ನಮ್ಮತ್ರಾನೂ ಕಡ್ಲೆಕಾಯಿ ಬೀಜ ಇದೆ ಅಂದ್ರೆ ಏನರ್ಥ?
ಗೋಲ್ಡನ್ ಗರ್ಲ್ ಎಂದೇ ಖ್ಯಾತವಾಗಿರುವ ರಮ್ಯಾ ಅಭಿನಯದ ಇತ್ತೀಚೆಗೆ 'ಸಿದ್ಲಿಂಗು' ಚಿತ್ರವನ್ನು ಸ್ವಾಗತ್ ಐನಾಕ್ಸ್ನಲ್ಲಿ ನೋಡಿದೆ. ಚಿತ್ರ ಚೆನ್ನಾಗಿದ್ದರೂ ಸಂಭಾಷಣೆಯಲ್ಲಿ ದ್ವಂದಾರ್ಥಗಳು ಇಣುಕಿರುವುದು ರಮ್ಯಾರ ಸಭ್ಯ ಅಭಿಮಾನಿಯಾಗಿ ಕೊಂಚ ಬೇಸರ ತರಿಸಿತು. ಏನೇ ಆಗಲಿ ರಮ್ಯಾ ಅವರು ಈ ರೀತಿಯ ಸಂಭಾಷಣೆಯನ್ನು ಒಪ್ಪಿಕೊಳ್ಳಬಾರದಿತ್ತು ಅನ್ನಿಸಿತು.
ರಮ್ಯಾ ಈ ಹಿಂದೆ 'ಜಾನಿ ಮೇರಾ ನಾಮ್' ಚಿತ್ರದಲ್ಲಿ ಐಟಂ ಸಾಂಗ್ ಮಾಡಿದ್ದರು. ಆಗಲೂ ರಮ್ಯಾರನ್ನು ಆರಾಧಿಸುವ ನಮ್ಮಂತವರಿಗೆ ಈ ರೀತಿಯ ಹಾಡು ಬೇಕಾಗಿರಲಿಲ್ಲ ಎನ್ನಿಸಿತ್ತು. ಬಳಿಕ ರಮ್ಯಾ ಇನ್ನು ಮುಂದೆ ಯಾವುದೇ ಐಟಂ ಹಾಡುಗಳಲ್ಲಿ ಅಭಿನಯಿಸಲ್ಲ ಎಂದು ಪ್ರಾಮಿಸ್ ಮಾಡಿದ್ದರು.
ಆದರೆ 'ಸಿದ್ಲಿಂಗು' ಚಿತ್ರದಲ್ಲಿ ರಮ್ಯಾ ಒಂದು ಕಡೆ "ನಾವು ಏನಕ್ಕೆ ಇಲ್ಲಿ ಬಂದಿದ್ದೇವೆ ಅಂತ ಗೊತ್ತಾ? ನಮ್ಮತ್ರಾನು ಕಡ್ಲೆಕಾಯಿ ಬೀಜ ಇದೆ ಅಂತ ತೋರ್ಸೋದಿಕ್ಕೆ" ಎನ್ನುತ್ತಾರೆ. ಪೊಲೀಸರ ಹಿತವಚನ ಹೀಗಿದೆ: "ಅದಕ್ಕೆ ಹೇಳೋದು ಈ ಕಾಳು-ಬೀಜಗಳ ಸಹವಾಸಕ್ಕೆ ಹೋಗ್ಬಾರ್ದು ಅಂತಾ".
ರಮ್ಯಾ ಅವರಿಗೆ ಈ ಡೈಲಾಗ್ ಹೇಳಬೇಕಾದರೆ ಅರ್ಥವಾಗಲಿಲ್ಲವಂತೆ. ಹಾಗಿದ್ದರೆ ಅರ್ಥವಾಗದ ಡೈಲಾಗ್ಗಳನ್ನು ಏಕೆ ಹೇಳಬೇಕಾಗಿತ್ತು? ಬಳಿಕ ಅರ್ಥವಾಯಿತು ಎಂದು ಅವರು ಪತ್ರಿಕೆಗಳಲ್ಲಿ ಹೇಳಿಕೊಂಡಿದ್ದಾರೆ. ಅರ್ಥವಾದ ಮೇಲಾದರೂ ಡೈಲಾಗ್ ಬದಲಾಯಿಸಬಹುದಿತ್ತಲ್ವಾ?
ಇನ್ನೊಂದು ಸನ್ನಿವೇಶದಲ್ಲಿ ಚಿತ್ರದ ನಾಯಕ ನಟ ಯೋಗೇಶ್, "ಸಾರಿ ಸಾರ್ ನಮ್ಮ ಚಂಬು ಒಂಥರಾ...ಲೋಟ ಕಂಡ ತಕ್ಷಣ ನೀರು ಸುರಿದು ಬಿಡುತ್ತೆ" ಅಂತಾರೆ. ಹಾಗೆಂದರೇನು? ಈ ಡೈಲಾಗ್ ನೇರ ಅರ್ಥಕ್ಕಿಂತಲೂ ದ್ವಂದ್ವಾರ್ಥವನ್ನೇ ಹೆಚ್ಚಾಗಿ ಪ್ರತಿಧ್ವನಿಸುತ್ತಿದೆ ಎನ್ನಿಸುವುದಿಲ್ಲವೇ? ರಮ್ಯಾ ಇನ್ನಾದರೂ ನಮ್ಮಂತ ಸಭ್ಯ ಅಭಿಮಾನಿಗಳಿಗೆ ನಿರಾಸೆ ಮೂಡಿಸದಿರಲಿ ಎಂದು ಆಶಿಸುತ್ತೇನೆ.


Click it and Unblock the Notifications











