ಮೇಲ್ಮನೆಯಲ್ಲಿ ಮೊಳಗಲಿ ಕೃಷ್ಣಪ್ಪ, ಸಂದೇಶ್ ಶಂಖ
ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕನ್ನಡದ ಚಿತ್ರೋದ್ಯಮದ ಇಬ್ಬರು ನಿರ್ಮಾಪಕರು ಗೆದ್ದು ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ಹಳೆಯ ಕುದುರೆ ಎಂದೇ ಹೆಸರಾದ ಸಂದೇಶ್ ನಾಗರಾಜ್ ಹಾಗೂ 'ಮುಂಗಾರು ಮಳೆ'ಖ್ಯಾತಿಯ ಇ ಕೃಷ್ಣಪ್ಪ ಇದೇ ಮೊದಲ ಬಾರಿಗೆ ಜೆಡಿ(ಎಸ್)ಪಕ್ಷದಿಂದ ಮೇಲ್ಮನೆ ಪದಗ್ರಹಣ ಮಾಡಿದ್ದಾರೆ.
ಬಹಳ ವರ್ಷಗಳಿಂದ ಮೈಸೂರಿನಿಂದ ಸಂದೇಶ್ ನಾಗರಾಜ್ ಹಾಗೂ ನೆಲಮಂಗಲದ ಇ ಕೃಷ್ಣಪ್ಪ ವಿಧಾನ ಪರಿಷತ್ ನಲ್ಲಿ ಸ್ಥಾನ ಪಡೆಯಲು ಬಯಸಿದ್ದರು. ಇದೀಗ ಇವರಿಬ್ಬರೂ ಮೇಲ್ಮನೆ ಆಯ್ಕೆಯಾಗುವ ಮೂಲಕ ಆಸೆ ಈಡೇರಿದಂತಾಗಿದೆ. ಇನ್ನೇನಿದ್ದರೂ ಇವರು ಕನ್ನಡ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದಷ್ಟೇ ಅವರ ಮುಂದಿನ ಕೆಲಸ.
ಜೆಡಿಎಸ್ ನಿಂದ ಚಾಮರಾಜನಗರಆಖಾಡಕ್ಕಿಳಿದಿದ್ದ ಸಂದೇಶ್ ನಾಗರಾಜ್ ತಮ್ಮ ಎದುರಾಳಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರೊಂದಿಗೆ ಸೆಣೆಸಿದ್ದರು. ಒಟ್ಟು 3521 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಬಾರಿಸಿದ್ದಾರೆ. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಇ ಕೃಷ್ಣಪ್ಪ ಕಾಂಗ್ರೆಸ್ ನ ಎಸ್.ರವಿ ಅವರನ್ನು ಕೂದಲೆಳೆ ಅಂತರದಿಂದ ಸೋಲಿಸಿ ಬೆಂಗಳೂರು ಗ್ರಾಮಾಂತರ ಸ್ಥಾನವನ್ನು ಕೈವಶ ಮಾಡಿಕೊಂಡಿದ್ದು ಹಳೆಯ ಸುದ್ದಿ.
ಇಬರಿಬ್ಬರೂ ಮೇಲ್ಮನೆಯಲ್ಲಿ ಅಷ್ಟೋ ಇಷ್ಟೋ ಮಾತನಾಡಿ ಕನ್ನಡ ಚಿತ್ರೋದ್ಯಮದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದರೆ ಇವರು ಆಯ್ಕೆಯಾಗಿದ್ದಕ್ಕೂ ಸಾರ್ಥಕವಾಗುತ್ತದೆ. ಸೋತು ಸುಣ್ಣವಾಗಿರುವ ಕನ್ನಡ ಚಿತ್ರರಂಗಕ್ಕೆ ಸಂದೇಶ್ ನಾಗರಾಜ್ ಹಾಗೂ ಇ ಕೃಷ್ಣಪ್ಪ ಅವರಿಂದ ಒಂಚೂರಾದರೂ ಪ್ರಯೋಜನವಾಗಲಿ, ಮೇಲ್ಮನೆಯಲ್ಲಿ ಮೊಳಗಲಿ ಕನ್ನಡ ಚಿತ್ರರಂಗದ ಶಂಖ, ಜಾಗಟೆಗಳು ಎಂದು ಆಶಿಸೋಣ, ಏನಂತೀರಾ?


Click it and Unblock the Notifications











