಗೆ ತಾವೇಕೆ ಪ್ರತಿಕ್ರಿಯಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, ಇಂತಹದ್ದಕ್ಕೆಲ್ಲಾ ಉತ್ತರಿಸುತ್ತಾ ಹೋದರೆ ನಾವು ಮುಠ್ಠಾಳರಾಗಬೇಕಾಗುತ್ತದೆ. ಕೆಲವರು ಈ ವಿಷಯವನ್ನು ಸೀರಿಯಸ್ ಆಗಿ ಪರಿಗಣಿಸಿರಬಹುದು. ಆದರೆ ನನಗಿದು ಕಾಮಿಡಿಯಾಗಿ ಕಾಣುತ್ತಿದೆ ಎಂದರು.
ಪರಸ್ಪರ ಕುಳಿತು ಬಗೆಹರಿಸಿಕೊಳ್ಳಬೇಕಾದ ವಿಷಯವನ್ನು ಮಾಧ್ಯಮಗಳ ಮುಂದೆ ಪ್ರದರ್ಶನಕ್ಕಿಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಜನರ ಮುಂದೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ ಎಂದಿದ್ದಾರೆ. ಅಪ್ಪಾಜಿ ಹೇಳುತ್ತಿದ್ದರು ನಿರ್ಮಾಪಕರು ಅನ್ನದಾತರು ಅಂತ. ನಾವೂ ಅದನ್ನೇ ಪಾಲಿಸಿಕೊಂಡು ಬರುತ್ತಿದ್ದೇವೆ.
ಆದರೆ ಇಂತಹ ನಿರ್ಮಾಪಕರಿಂದ ಉಳಿದ ನಿರ್ಮಾಪಕರಿಗೆ ಕೆಟ್ಟಹೆಸರು ಬರುತ್ತದೆ. ಆ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂಬುದು ಅವರ ಮಾತುಗಳಲ್ಲಿ ವ್ಯಕ್ತವಾಯಿತು. ಅಸಂಬದ್ಧವಾಗಿ ಮಾತನಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದನ್ನು ಬಿಟ್ಟು ಅದೇ ಶ್ರಮವನ್ನು ಸಿನಿಮಾಗೆ ಹಾಕಿ ಯಶಸ್ಸು ಗಳಿಸಲಿ ಎಂದು ಕಿವಿಮಾತು ಕೊಟ್ಟರು. (ಏಜೆನ್ಸೀಸ್)


Click it and Unblock the Notifications











