ಕೆಂಪೇಗೌಡ ಚಿತ್ರ ಬಿಡುಗಡೆಗೆ ವಾಣಿಜ್ಯ ಮಂಡಳಿ ತಡೆ
ಸುದೀಪ್ ಅಭಿನಯಿಸಿ ನಿರ್ದೇಶಿಸುತ್ತಿರುವ ಕೆಂಪೇಗೌಡಚಿತ್ರ ಇನ್ನೆರಡು ವಾರಗಳಲ್ಲಿ ಕಣ್ಬಿಡುವುದರಲ್ಲಿತ್ತು. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರ ಬಿಡುಗಡೆಗೆ ಬ್ರೇಕ್ ಹಾಕಿದೆ. 'ನಂ.73 ಶಾಂತಿನಿವಾಸ' ಚಿತ್ರದ ವಿತರಕ ಚಂದ್ರಪ್ಪನ ಮತ್ತು ಸುದೀಪ್ ನಡುವಿನ ಹಣಕಾಸು ವ್ಯವಹಾರವೇ ಇದಕ್ಕೆ ಕಾರಣ. ಚಂದ್ರಪ್ಪನಿಗೆ ಸುದೀಪ್ ರು.5 ಲಕ್ಷ ಬಾಕಿ ಕೊಡಬೇಕಾಗಿತ್ತಂತೆ.
ಈ ಹಿನ್ನೆಲೆಯಲ್ಲಿ ಚಂದ್ರಪ್ಪ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಬುಧವಾರ (ಫೆ.23)ನಡೆದ ವಾಣಿಜ್ಯ ಮಂಡಳಿ ಸಭೆಯಲ್ಲಿ ಸುದೀಪ್ ಅಭಿನಯದ 'ಕೆಂಪೇಗೌಡ' ಚಿತ್ರದಬಿಡುಗಡೆಗೆ ತಡೆಯೊಡ್ಡಿರುವುದಾಗಿ ಬಸಂತ್ ಕುಮಾರ್ ಪಾಟೀಲ್ ತಿಳಿಸಿದ್ದಾರೆ.ಚಂದ್ರಪ್ಪನ ಬಾಕಿ ಹಣ ಚುಕ್ತಾ ಆಗುವವರೆಗೂ ಕೆಂಪೇಗೌಡನಿಗೆ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದಿದೆ ಫಿಲಂ ಚೇಂಬರ್.
'ಶಾಂತಿ ನಿವಾಸ' ಚಿತ್ರದ ಸಮಸ್ಯೆಗೂ 'ಕೆಂಪೇಗೌಡ' ಚಿತ್ರ ಬಿಡುಗಡೆಗೆ ತಡೆಯೊಡ್ಡಲು ಸಂಬಂಧ ಏನು ಎಂದು ಪ್ರಶ್ನಿಸಿರುವ ಸುದೀಪ್, ವಾಣಿಜ್ಯ ಮಂಡಳಿ ನಿರ್ಧಾರವನ್ನು ಖಂಡಿಸಿದ್ದಾರೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಏಕೆ ಬರೆ ಎಳೆಯಬೇಕು ಎಂಬುದು ಸುದೀಪ್ ಪ್ರಶ್ನೆ. ಚಲನಚಿತ್ರ ಮಂಡಳಿ ನಿರ್ಧಾರಕ್ಕೆ ಸುದೀಪ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ ಮಂಡಳಿ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿದರು. ಇದರಿಂದ ಶಿವಾನಂದ ಸರ್ಕಲ್ ಬಳಿ ಕ್ಷಣಕಾಲ ಟ್ರಾಫಿಕ್ ಜಮ್ ಆಯಿತು.
ಐದು ವರ್ಷಗಳ ಹಿಂದೆ ತೆರೆಕಂಡಿದ್ದ 'ಶಾಂತಿ ನಿವಾಸ' ಚಿತ್ರದ ವಿತರಣೆ ಹಕ್ಕುಗಳನ್ನು ಚಂದ್ರಪ್ಪ ಪಡೆದಿದ್ದರು. ಚಿತ್ರದ ನಾಯಕ ನಟ ಸುದೀಪ್ ಅವರಿಗೆ ರು.5 ಲಕ್ಷ ಬಾಕಿ ನೀಡಬೇಕಾಗಿತ್ತು ಎಂಬುದು ಚಂದ್ರಪ್ಪ ಆರೋಪ. ಈ ಸಂಬಂಧ ಈಗಾಗಲೆ ಚಲನಚಿತ್ರ ವಾಣಿಜ್ಯ ಮಂಡಳಿ ಮಧಸ್ಥಿಕೆಯಲ್ಲಿ ಹಲವು ಸುತ್ತಿನ ಮಾತುಕತೆಯೂ ನಡೆದಿತ್ತು. ಬಳಿಕ ಸಮಸ್ಯೆ ಬೂದಿ ಮುಚ್ಚಿದ ಕೆಂಡಂದಂತೆ ಇತ್ತು. ಈಗ ಮತ್ತೆ ಹೊತ್ತಿಕೊಂಡಿದೆ.
ಇಷ್ಟು ದಿನ ಸುಮ್ಮನಿದ್ದು ಈಗ್ಯಾಕೆ ಸಮಸ್ಯೆಯನ್ನು ಕೆದಎತ್ತ್ತಿದ್ದೀರಿ ಎಂಬುದು ಸುದೀಪ್ ಪ್ರಶ್ನೆ. ಇಂದು ಸಂಜೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಕೆಎಫ್ಸಿಸಿ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವುದಾಗಿ ಸುದೀಪ್ ಹೇಳಿದ್ದಾರೆ. ವಿತರಕ ಚಂದ್ರಪ್ಪ ಮತ್ತು ಸುದೀಪ್ ನಡುವಿನ ಮುಸುಕಿನ ಗುದ್ದಾಟ ಈಗ ಬೀದಿಗೆ ಬಿದ್ದಂತಾಗಿದೆ.


Click it and Unblock the Notifications











