ರಾಧಿಕಾ ಹುಚ್ಚಿನಲ್ಲಿ ಬಿದ್ದ ರಾಮನಗರ ವೆಂಕಟೇಶ!
ನಟಿ ರಾಧಿಕಾ ಮತ್ತೆ ಸುದ್ದಿಯಾಗಿದ್ದಾರೆ! ವೆಂಕಟೇಶ್ ಎಂಬ ಅಭಿಮಾನಿಯೊಬ್ಬ ರಾಧಿಕಾ ಹಿಂದೆ ಬಿದ್ದಿದ್ದಾನೆ. ವಿಶೇಷವೆಂದರೆ ಈತ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರತಿನಿಧಿಸುವ ರಾಮನಗರ ಮೂಲದವನು. ಆದರೆ ರಾಧಿಕಾ ಅವರಿಗೆ ಮಾತ್ರ ಈ ಅಭಿಮಾನಿಯ ಬಗ್ಗೆ ಎಳ್ಳಷ್ಟು ಗೊತ್ತಿಲ್ಲ. ಈತ ಮಾತ್ರ ಮೈಮೇಲೆಲ್ಲಾ ಹಚ್ಚೆ ಹಾಕಿಸಿಕೊಂಡು ರಾಧಿಕಾಗಾಗಿ ಅಲೆದಾಡುತ್ತಿದ್ದಾನೆ.
ವೆಂಕಟೇಶನ ಅಭಿಮಾನವೋ, ಅತಿರೇಕವೋ ರಾಧಿಕಾ ಹೆಸರು ಸೇರಿದಂತೆ ಆಕೆ ಅಭಿನಯಿಸಿದ 25 ಚಿತ್ರಗಳ ಹೆಸರನ್ನು ಮೈತುಂಬಾ ಹಚ್ಚಿ ಹಾಕಿಸಿಕೊಂಡಿದ್ದಾನೆ. ಹೀಗೆ ಹುಚ್ಚಾಪಟ್ಟೆ ಹಚ್ಚೆ ಹಾಕಿಸಿಕೊಳ್ಳಲು ಕಾರಣ ಏನು ಎಂದು ಕೇಳಿದರೆ, ರಾಧಿಕಾ ಅರವನ್ನು ಒಮ್ಮೆಯಾದರೂ ಭೇಟಿಯಾಗಬೇಕು. ಆಕೆಗಾಗಿ ಹುಡುಕಿತ್ತಿದ್ದೇನೆ. ಆಕೆಯ ನಟನೆ ಎಂದರೆ ನನಗೆ ಶಾನೆ ಇಷ್ಟ ಎನ್ನುತ್ತಾನೆ ವೆಂಕಟೇಶ.
ಅಂದಹಾಗೆ ರಾಧಿಕಾ, ಆದಿತ್ಯಾ ಅಭಿನಯದ 'ಈಶ್ವರ್' ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಶಂಕರೇಗೌಡ ನಿರ್ಮಿಸಿರುವ ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದಾರೆ. ರಾಧಿಕಾ ಅವರ ಅಣ್ಣ ರವಿರಾಜ್ ಈ ಚಿತ್ರದ ವಿತರಕ. ಒಟ್ಟಿನಲ್ಲಿ ರಾಧಿಕಾ ಸುದ್ದಿ ಮಾಡದಿದ್ದರೂ, ಆಕೆಯ ಹೆಸರಿನಲ್ಲಿ ಯಾರಾದರೂ ಒಬ್ಬರು ಸುದ್ದಿ ಮಾಡುತ್ತಲೇ ಇರುತ್ತಾರೆ ಎಂಬುದಕ್ಕೆ ಇದೂ ಒಂದು ನಿದರ್ಶನ.
ಕೆಲವು ದಿನಗಳ ಹಿಂದೆ 'ಕೈ ವೆಂಕಟೇಶ' ಎಂಬ ಅಂಬರೀಷ್ ಅಭಿಮಾನಿ ತೆಂಗಿನ ಮರ ಹತ್ತಿ ಕುಳಿತಿದ್ದ. ಅಂಬರೀಷ್ ಬರುವವರೆಗೂ ಜಪ್ಪಯ್ಯ ಅಂದರೂ ಇಳಿಯಲ್ಲ ಎಂದು ಹಠ ಹಿಡಿದು ಕೂತಿದ್ದ. ವರನಟ ರಾಜ್ ಕುಮಾರ್ ಅವರಿಗೆ ಅಭಿಮಾನಿಗಳೆಂದರೆ ದೇವರು. ಹಾಗೆಯೇ 'ಸಾಹಸಸಿಂಹ' ವಿಷ್ಣುವರ್ಧನ್ ಅವರು ಅಭಿಮಾನಿಯೊಬ್ಬ ಕೊಟ್ಟ ಕೈಕಡಗವನ್ನು ಇನ್ನೂ ಬಿಚ್ಚಿಲ್ಲ. ಯಾರಿಗೆ ಗೊತ್ತು ವೆಂಕಟೇಶನಿಗೂ ರಾಧಿಕಾ ಅವರ ದರ್ಶನ ಭಾಗ್ಯ ಲಭಿಸಬಹುದೋ ಏನೋ!
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











