ಏಪ್ರಿಲ್ 1 ಗನ್ ಮತ್ತೆ ತೆರೆಗೆ ಅಪ್ಪಳಿಸಲಿದೆ
ನಟ, ನಿರ್ದೇಶಕ ಹರೀಶ್ರಾಜ್ ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ಸಿನಿಮಾರಂಗವನ್ನು ಕೊಂಚ ಬೆಚ್ಚಿ ಬೀಳಿಸಿದ್ದು ಸುಳ್ಳಲ್ಲ. ಕೆಂಪೇಗೌಡ ಕಿಚ್ಚ ಸುದೀಪ್ ಆದಿಯಾಗಿ ಎಲ್ಲರೂ ಮಾನಸಿಕ ಒತ್ತಡಕ್ಕೆ ಒಳಗಾಗಿ ದುಡುಕಿ ನಿರ್ಧಾರಕ್ಕೆ ಬಂದಿದ್ದ ಹರೀಶ್ ರನ್ನು ಶಾಂತಗೊಳಿಸಿದ್ದರು. ಸಂತೋಷ್ ನಲ್ಲಿ ಕೆಂಪೇಗೌಡ ಬಂದ ಮೇಲೆ, ಗನ್ ಗತಿ ಏನಾಯಿತು ಎಂದು ಯಾರು ಕೇಳುವ ಗೋಜಿಗೆ ಹೋಗಿರಲಿಲ್ಲ. ಮುರುಳಿ ನಿರ್ಮಾಣದ ಗನ್ ಚಿತ್ರದಲ್ಲಿ ಮಲ್ಲಿಕಾ ಕಪೂರ್ , ನಿಖಿತಾ ನಾಯಕಿಯರಾಗಿ ಮಿಂಚಿದ್ದಾರೆ. ನೋಡಲಡ್ಡಿಯಿಲ್ಲ ಎಂಬ ರಿಪೋರ್ಟ್ ಇದೆ.
ಈಗ ಹರೀಶ್ ತಮ್ಮ ಚಿತ್ರವನ್ನು ಶತಾಯ ಗತಾಯ ಪ್ರೇಕ್ಷಕರಿಗೆ ತೋರಿಸಬೇಕೆಂದು ಪಣ ತೊಟ್ಟಿದ್ದಾರೆ. ಗನ್ ಚಿತ್ರ ಮತ್ತೆ ರಿಲೀಸ್ ಆಗ್ತಾ ಇದೆ. ಹಾದಿ ಬೀದಿಯಲ್ಲಿ ವಾಲ್ ಪೋಸ್ಟರ್ ನೋಡಿ ಹಳೆ ಪೋಸ್ಟರ್ ಬಿಡು ಎಂದು ಮುಂದೆ ಸಾಗಬೇಡಿ ಅಥವಾ ಬಿಡುಗಡೆ ದಿನಾಂಕ ನೋಡಿ "ಮುರ್ಖರ ದಿನ" ಫೂಲ್ ಮಾಡೊಕೆ ಮತ್ತೆ ರಿಲೀಸ್ ಅಂಥಾ ಇದ್ದಾರೆ ಎಂದು ಸುಮ್ಮನಿರಬೇಡಿ. ಚಿತ್ರ ನಿಜವಾಗಲೂ ಮತ್ತೆ ತೆರೆಕಾಣುತ್ತಿದೆ. ನೋಡಿದವರು ಮತ್ತೊಮ್ಮೆ ನೋಡಿ, ನೋಡದಿದ್ದವರು ಸಕುಟುಂಬ ಸಪರಿವಾರ ಸಮೇತ ಅರ್ಪಣ(ಅನುಪಮ)ಸೇರಿದಂತೆ ರಾಜ್ಯದಾದ್ಯಂತ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು ಚಿತ್ರವನ್ನು ಆನಂದಿಸಿ. ಇನ್ನು ಹೆಚ್ಚು ನಾವೇನೂ ಹೇಳುವುದಿಲ್ಲ. ಹರೀಶ್ ರಾಜ್ ಮಾಧ್ಯಮಗಳ ಮೂಲಕ ಕನ್ನಡದ ಪ್ರೇಕ್ಷಕ ಪ್ರಭುಗಳಿಗೆ ಮಾಡಿಕೊಂಡಿರುವ ಮನವಿಯನ್ನು ನಿಮಗೆ ಕೊಡುತ್ತಿದ್ದೇವೆ ಓದಿ:
ಕನ್ನಡ ಅಭಿಮಾನಿಗಳೇ,
ನಿಮ್ಮ ಮನೆ ಹುಡುಗ ಹರೀಶ್ ರಾಜ್ ನನ್ನು ಇಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಪೋಷಿಸಿ ನಾಯಕ, ನಿರ್ದೇಶಕನಾಗಿ ಬೆಳಸಿದ್ದೀರಿ, ಇದೀಗ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ "ಗನ್" ಕನ್ನಡ ಚಿತ್ರವನ್ನು ನಿಮಗೆ ತಿಳಿದಂತೆ ಅನೇಕ ಒತ್ತಡಗಳಿಂದಾಗಿ, ಉತ್ತಮ ಗಳಿಕೆಯಿದ್ದರೂ ಚಿತ್ರಮಂದಿರ(ಸಂತೋಷ್) ದಿಂದ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನಿರ್ದಯೆಯಿಂದ ತೆಗೆಯಲಾಗಿದ್ದರೂ ಸಹಾ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ ಅಭಿಮಾನಿ ದೇವರುಗಳಾದ ನೀವು ನನ್ನನ್ನು ಕೈ ಹಿಡಿದು ಬೆಳೆಸುವಿರೆಂಬ ಭರವಸೆಯಿಂದ ಈಗ ಮತ್ತೆ ನಿಮ್ಮೆಲ್ಲರ ಒತ್ತಾಯದ ಮೇರೆಗೆ "ಗನ್" ಚಿತ್ರವನ್ನು ಪುನಃ ರಾಜ್ಯಾದಾದ್ಯಂತ ಬಿಡುಗಡೆ ಮಾಡುತ್ತಿದ್ದೇವೆ.
ಅಭಿಮಾನಿಗಳು ಕನ್ನಡ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಕನ್ನಡ ಚಿತ್ರರಂಗವನ್ನು ಉಳಿಸಿ ಬೆಳಸಿ. ಹೊಸ ಕಲಾವಿದರು, ನಿರ್ದೇಶಕರು, ನಿರ್ಮಾಪಕರನ್ನು ಪ್ರೋತ್ಸಾಹಿಸಿ.-ಹರೀಶ್ ರಾಜ್ ಮತ್ತು ಗನ್ ಚಿತ್ರತಂಡ. ನಿಮ್ಮ ಅಭಿಪ್ರಾಯವನ್ನು ಅಥವಾ ಅನಿಸಿಕೆಗಳನ್ನು ತಪ್ಪದೇ ತಿಳಿಸಿ, ಅರುಣೋದಯ ಎಂಟರ್ ಪ್ರೈಸರ್ 9900 003011, ಇಮೇಲ್: [email protected]


Click it and Unblock the Notifications











