ಕ್ಯಾನ್ಸರ್ ರೋಗಿಗೆ ಮರು ಜೀವ ಕೊಟ್ಟ ರಾಜ್ ಕುಟುಂಬ
ವರನಟ ಡಾ.ರಾಜ್ ಕುಮಾರ್ ಕುಟುಂಬ ಕೈಗೊಳ್ಳುವ ಸಾಮಾಜಿಕ ಸೇವೆಗಳು ಅಷ್ಟಾಗಿ ಬೆಳಕಿಗೆ ಬರುವುದೇ ಇಲ್ಲ. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗದಂತೆ ಅವರ ಸೇವಾ ಕೈಂಕರ್ಯಗಳು ನಡೆಯುತ್ತಿರುತ್ತವೆ. ಪ್ರಚಾರ ಅವರಿಗೆ ಇಷ್ಟವಿಲ್ಲ ಎಂಬುದು ಒಪ್ಪತಕ್ಕ ಮಾತು. ಆದರೂ ಅದು ಹೇಗೋ ಮಾಧ್ಯಮಗಳ ಮೂಲಕ ಅವರ ಒಳ್ಳೆಯ ಕೆಲಸಗಳು ಬೆಳಕು ಕಾಣುತ್ತಿರುತ್ತವೆ.ಇತ್ತೀಚೆಗೆ ನಡೆದ ಅಂತಹದ್ದೇ ಘಟನೆಯೊಂದು ಇಲ್ಲಿದೆ ಓದಿ.
ರಾಜ್ ಕುಟುಂಬದ ಚಾಲಕ ನಾಗೇಶ್ ಕೆಲ ಸಮಯದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಈ ವಿಷಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಶಿವಣ್ಣನ ಕಿವಿಗೂ ಬಿತ್ತು. ಕಡೆಗೆ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಗಮನಕ್ಕೂ ಬಂತು. ಕೂಡಲೆ ಅವರು ಚಿಕಿತ್ಸೆಗಾಗಿ ರು.3.5 ಲಕ್ಷ ಬಿಡುಗಡೆ ಮಾಡಿ ಚಿಕಿತ್ಸೆಗೆ ನೆರವಾಗಿದ್ದಾರೆ.
ಈಗ ನಾಗೇಶ್ ಸಾವಿನಿಂದ ಪಾರಾಗಿದ್ದು ಕ್ಯಾನ್ಸರನ್ನು ಜಯಿಸಿ ಬಂದಿದ್ದಾರೆ. ನಾಗೇಶ್ ಸಂಪೂರ್ಣ ಚೇತರಿಸಿಕೊಂಡಿದ್ದು ಪುನಃ ಕೆಲಸಕ್ಕೆ ಹಾಜರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಪಾರ್ವತಮ್ಮ ರಾಜ್ ಕುಮಾರ್ ಅವರ ಚಿತ್ರ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕಂಬೈನ್ಸ್ ಚಾಲಕನಾಗಿ ನಾಗೇಶ್ ಕೆಲಸ ಮಾಡುತ್ತಿದ್ದರು.


Click it and Unblock the Notifications











