ಹೊಸಬರ ಮೂಗಿಗೇ ತುಪ್ಪ ಸವರಿದ 'ಬಂಗಾರಿ' ರಾಗಿಣಿ
ಕಳ್ಳ ಮಳ್ಳ ಸುಳ್ಳ ಚಿತ್ರದಲ್ಲಿ ತುಪ್ಪದ ಹುಡುಗಿಯಾಗಿ ಕುಣಿದು ಆರಕ್ಕೇರಿರುವ ನಟಿ ರಾಗಿಣಿ ಈಗ ಆಡಿದ್ದೇ ಆಟ. ಹೊಸಬರ ಜೊತೆಯಂತೂ ರಾಗಿಣಿ ಮಾತೇ ಅಂತಿಮ ಎಂಬ ಹಂತಕ್ಕೆ ಹೋಗಿದೆ ಎಂಬ ಸುದ್ದಿ ಇದೀಗ ಬಟಾಬಯಲಾಗಿದೆ. ಸುದೀಪ್ ನಾಯಕತ್ವದ ವೀರ ಮದಕರಿಯಲ್ಲಿ ಕನ್ನಡಿಗರಿಗೆ ಮೋಡಿ ಮಾಡಿ ನಂತರ ಇಲ್ಲೇ ಭದ್ರವಾಗಿ ನೆಲೆಯೂರಿದ್ದಾರೆ ರಾಗಿಣಿ.
ಇಂತಿಪ್ಪ ರಾಗಿಣಿ, ಯೋಗೇಶ್ ಬಿಟ್ಟು ಮಿಕ್ಕೆಲ್ಲ ಹೊಸಬರ ತಂಡವಾಗಿರುವ 'ಬಂಗಾರಿ' ಚಿತ್ರದ ನಾಯಕಿ ಎಂಬುದು ಎಲ್ಲರಿಗೂ ಗೊತ್ತಿದೆ. ಗೊತ್ತಾಗಬೇಕಾದ ವಿಷಯ ಏನೆಂದರೆ, ಇತ್ತೀಚಿಗೆ ನಡೆದ ಬಂಗಾರಿ ಚಿತ್ರದ ಪ್ರೆಸ್ ಮೀಟ್ ಗೆ ಅರ್ಧ ಗಂಟೆ ತಡವಾಗಿ ಬಂದರು ಮಹಾರಾ(ಗಿ)ಣಿ. ಬಂದವರೇ 'ಶಿವ' ಚಿತ್ರದ ಶೂಟಿಂಗ್ ನಲ್ಲಿದ್ದೆ, ಬರುವುದು ತಡವಾಯಿತೆಂದು ಹೇಳಿ ತಾವೇ ನಕ್ಕು ಕುಳಿತರು.
ಎಲ್ಲರೂ ಅವರು ಬರುವುದನ್ನೇ ಕಾಯುತ್ತಿದ್ದರು. ಅಲ್ಲ, ಇಲ್ಯಾರೂ ಸೀನಿಯರ್ಸ್ ಇಲ್ಲ ಎಂದು ಹೀಗಾಡುವುದೇ ಎಂದು ಯಾರೋ ಅಂದ ಮಾತು ರಾಗಿಣಿ ಕಿವಿಗೆ ಬೀಳಲಿಲ್ಲವಂತೆ. ಬಂಗಾರಿ ಚಿತ್ರದ ನಿರ್ದೇಶಕ ಚಂದ್ರು, ನಿರ್ಮಾಪಕ ಯಲ್ಲಪ್ಪ ಎಲ್ಲರೂ ಹೊಸಬರೇ. ಆ ಚಿತ್ರಕ್ಕೆ ಯೋಗೇಶ್ ಗಿಂತಲೂ ರಾಗಿಣಿಯೇ ಮುಖ್ಯ. ಯಾಕೆಂದರೆ ಶಿರ್ಷಿಕೆಯೇ ಬಂಗಾರಿ!
ಇದೀಗ ಕನ್ನಡದ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿರುವ ರಾಗಿಣಿಯೇ ಅಂದಿನ ಸಮಾರಂಭದ ಪ್ರಮುಖ ಆಕರ್ಷಣೆ. ಅವರೇ ತಡವಾಗಿ ಬಂದರೆ ಹೇಗೆ? ಆದರೆ ಅರ್ಧ ಗಂಟೆ ತಡವಾಗಿ ಬಂದರೆ ತಪ್ಪು ಅಂತ ಹೇಗೆ ಹೇಳುವುದು? ಹಿಂದೊಮ್ಮೆ ತುಪ್ಪ ಬೇಕಾ ತುಪ್ಪ ಎಂದು ಕೇಳಿದ್ದ ನಟಿ, ಅಂದು ಬಂದಿದ್ದ ಜನರ ಮೂಗಿಗೇ ತುಪ್ಪ ಸವರಿದರೂ ಯಾರೂ ತಪ್ಪು ಅನ್ನುವ ಸ್ಥಿತಿಯಲ್ಲಿರಲಿಲ್ಲ. ಆದರೂ...ಬಂಗಾರಿ ಹೀಗೆ ಮಾಡಬಹುದೇ? (ಒನ್ ಇಂಡಿಯಾ ಕನ್ನಡ)


Click it and Unblock the Notifications











