ಕೊನೆಗೂ 'ಕೂಲ್' ಆಯ್ತು ದಂಡುಪಾಳ್ಯ ಕಥೆ ವಿವಾದ

"ದಂಡುಪಾಳ್ಯ ಚಿತ್ರದ ಕಥೆ ನನ್ನ ಪುಸ್ತಕದಿಂದ ನಕಲು ಮಾಡಿದ್ದು. ಆದರೆ ಇದಕ್ಕೆ ನನ್ನಿಂದ ಯಾವುದೇ ಅನುಮತಿ ಪಡೆದಿಲ್ಲ" ಎಂದು ದಂಡುಪಾಳ್ಯ ಕೃತಿಯ ಲೇಖಕರಾದ ಪಿ ಎನ್ ಶ್ರೀನಾಥ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಆದರೆ ದಂಡುಪಾಳ್ಯ ಚಿತ್ರದ ನಿರ್ದೆಶಕರಾದಿಯಾಗಿ ಚಿತ್ರತಂಡ ಕಥೆ ಕದ್ದಿದ್ದಲ್ಲ ಎಂಬ ಸಮರ್ಥನೆ ನೀಡಿತ್ತು.
ಎರಡೂ ಕಡೆಯ ವಾದ-ವಿವಾದಗಳನ್ನು ಆಲಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ, "ಚಿತ್ರತಂಡ ಒದಗಿಸಿರುವ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಪುಸ್ತಕದಲ್ಲಿರುವುದಕ್ಕಿಂತ ಹೆಚ್ಚಿನ ಅಧ್ಯಯನ ನಡೆಸಿ ಸಿನಿಮಾದ ಕಥೆ ಮಾಡಲಾಗಿದೆ. ಅದಕ್ಕೆ ಅಗತ್ಯವಾದ ದಾಖಲೆಗಳು ಚಿತ್ರಕಥೆಯಲ್ಲಿವೆ. ಶ್ರೀನಿವಾಸರಾಜು ಒದಗಿಸಿರುವ ಚಿತ್ರಕಥೆ, ಸಂಭಾಷಣೆಗೂ, ಶ್ರೀನಾಥ್ ಅವರ ಕೃತಿಗೂ ಯಾವುದೇ ಸಂಬಂಧವಿಲ್ಲ" ಎಂದು ಚಿತ್ರತಂಡದ ಪರವಾಗಿಯೇ ತೀರ್ಪು ನೀಡಿದೆ.
ಒಬ್ಬ ಕ್ರಿಯಾಶೀಲ ನಿರ್ದೇಶಕ ತನ್ನದೇ ಆದ ದೃಷ್ಟಿಕೋನದಲ್ಲಿ ಕಥೆ, ಚಿತ್ರಕಥೆ ಮಾಡಿಕೊಳ್ಳಬಹುದು ಎಂಬ ಮಂಡಳಿಯ ವಾದ ದಂಡುಪಾಳ್ಯ ಚಿತ್ರತಂಡಕ್ಕೆ ವರವಾಗಿದೆ. ಹೀಗಾಗಿ ದಂಡುಪಾಳ್ಯದ ನಿರ್ದೇಶಕ, ಹಾಗೂ ಟೀಮ್ ಈಗ ಒಂದು ವಿವಾದ ತಣ್ಣಗಾದ ಖುಷಿ ಅನುಭವಿಸುತ್ತಿದೆ. ಶೀರ್ಷಿಕೆ ಇನ್ನೊಂದು ವಿವಾದ ಹಾಗೇ ಬಾಕಿ ಇದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











