'ವಿನಾಯಕ'ನಾಗಿ ಬೆಳ್ಳಿತೆರೆಗೆ ಅಂಬರೀಷ್ ಪುತ್ರ ನಿಜವೆ?
ಮಳವಳ್ಳಿ ಗಂಡು, ಕಲಿಯುಗ ಕರ್ಣ, ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆಯೇ? ಹೌದು ಎಂಬಂತಹ ಸುದ್ದಿ ಗಾಂಧಿನಗರದಲ್ಲಿ ಹೊಗೆಯಾಡುತ್ತಿದೆ. ಆದರೆ ಈ ಸುದ್ದಿಯನ್ನು ಸ್ವತಃ ಅಂಬರೀಷ್ ಅವರು ಅಲ್ಲಗಳೆದಿದ್ದು ಇದೆಲ್ಲಾ ಯಾರೋ ಹಬ್ಬಿಸಿರುವ ಸುಳ್ಳು ಸುದ್ದಿ ಎಂದಿದ್ದಾರೆ.
'ವಿನಾಯಕ' ಎಂಬ ಚಿತ್ರದ ಮೂಲಕ ಅಂಬರೀಷ್ ಪುತ್ರ ಅಭಿಷೇಕ್ ಬೆಳ್ಳಿತೆರೆಗೆ ಅಡಿಯಿಡಲಿದ್ದಾರಂತೆ ಎಂಬ ಸುದ್ದಿ ಕಳೆದೆರಡು ವಾರಗಳಿಂದ ಗಾಂಧಿನಗರದಲ್ಲಿ ಗಿರಕಿಹೊಡೆಯುತ್ತಿತ್ತು. ಇದು ತೆಲುಗಿನ 'ವಿನಾಯಕುಡು' ಚಿತ್ರದ ರೀಮೇಕ್ ಆಗಿದ್ದು. ಕನ್ನಡದ ಹೆಸರಾಂತ ನಿರ್ಮಾಪಕರೊಬ್ಬರು ಈಗಾಗಲೆ ಈ ಚಿತ್ರದ ರೀಮೇಕ್ ಹಕ್ಕುಗಳನ್ನು ಪಡೆದಿದ್ದಾರೆ.
ಆಚ್ಚರಿಯ ಸಂಗತಿ ಎಂದರೆ ಅಭಿಷೇಕ್ ತಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ರೀಮೇಕ್ ಹಕ್ಕುಗಳನ್ನು ಪಡೆದಿರುವ ನಿರ್ಮಾಪಕ ಪ್ರಶಾಂತ್ ಸಂಬರಗಿ ಅವರಿಗೆ ಗೊತ್ತಿಲ್ಲ. ಈ ಸುದ್ದಿ ಅವರ ಕಿವಿಗೂ ಬಿದ್ದಾಗ ಅವರು ಅಂಬರೀಷ್ ಗಮನಕ್ಕೆ ತಂದಿದ್ದಾರೆ.
"ಈ ರೀತಿಯ ವದಂತಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡ ಬಿಡ್ಲಾ" ಎಂದು ಅಂಬರೀಷ್ ಹೇಳಿದ್ದಾಗಿ ತಿಳಿದುಬಂದಿದೆ. ಅಭಿಷೇಕ್ ಇನ್ನೂ ಓದುತ್ತಿದ್ದಾನೆ. ಅವನ ಶಿಕ್ಷಣ ಮುಗಿಯುವವರೆಗೂ ಚಿತ್ರರಂಗಕ್ಕೆ ಬರುವುದಿಲ್ಲ ಎಂದಿದ್ದಾರೆ ಅಂಬರೀಷ್. ಅಂದಹಾಗೆ 2008ರಲ್ಲಿ ತೆರೆಕಂಡಿದ್ದ 'ವಿನಾಯಕುಡು' ಚಿತ್ರ ತೆಲುಗಿನಲ್ಲಿ ರು.18 ಕೋಟಿ ಬಾಚಿತ್ತು.


Click it and Unblock the Notifications











