ಅರ್ಜುನ್ ಸಹೋದರ ಕಿಶೋರ್ ಸರ್ಜಾ ಇನ್ನಿಲ್ಲ
ಕಿಶೋರ್ ನಿರ್ದೇಶನದ 'ವಾಯುಪುತ್ರ'ಚಿತ್ರೀಕರಣ ಮುಗಿಸಿಕೊಂಡಿದೆ. ಮಾತಿನ ಮರುಲೇಪನ ಕಾರ್ಯ ಮಾತ್ರ ವಾಯುಪುತ್ರ ಚಿತ್ರಕ್ಕೆ ಬಾಕಿ ಇದೆ. ಕಳೆದ ಕೆಲದಿನಗಳಿಂದ ಅವರು ಕರುಳು ಬೇನೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅರ್ಜುನ್ ಸರ್ಜಾ ಸಹ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದರು.
ಮಗ ಸೂರಜ್ ಮತ್ತು ಹೆಂಡತಿ ಅಪರ್ಣಾ ಸೇರಿದಂತೆ ಅಪಾರ ಅಭಿಮಾನಿಗಳು ಬಂಧು ಬಳಗವನ್ನು ಕಿಶೋರ್ ಅಗಲಿದ್ದಾರೆ. ಕಿಶೋರ್ ಸರ್ಜಾ ನೇರ ನಡೆನುಡಿಗೆ ಹೆಸರಾಗಿದ್ದರು. ವಿಜಯ ರೆಡ್ಡಿ, ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಡಿ.ರಾಜೇಂದ್ರ ಬಾಬು, ವಿ.ಸೋಮಶೇಖರ್ ಅವರ ಬಳಿ ನಿರ್ದೇಶನದ ತಂತ್ರಗಳನ್ನು ಕಲಿತಿದ್ದರು.
ಮಕ್ಕಳ ಸಾಕ್ಷಿ, ಜೋಡಿ, ತುತ್ತಾ ಮುತ್ತಾ, ಬಾವ ಬಾಮೈದ ಸೇರಿದಂತ ಹಲವಾರು ಕನ್ನಡ ಚಿತ್ರಗಳನ್ನು ಕಿಶೋರ್ ಸರ್ಜಾ ನಿರ್ದೇಶಿಸಿದ್ದಾರೆ. ಅವರ ಅಕಾಲ ಮರಣದಿಂದ ಇಡೀ ಕನ್ನಡ ಚಿತ್ರರಂಗ ದಿಗ್ಭ್ರಾಂತವಾಗಿದೆ. ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ಜಕ್ಕನಹಳ್ಳಿಯ ನಿವಾಸದಲ್ಲಿ ಇಡಲಾಗಿದೆ. ಶಕ್ತಿ ಪ್ರಸಾದ್ ರ ಸಮಾಧಿ ಬಳಿಯಲ್ಲೇ ಕಿಶೋರ್ ಅವರ ಅಂತ್ಯಕ್ರಿಯೆಗಳು ನಡೆಯಲಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications












