ಎಂವಿ ಕೃಷ್ಣಮೂರ್ತಿಗೆ 'ಶಾಂತಾರಾಂ' ಪ್ರಶಸ್ತಿ ಪ್ರದಾನ

ಮುಂಬೈ ಫಿಲಂ ವಿಭಾಗದ ಅಧ್ಯಕ್ಷ ಕುಲದೀಪ್ ಸಿನ್ಹಾ ಅವರು ಕೃಷ್ಣಸ್ವಾಮಿ ಅವರ ಮಲ್ಲೇಶ್ವರಂ ನಿವಾಸಕ್ಕೆ ತೆರಳಿ ರು.5 ಲಕ್ಷ ನಗದು ಬಹುಮಾನ, ಪ್ರಶಸ್ತಿ ಫಲಕವನ್ನು ಪ್ರದಾನ ಮಾಡಿದರು. ಶಾಂತಾರಾಂ ಪ್ರಶಸ್ತಿಗೆ ಆಯ್ಕೆಯಾದ ವಿಷಯವನ್ನು ಕೃಷ್ಣಸ್ವಾಮಿ ಅವರಿಗೆ ಆಯ್ಕೆ ಸಮಿತಿ ನೇರವಾಗಿ ತಿಳಿಸದೆ ಪ್ರಮಾದವೆಸಗಿತ್ತು. ಕಡೆಗೆ ಸಮಿತಿ ವಿಷಾದ ವ್ಯಕ್ತಪಡಿಸಿ ಶನಿವಾರ ಪ್ರಶಸ್ತಿಯನ್ನು ಕೃಷ್ಣಸ್ವಾಮಿ ಅವರಿಗೆ ನೀಡಿ ಗೌರವಿಸಿದೆ.
ಎಂಬತ್ತೊಂಬತ್ತರ ಹರೆಯದ ಕೃಷ್ಣಸ್ವಾಮಿ ಅವರು ಸದ್ಯಕ್ಕೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಮೂಲತಃ ಮೈಸೂರಿನವರಾದ ಕೃಷ್ಣಸ್ವಾಮಿ 1921ರಲ್ಲಿ 'ಪಾಪ ಪುಣ್ಯ' ಹಾಗೂ 1966ರಲ್ಲಿ 'ಸುಬ್ಬಾಶಾಸ್ತ್ರಿ' ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದರು. ಚಲನಚಿತ್ರಗಳಿಗಿಂತಲೂ ಹೆಚ್ಚಾಗಿ ಕೃಷ್ಣಸ್ವಾಮಿ ಅವರು ಗುರುತಿಸಿಕೊಂಡಿದ್ದು ಸಾಕ್ಷ್ಯಚಿತ್ರ ಕ್ಷೇತ್ರದಲ್ಲಿ.
ಮೋಕ್ಷಗುಂಡಂ ಸರ್ ಎಂ ವಿಶ್ವೇಶ್ವರಯ್ಯ ಅವರ ಸಾಕ್ಷ್ಯಚಿತ್ರವನ್ನು ತೆರೆಗೆ ತಂದ ಹೆಗ್ಗಳಿಕೆ ಕೃಷ್ಣಸ್ವಾಮಿ ಅವರದು. ವಿಶ್ವೇಶ್ವರಯ್ಯ ಅವರನ್ನು ಚಿತ್ರೀಕರಣಕ್ಕೆ ಒಪ್ಪಿಸಿ ಅವರ ಜೀವನ ಸಾಧನೆಗಳನ್ನು ಕೃಷ್ಣಸ್ವಾಮಿ ಸೆರೆಹಿಡಿದಿದ್ದರು. ಖ್ಯಾತ ವೀಣಾ ವಾದಕ ದೊರೈಸ್ವಾಮಿ ಅವರ ಸಾಕ್ಷ್ಯಚಿತ್ರವನ್ನು ಕೃಷ್ಣಸ್ವಾಮಿ ತೆಗೆದಿದ್ದಾರೆ.
ಕುದುರೆಮುಖ ಕುರಿತು ತೆಗೆದ ಸಾಕ್ಷ್ಯಚಿತ್ರ ಸಹ ಕೃಷ್ಣಸ್ವಾಮಿ ಅವರಿಗೆ ಹೆಸರು ತಂದಿತ್ತು. ಫಿಲ್ಮ್ ಡಿವಿಜನ್, ನ್ಯಾಷನಲ್ ಫಿಲ್ಮ್ ಡೆವಲಪ್ ಮೆಂಟ್ ಕಾರ್ಪೋರೇಷನ್, ಸೆನ್ಸಾರ್ ಮಂಡಳಿ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ತೀರ್ಪುಗಾರರಾಗಿಯೂ ಕೃಷ್ಣಸ್ವಾಮಿ ಕಾರ್ಯನಿರ್ವಹಿಸಿದ್ದಾರೆ.


Click it and Unblock the Notifications











