ಕೆಂಗೇರಿ ಮೋರಿ ನೀರು ಕುಡಿಯಲೂ ಸಿದ್ಧ: ನವೀನ್ ಕೃಷ್ಣ
ಬೆಂಗಳೂರಿನ ಸಕಲ ಪಾಪಗಳನ್ನು ತನ್ನೊಳಗೆ ಲೀನ ಮಾಡಿಕೊಂಡಿರುವ ಕೆಂಗೇರಿ ಮೋರಿಯನ್ನು ಕಂಡರೆ ಎಂಥವರೂ ಮೂಗು ಮುಚ್ಚಿಕೊಳ್ಳುತ್ತಾರೆ. ಅಂತಹ ಪಾಪದ ನೀರಿನಲ್ಲಿ ಚಿತ್ರ ಒಂದರ ಸನ್ನಿವೇಶಕ್ಕಾಗಿ ನಟ ನವೀನ್ ಕೃಷ್ಣ ಮುಳುಗಿ ಏಳಲಿದ್ದಾರಂತೆ!
ಚಿತ್ರದ ಹೆಸರು 'ಶಂಕ್ರ', ಅಡಿಬರಹ 'ನನ್ಗೆ ನಾನೇ ದೇವ್ರು'. ತಮ್ಮ ಪಾತ್ರದ ಬಗ್ಗೆ ಎಕ್ಸೈಟ್ ಆಗಿದ್ದ ನವೀನ್ ಕೃಷ್ಣ ಮಾತನಾಡುತ್ತಾ, ಸಾಧ್ಯವಾದರೆ ಈ ಪಾತ್ರಕ್ಕಾಗಿ ಕೆಂಗೇರಿ ಮೋರಿ ನೀರನ್ನು ಗಟಗಟ ಅಂತ ಕುಡಿಯುತ್ತೇನೆ ಎಂದರು. ನವೀನ್ ಕೃಷ್ಣರ ಈ ಮಾತಿಗೆ ಸಭಿಕರು ಗಡಗಡ ಎಂದು ನಡುಗಿದರು.
ಮೈಸೂರು ರಸ್ತೆ ಬಳಿಯಿರುವ ಕೆಂಗೇರಿ ಮೋರಿ ಬಳಿ ಒಂದೆರಡು ನಿಮಿಷ ನಿಂತರೂ ತಲೆ ಸುತ್ತಿ ಬಂದಂತಾಗುತ್ತದೆ. ಅಷ್ಟೊಂದು ಕೆಟ್ಟ ವಾಸನೆ ಅಲ್ಲಿ. ಇಂಥಹ ದುರ್ಗಂಧ ಬೀರುವ ಜಾಗದಲ್ಲಿ ಶಂಕ್ರನ ಚಿತ್ರೀಕರಣ 20 ದಿನಗಳ ಕಾಲ ನಡೆಯಲಿದೆಯಂತೆ. ಜೊತೆಗೆ ವೈದ್ಯರೊಬ್ಬರನ್ನೂ ಕರೆದೊಯ್ಯುತ್ತಿದ್ದಾರೆ.
ಸಾಮಾನ್ಯವಾಗಿ ಚಿತ್ರೀಕರಣ ಎಂದರೆ ನಯನ ಮನೋಹರ ಸ್ಥಳಗಳಲ್ಲಿ ನಡೆಯುತ್ತದೆ. ಆದರೆ ಶಂಕ್ರನ ವಿಚಾರ ಕೊಂಚ ಭಿನ್ನವಾಗಿದೆ. ಚಿತ್ರದ ಸನ್ನಿವೇಶವೊಂದು ಈ ರೀತಿಯ ಜಾಗವನ್ನು ಬಯಸುತ್ತದಂತೆ. ಹಾಗಾಗಿ ಕೆಂಗೇರಿ ಮೋರಿಯೇ ಸೂಕ್ತ ಸ್ಥಳ ಎಂದು ನಿರ್ಧರಿಸಿದ್ದಾಗಿ ನಿರ್ದೇಶಕ ಮಾಲತೇಶ್ ಹೇಳಿದ್ದಾರೆ.
ಉಳಿದಂತೆ ಹುಬ್ಬಳ್ಳಿ, ಹಾಸನ, ಬಳ್ಳಾರಿಯಲ್ಲೂ ಚಿತ್ರೀಕರಣ ನಡೆಯಲಿದೆ. ಈ ಚಿತ್ರವನ್ನು ಲೋಕೇಶ್ ಎಂಬುವವರು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ರಾಜ್ ಸಂಗೀತ, ಸಾರಕ್ಕಿ ಮಂಜು ಅವರ ಸಂಭಾಷಣೆಯಿದೆ. ಚಿತ್ರೀಕರಣಕ್ಕಾಗಿ ಕೆಂಗೇರಿ ಮೋರಿಯನ್ನು ಇದುವರೆಗೂ ಯಾರೂ ಬಳಸಿಕೊಂಡಿಲ್ಲ ಅನ್ನಿಸುತ್ತದೆ. ಯಾರೂ ಮಾಡದ್ದ್ದನ್ನು 'ಶಂಕ್ರ' ಮಾಡಲು ಹೊರಟಿದ್ದಾನೆ ಶುಭವಾಗಲಿ!


Click it and Unblock the Notifications











