ಥೂ ನನ್ಮಕ್ಕಳ ಗಂಡಸರಾ ನೀವು ಮೀಸೆ ಇದ್ದರೆ : ಉಪೇಂದ್ರ
ಪ್ರಬಲ, ಪರಿಣಾಮಕಾರಿ ಜನ ಲೋಕಪಾಲ ಮಸೂದೆಗೆ ಆಗ್ರಹಿಸಿ ಗಾಂಧಿವಾದಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ 12ನೇ ದಿನಕ್ಕೆ ಅಡಿಯಿಟ್ಟಿದೆ. ಭ್ರಷ್ಟಾಚಾರದ ವಿರುದ್ಧ ದೇಶದಾದ್ಯಂತ ರಣಕಹಳೆ ಮೊಳಗುತ್ತಿದೆ. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲೂ ಅಣ್ಣಾ ಹಜಾರೆಗೆ ಬೆಟ್ಟದಷ್ಟು ಬೆಂಬಲ ವ್ಯಕ್ತವಾಗಿದೆ.
ಶನಿವಾರ (ಆ.27) ಫ್ರೀಡಂ ಪಾರ್ಕಿನಲ್ಲಿ ಅಣ್ಣಾ ಚಳವಳಿಗೆ ರಿಯಲ್ ಸ್ಟಾರ್ ಉಪೇಂದ್ರಧುಮುಕಿದರು. ಅವರು ಮಾತನಾಡುತ್ತಾ, ಯಾರೂ ಸುಪ್ರೀಂ ಅಲ್ಲ. ಜನಗಳು ರೀ ಸುಪ್ರೀಂ. ಅಣ್ಣಾ ಹಜಾರೆ ಅವರಂತಹ ಲೀಡರ್ ಮತ್ತೆ ನಮಗೆ ಸಿಗಲ್ಲ. ಎಷ್ಟೋ ವರ್ಷಗಳ ಬಳಿಕ ಸಿಕ್ಕಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಅವರ ಹೋರಾಟವನ್ನು ಬೆಂಬಲಿಸೋಣ. ಬನ್ನಿ ಎಲ್ಲರೂ ಕೈ ಜೋಡಿಸೋಣ ಎಂದರು.
ಬೆಂಗಳೂರಿನ ಜನಸಂಖ್ಯೆ 1 ಕೋಟಿ. ಆದರೆ ಇದುವರೆಗೂ ಫ್ರೀಡಂ ಪಾರ್ಕ್ಗೆ ಬಂದು ಅಣ್ಣಾಗೆ ಬೆಂಬಲ ವ್ಯಕ್ತಪಡಿಸಿದ್ದು 5 ಲಕ್ಷ ಜನ ಮಾತ್ರ. ಉಳಿದ 95 ಲಕ್ಷ ಏನಾದರು. ಉಳಿದವರ್ಯಾರು ಅಣ್ಣಾರನ್ನು ಬೆಂಬಲಿಸುತ್ತಿಲ್ಲ ಎಂದಲ್ಲ. ರಾಜಕಾರಣಿಗಳು ಕಿಲಾಡಿಗಳು ಕಣ್ರಿ. ನೀವು ಅಣ್ಣಾಗೆ ಜೈ ಅನ್ನಲಿಲ್ಲ ಅಂದ್ರೆ ಅವರಿಗೆ ಬೆನಿಫಿಟ್. ಐವತ್ತು ಅರವತ್ತು ಜನ ಸೇರಿ ಮನೆಗಳ ಬಳಿಯೇ ಸಪೋರ್ಟ್ ಮಾಡಿ ಎಂದರು.
ನಮ್ಮ ದೇಶದಲ್ಲಿ ಶೇಕಡಾ 30ರಷ್ಟು ಮಂದಿ ಮಾತ್ರ ಕೆಲಸ ಮಾಡ್ತಾರೆ. ಉಳಿದ ಶೇಕಡಾ 70ರಷ್ಟು ಮಂದಿ ವೇಸ್ಟ್ ಪ್ರಾಡಕ್ಟ್ಸ್. ಇಂದು ನಾನು ನಿಜವಾದ ಸತ್ಪ್ರಜೆಗಳನ್ನು ನೋಡುತ್ತಿದ್ದೇನೆ ಎಂದು ಮಾತನಾಡುತ್ತಾ ಒಂದು ಕ್ಷಣ ಅಣ್ಣಾರ ಉಪವಾಸವನ್ನು ನೆನೆದು ಭಾವುಕರಾದರು.
ಇದೇ ಸಂದರ್ಭದಲ್ಲಿ ಅವರೇ ಬರೆದ ಒಂದು ಗೀತೆಯನ್ನೂ ಹಾಡಿ ಚಳವಳಿಗಾರರಿಗೆ ಮತ್ತಷ್ಟು ಸ್ಫೂರ್ತಿ ತುಂಬಿದರು. "ಥೂ ನನ್ಮಕ್ಕಳ ಗಂಡಸರಾ ನೀವು ಮೀಸೆ ಇದ್ದರೆ. ಎಪ್ಪತ್ತರಲ್ಲೂ ಎದ್ದು ಬಂದ್ರಲ್ಲೋ ಅಣ್ಣಾ ಹಜಾರೆ..." ಎಂದು ಹಾಡುತ್ತಿದ್ದರೆ ಅಭಿಮಾನಿಗಳ ಶಿಳ್ಳೆ ಕೇಕೆಗಳು ಮುಗಿಲು ಮುಟ್ಟಿದ್ದವು. ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಅಣ್ಣಾಗೆ ಬೆಂಬಲಕ್ಕೆ ಸಾಥ್ ನೀಡಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











