ಕತೆ ಕದಿಯುವ ಇಬ್ಬರು ಗೆಳೆಯರ ಚಿತ್ರದಲ್ಲಿ ಉಪ್ಪಿ, ಪ್ರೇಮ್
ಇದೇನಿದು ಎಂದು ಶೀರ್ಷಿಕೆ ನೋಡಿ ಗಲಿಬಿಲಿಯಾಗಬೇಡಿ. ಉಪೇಂದ್ರ ಕತೆಯನ್ನು ನಿರ್ದೇಶಕ ಪ್ರೇಮ್ ಯಾವಾಗ ಕದ್ದ ಎಂಬ ಪ್ರಶ್ನೆ ಉತ್ತರ ಸಿಗಬೇಕಾದರೆ ಸ್ವಲ್ಪ ದಿನ ಕಾಯಬೇಕು. ಏಕೆಂದರೆ ಇದೆಲ್ಲಾ ನಿಜವಾದ ಕತೆಯಲ್ಲ ತೆರೆಯ ಮೇಲಿನ ಕತೆ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಜೋಗಿ ಪ್ರೇಮ್ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿರುವ ಸುದ್ದಿ ಗೊತ್ತೇ ಇದೆ. ಹೊಸ ಸುದ್ದಿ ಏನೆಂದರೆ ಈ ಚಿತ್ರವನ್ನು ಉಪ್ಪಿ ಜೊತೆ 'ರಕ್ತಕಣ್ಣೀರು' ಮಾಡಿದ್ದ ಮುನಿರತ್ನ ನಿರ್ಮಿಸುತ್ತಿರುವುದು.
ಸದ್ಯಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಜೋಗಯ್ಯ' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರ ಫೆಬ್ರವರಿ 9ಕ್ಕೆ ಉಪ್ಪಿ, ಪ್ರೇಮ್ ಜೋಡಿಯ ಚಿತ್ರ ಸೆಟ್ಟೇರಲಿದೆ. ಆದರೆ ಆಕ್ಷನ್, ಕಟ್ ಯಾರು ಹೇಳಲಿದ್ದಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್.
ಮಲೆಯಾಳಂನಲ್ಲಿ ಸೂಪರ್ ಹಿಟ್ ದಾಖಲಿಸಿದ 'ಉದಯನಾನು ಥರಂ' (2005) ಚಿತ್ರದ ರೀಮೇಕ್ ಇದಾಗಿದೆ. ಮೋಹನ್ ಲಾಲ್ ಮತ್ತು ಶ್ರೀನಿವಾಸನ್ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ. ರೋಷನ್ ಆಂಡ್ರ್ಯೂ ನಿರ್ದೇಸಿದ್ದ ಈ ಚಿತ್ರ ಬಾಕ್ಸಾಫೀಸಲ್ಲಿ ಭರ್ಜರಿ ಸದ್ದು ಮಾಡಿತ್ತು. ಮಲಯಾಳಂ ಚಿತ್ರಗಳು ನೆಲಕಚ್ಚುತ್ತಿದ್ದ ಸಂದರ್ಭದಲ್ಲಿ ಈ ಚಿತ್ರ ವಿಜಯ ಪತಾಕೆ ಹಾರಿಸಿತ್ತು.
ಆಶ್ಚರ್ಯಕರ ಸಂಗತಿ ಎಂದರೆ ಈ ಚಿತ್ರ ಇಂಗ್ಲಿಷ್ನ ಎಡ್ಡಿ ಮರ್ಫಿ ಅವರ 'ಬೌಫಿಂಗರ್' ಚಿತ್ರದ ಸ್ಫೂರ್ತಿಯಾಗಿತ್ತು. ಇಬ್ಬರು ಗೆಳೆಯರಾದ ಉದಯನ್ ಮತ್ತು ರಾಜಪ್ಪನ್ ಸಿನಿಮಾ ನಿರ್ದೇಶಕ ಹಾಗೂ ನಟನಾಗಬೇಕೆಂಬ ಕನಸನ್ನು ಕಾಣುವ ಕತೆ ಇದು.
ಉದಯನ್ ರಚಿಸಿದ್ದ ಕತೆಯನ್ನು ರಾಜಪ್ಪನ್ ಕದ್ದು ಚಿತ್ರ ಮಾಡುತ್ತಾನೆ. ಆ ಚಿತ್ರ ಸೂಪರ್ ಹಿಟ್ ಆಗುತ್ತದೆ. ರಾಜಪ್ಪನ್ ರಾತ್ರೋ ರಾತ್ರಿ ಸೂಪರ್ ಸ್ಟಾರ್ ಆಗುತ್ತಾನೆ. ತನ್ನ ಹೆಸರನ್ನು ಸರೋಜ್ ಕುಮಾರ್ ಎಂದು ಬದಲಾಯಿಸಿಕೊಳ್ಳುತ್ತಾನೆ.
ಕೊಂಚ ಕಾಲ ಸರಿದ ಬಳಿಕ ಉದಯನ್ಗೆ ಚಿತ್ರವನ್ನು ನಿರ್ದೇಶಿಸುವ ಅವಕಾಶ ಬರುತ್ತದೆ. ಆ ಚಿತ್ರದ ನಾಯಕ ರಾಜಪ್ಪನ್. ಇಲ್ಲಿಂದ ಕತೆ ಹೊಸ ತಿರುವು ಪಡೆಯುತ್ತದೆ. ಇನ್ನೇನು ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿರುತ್ತದೆ ಆಗ ಉದಯನ್ ಹಾಗೂ ರಾಜಪ್ಪನ್ ನಡುವೆ ಮನಸ್ತಾಪ ಉಂಟಾಗಿ ಬೇರಾಗುತ್ತಾರೆ. ಚಿತ್ರೀಕರಣ ನಿಲ್ಲಿಸಲಾಗುತ್ತ್ತದೆ.
ರಾಜಪ್ಪನ್ ಇಲ್ಲದೆ ಚಿತ್ರೀಕರಿಸುವ ಪರಿಸ್ಥಿತಿ ಉದಯನ್ಗೆ ಎದುರಾಗುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ ಕುತೂಹಲಭರಿತವಾಗಿ ಸಾಗುತ್ತದೆ. ಈಗ ಅದೇ ಕತೆಯಲ್ಲಿ ಇಬ್ಬರು ನಟ ಕಮ್ ನಿರ್ದೇಶಕರು ಅಭಿನಯಿಸಲು ಒಪ್ಪಿರುವುದು ಗಾಂಧಿನಗರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. [ಉಪೇಂದ್ರ]


Click it and Unblock the Notifications











