ಕಾಸರವಳ್ಳಿಗೆ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ
ಪ್ರತಿಭಾವಂತ ನಿರ್ದೇಶಕ ಗಿರೀಶ್ ಕಾಸವರಳ್ಳಿ ಅವರಿಗೆ ಪ್ರಶಸ್ತಿ, ಪುರಸ್ಕಾರಗಳು ಹೊಸದಲ್ಲ. ಈಗಾಗಲೆ ಅವರ ನಿರ್ದೇಶನದ ಚಿತ್ರಗಳಿಗೆ ನಾಲ್ಕು ಬಾರಿ ಸ್ವರ್ಣ ಕಮಲ ಪ್ರಶಸ್ತಿ ಬಂದಿದೆ. ದಕ್ಷಿಣ ಭಾರತದಲ್ಲೇ ಅತ್ಯಧಿಕ ಸ್ವರ್ಣಕಮಲ ಪುರಸ್ಕೃತ ನಿರ್ದೇಶಕ ಎಂಬ ಖ್ಯಾತಿಗೆ ಅವರು ಭಾಜನ. ಈಗ ಅವರಿಗೆ 'ಕೋಟ ಶಿವರಾಮ ಕಾರಂತ ಹುಟ್ಟೂರ' ಪ್ರಶಸ್ತಿ ವರಿಸಿದೆ.
ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯಿತಿ ಕಳೆದ 6 ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ. ಕೇಂದ್ರ ಕಾನೂನು ಸಚಿವ ಎಂ ವೀರಪ್ಪಮೊಯ್ಲಿ, ನಿವೃತ್ತ ಲೋಕಾಯುಕ್ತ ವೆಂಕಟಾಚಲಯ್ಯ, ಶಿಕ್ಷಣ ತಜ್ಞ ಕೆ ಆರ್ ಹಂದೆ, ಪತ್ರಕರ್ತ ರವಿಬೆಳಗೆರೆ, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಈ ಹಿಂದೆ ಪ್ರಶಸ್ತಿ ನೀಡಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಸೃಜನಶೀಲ ಸಾಹಿತಿ, ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ರಘು ತಿಂಗಳಾಯ ತಿಳಿಸಿದ್ದಾರೆ. ಇತ್ತೀಚೆಗೆ ಕಾಸರವಳ್ಳಿ ಅವರ 'ಕನಸೆಂಬ ಕುದುರೆಯನೇರಿ' ಚಿತ್ರ ಎರಡು ವಿಭಾಗಗಳಲ್ಲಿ 57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದ್ದನ್ನು ಸ್ಮರಿಸಬಹುದು.


Click it and Unblock the Notifications











