ಡಾ.ರಾಜ್ ಅಂಚೆಚೀಟಿ ಭಾನುವಾರ ಬಿಡುಗಡೆ
ಕನ್ನಡಿಗರು ಇದುವರೆಗೆ 62 ಕರ್ನಾಟಕ ರಾಜ್ಯೋತ್ಸವ ಅಥವಾ ಕನ್ನಡ ರಾಜ್ಯೋತ್ಸವವನ್ನು ಕಂಡಿದ್ದಾರೆ. ಆದರೆ, ಬರುವ ಭಾನುವಾರ ನವೆಂಬರ್ 1ರಂದು ಆಚರಿಸಲಾಗುವ ರಾಜ್ಯೋತ್ಸವಕ್ಕೆ ಅಪರೂಪದ ಮಹತ್ವ ಬಂದಿದೆ. ಕನ್ನಡ ಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ಅವರ ಸ್ಮರಣಾರ್ಥ ಅಂದು ಬಿಡುಗಡೆಯಾಗಲಿರುವ ವಿಶೇಷ ಅಂಚೆಚೀಟಿ ಈ ಬಾರಿಯ ರಾಜ್ಯೋತ್ಸವಕ್ಕೆ ಹೊಸ ಮೆರುಗು, ಅರ್ಥ ಮತ್ತು ಸಾರ್ಥಕತೆಯನ್ನು ಕೊಟ್ಟಿದೆ ಎಂದರೆ ಅತಿಶಯೋಕ್ತಿಯಾಗದು.
ಕರ್ನಾಟಕ ವಾರ್ತಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನವೆಂಬರ್ 1ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ ರಾಜ್ ಕುಮಾರ್ ನೆನಪಿನ ಅಂಚೆಚೀಟಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಂಚೆಚೀಟಿ ಅನಾವರಣಕ್ಕೆ ಸಾಕ್ಷಿಯಾಗುತ್ತಾರೆ.
ಸಮಾರಂಭದಲ್ಲಿ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ, ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ಉಪ ಸಭಾಪತಿ ಕೆ. ರೆಹಮಾನ್ ಖಾನ್, ರೈಲ್ವೆ ರಾಜ್ಯ ಸಚಿವ ಕೆ.ಹೆಚ್. ಮುನಿಯಪ್ಪ, ಸಾರಿಗೆ ಸಚಿವ ಆರ್. ಆಶೋಕ್, ಅಬಕಾರಿ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ, ವಾರ್ತಾ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಸಂಸತ್ ಸದಸ್ಯ ಪಿ.ಸಿ. ಮೋಹನ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಶಿವಾಜಿನಗರ ಕ್ಷೇತ್ರ ಶಾಸಕ ಆರ್. ರೋಷನ್ ಬೇಗ್ ಅವರು ವಹಿಸಲಿದ್ದಾರೆ. ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಂ.ಪಿ.ರಾಜನ್ ಅವರು ಅಂಚೆಚೀಟಿ ಬಿಡುಗಡೆಮಾಡಲಿದ್ದಾರೆ. ಸಮಾರಂಭದಲ್ಲಿ ಪಾರ್ವತಮ್ಮ ರಾಜ್ಕುಮಾರ್ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











