ಅಪ್ಪು ಜೋಡಿಯಾಗಲಿರುವ ಜೆನಿಲಿಯಾ

ಸತ್ಯ ಇನ್ ಲವ್ ಬಾಕ್ಸಾಫೀಸಿನಲ್ಲಿ ಢಮಾರ್ ಆದ ಮೇಲೆ ಈ ಕಡೆ ತಲೆ ಹಾಕದ ಜೆನಿಲಿಯಾ , ಹಿಂದಿಯ ಜಾನೆ ತು ಯಾ ಜಾನೆ ನಾ ಚಿತ್ರ ಹಿಟ್ ಆದ ನಂತರ, ಬಾಲಿವುಡ್ ನಲ್ಲಿ ಬ್ಯುಸಿ ಆಗಿಬಿಟ್ಟಿದ್ದಾರೆ. ಒಂದೆರಡು ಹೊಸ ಸಿನಿಮಾಗಳನ್ನು ಒಪ್ಪಿಕೊಂಡು, ರಿತೇಶ್ ದೇಶ್ ಮುಖ್ ಜತೆ ಪಾರ್ಟಿಗಳಲ್ಲಿ ಕಾಣಿಸಿಕೊಂಡು ಗಾಸಿಪ್ ಗಳಿಗೆ ಗುರಿಯಾಗಿದ್ದಾರೆ. ಇಷ್ಟೆಲ್ಲಾ ಯೋಜನೆಗಳ ನಡುವೆ ಕನ್ನಡದತ್ತ ತಿರುಗಿ ನೋಡುವುದಿಲ್ಲ ಎನ್ನುತ್ತಿದ್ದ ಗಾಂಧಿನಗರ ಮಂದಿಯ ಮಾತನ್ನು ಸುಳ್ಳು ಮಾಡಿದ್ದಾರೆ ನಿರ್ಮಾಪಕ ಆದಿತ್ಯಬಾಬು.
ವಿಷ್ಯ ಅಂದ್ರೆ ತೆಲುಗು ಮೂಲದ ಆದಿತ್ಯ ಬಾಬು ಸದ್ಯ ತೆಲುಗಿನಲ್ಲಿ ಎರಡು ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ಎರಡರಲ್ಲೂ ಜೆನಿಲಿಯಾ ನಾಯಕಿ. ಹಾಗಾಗಿ ಪುನೀತ್ ಜತೆ ಕನ್ನಡದಲ್ಲಿ ಅಭಿನಯಿಸುವಂತೆ ಆಕೆಯನ್ನು ಪುಸಲಾಯಿಸಿ ಕರೆದುಕೊಂಡು ಬಂದಿದ್ದಾರೆ. ತೆಲುಗಿನಲ್ಲಿ ರಾಮ್ ಜತೆ ಜೆನಿಲಿಯಾ ಅಭಿನಯಿಸಿದ್ದ ರೆಡಿ ಎಂಬ ಚಿತ್ರವನ್ನು ಅದಿತ್ಯ ಕನ್ನಡಕ್ಕೆ ತರುತ್ತಿದ್ದಾರೆ. ಈಗಾಗಲೇ ಅತಡು ರಿಮೇಕ್ ನಲ್ಲಿ ನಟಿಸಲು ಒಪ್ಪಿಕೊಂಡಿರುವ ಪುನೀತ್ ಈ ಚಿತ್ರಕ್ಕೂ ಓಕೆ ಅಂದಿದ್ದಾರಂತೆ. ವರ್ಷದ ಸೂಪರ್ ಹಿಟ್ ಚಿತ್ರ ಗಜ ನಿರ್ದೇಶಿಸಿದ್ದ ಮಾದೇಶ ಅವರು ಈ ಚಿತ್ರವನ್ನು ನಿರ್ದೇಶಿಸುವ ಸಾಧ್ಯತೆಯಿದೆ.
ಕನ್ನಡ ಚಿತ್ರರಂಗಕ್ಕೆ ನಟನಾಗಿ ಪಾದಾರ್ಪಣೆ ಮಾಡಿದ ಆದಿತ್ಯ ಬಾಬು, ಅಂತೂ ಇಂತೂ ಪ್ರೀತಿ ಬಂತು ಚಿತ್ರ ಮಕಾಡೆ ಮಲಗಿದರೂ, ಕಂಗೆಟ್ಟಿಲ್ಲ. ರಮ್ಯಾ ಅಭಿನಯ, ವೀರಶಂಕರ್ ನಿರ್ದೇಶನ, ಸುಂದರವಾದ ಹಾಡುಗಳಿದ್ದ್ದರೂ ಚಿತ್ರ ಯಾಕೆ ಫ್ಲಾಪ್ ಆಯ್ತು ಅಂತಾ ತಿಳಿಯುತ್ತಿಲ್ಲ. ಪುನೀತ್ ಚಿತ್ರವಾದ ಮೇಲೆ ನಾನು ಮತ್ತೆ ನಟನೆಯತ್ತ ಹೊರಳುತ್ತೇನೆ ಎನ್ನುತ್ತಾರೆ ಆಶಾವಾದಿ ಆದಿತ್ಯ. ದುರಂತವೆಂದರೆ, ಇವರ ನಿರ್ಮಾಣದ ಇತ್ತೀಚಿನ ಚಿತ್ರ ಪರಮೇಶ ಪಾನ್ ವಾಲ ನೆಲಕಚ್ಚುವ ಸನ್ನಾಹದಲ್ಲಿದೆ.
ಅತಡು ಪುನೀತ್ ಜತೆ ತ್ರಿಶಾ ಎಂಟ್ರಿ ಖಚಿತ


Click it and Unblock the Notifications











