ಸಲ್ಮಾನ್ ಖಾನ್ ನಾನು ನನ್ನ ಕನಸು ಮಾಡ್ತಾನಾ ಹೇಳಿ?
"ಸತ್ಯಜಿತ್ ರೇ ಯಾರು? ಬರ್ಗ್ ಮನ್ ಯಾರು? ಈ ಹೆಸರುಗಳನ್ನು ಎಲ್ಲಿಂದ ತರ್ತೀರಿ?" ದಕ್ಷಿಣ ಭಾರತದ ನುರಿತ ಸಿನಿಮಾ ತಾರೆ ಪ್ರಕಾಶ್ ರೈರವರು ಸ್ಥಿಮಿತ ಕಳೆದುಕೊಂಡವರಂತೆ ಆಡಿದ ಈ ಮಾತುಗಳಿಗೆ ಕಾರಣಗಳು ಇಲ್ಲದೆ ಇರಲಿಲ್ಲ.
ಸಂವಾದ ಡಾಟ್ ಕಾಂ ಆಯೋಜಿಸಿದ್ದ 'ನಾನು ನನ್ನ ಕನಸು' ಚಿತ್ರತಂಡದೊಂದಿಗಿನ ಸಂವಾದದ ಕಾರ್ಯಕ್ರಮದಲ್ಲಿ ಶೇಖರಪೂರ್ಣ " ಚಿತ್ರಕತೆ, ಸಂಭಾಷಣೆ, ಅಭಿನಯ, ಬಣ್ಣ ಹಾಗು ಛಾಯಾಗ್ರಹಣ ಸರಿಯಾಗಿ ಮಿಳಿತವಾಗದೆ ಚಿತ್ರ ಜಾಳು ಜಾಳಾಗಿದೆ " ಎಂದು ಹೇಳಿದ್ದೇ ಪ್ರಕಾಶ ರೈ ರವರ ಉಗ್ರಧ್ವನಿಗೆ ಕಾರಣವಾಯಿತು.
ಉಳಿದಂತೆ ಸಂವಾದದಲ್ಲಿ ಕೇಳಿಬಂದ ಆಯ್ದ ತುಣುಕುಗಳಿವು:
ನೀವು ಸ್ಟಾರ್ ಅಲ್ಲವೆ? ಸ್ಟಾರ್ ಒಬ್ಬ ನಿರ್ದೇಶನಕ್ಕಿಳಿದಾಗ ಆತ ಈ ತೆರನಾದ ಸಂವಾದಕ್ಕೆ ಒಡ್ಡಿಕೊಳ್ಳುವುದು ಅನಿವಾರ್ಯವಲ್ಲವೆ?
ನಾನು ಸ್ಟಾರ್ ಅಲ್ಲವೆ ಅಲ್ಲ. ಯಾವ ಸ್ಟಾರ್ ಸಹಾ ಇಂಥ ಚಿತ್ರ ಮಾಡೋದಿಲ್ಲ. ಸಲ್ಮಾನ್ ಖಾನ್ ನಾನು ನನ್ನ ಕನಸು ಮಾಡ್ತಾನಾ ಹೇಳಿ?
ಕನ್ನಡ ಸಿನಿಮಾಗಳ ಕುರಿತಂತೆ ಟೆಕ್ಸ್ಟ್(ಪಠ್ಯ) ಬರಬೇಕು...
ಟೆಕ್ಸ್ಟ್ ಯಾಕೆ ಬೇಕು ಸ್ವಾಮಿ? ನಾನು ಟೆಕ್ಸ್ಟ್ ಇಲ್ಲದೆ ಸಿನಿಮಾ ನೋಡಿಕೊಂಡೇ ಬೆಳೆದದ್ದು.
ಇಷ್ಟು ಒಳ್ಳೆಯ ಪ್ರತಿಭಾವಂತರು ನೀವು. ರಿಮೇಕ್ ಯಾಕೆ ಮಾಡ್ಬೇಕು?
ರಿಮೇಕ್ ಅಂದ್ರೆ ಏನು ಸ್ವಾಮಿ? ಶೇಕ್ಸ್ ಫಿಯರ್ ನ ಕನ್ನಡದಲ್ಲಿ ಓದ್ತೀರಲ್ಲ... ಅದನ್ನು ಏನೆಂದು ಹೇಳ್ತೀರಿ...? ರಿಮೇಕ್ ಕುರಿತಂತೆ ವಿಮರ್ಶಕರಲ್ಲೇ ಗೊಂದಲಗಳಿವೆ.
| ರಿಮೇಕ್ ಅಂದ್ರೆ ಏನು ಸ್ವಾಮಿ? ಶೇಕ್ಸ್ ಫಿಯರ್ ನ ಕನ್ನಡದಲ್ಲಿ ಓದ್ತೀರಲ್ಲ... ಅದನ್ನು ಏನೆಂದು ಹೇಳ್ತೀರಿ...? | |
ಉತ್ತರವಿಲ್ಲ...ಪ್ರತಿಯಾಗಿ ಕ್ಯಾಮೆರಾಮೆನ್ ಅನಂತ್ ಅರಸ್ ಅವರನ್ನು ಬಾಯಿ ತುಂಬಾ ಹೊಗಳಿದರು.
ಚಿತ್ರಕ್ಕೆ ಕೈಟ್ಸ್ ಮಾದರಿಯಲ್ಲಿ ಪ್ರಚಾರ ಯಾಕೆ ಕೊಡಲಿಲ್ಲ?
ಪ್ರಚಾರ ನಿಮ್ಮನ್ನು ತಲುಪಿದೆಯಲ್ಲ... ಅದರಿಂದಾಗೇ ನೀವು ಸಿನೆಮಾ ನೋಡಿದ್ದೀರಿ ಮತ್ತು ನನ್ನೊಂದಿಗೆ ಸಂವಾದದಲ್ಲಿದ್ದೀರಿ. ನಾವು ಎಲ್ಲಾ ಪ್ರಯತ್ನವನ್ನೂ ಮಾಡಿದ್ದೇವೆ. ನಾನು ನಿರ್ದೇಶಕನಾಗಿ ನನ್ನ ಕೆಲಸವನ್ನು ಸಮರ್ಪಕವಾಗಿ ಮುಗಿಸಿಕೊಟ್ಟಿದ್ದೇನೆ. ಇದಕ್ಕೆ ಬಿ ಸುರೇಶರ ಒಪ್ಪಿಗೆಯ ಮುದ್ರೆ ದೊರೆಯಿತು.
ಚಿತ್ರದಲ್ಲಿ ಬೇರೆ ಪಾತ್ರಗಳ ಪೋಷಣೆಯಾಗಿಲ್ಲ.
ನಿಜ... ಕತೆ ಅಪ್ಪನ ಮೇಲೆ ಹೆಣೆದಿರುವುದರಿಂದ ಬೇರೆ ಪಾತ್ರಗಳ ವರ್ತನೆ, ಪೋಷಣೆ ಇತ್ಯಾದಿಗಳಿಗೆ ಪ್ರಾಮುಖ್ಯತೆ ಕಡಿಮೆ.
ಚಿತ್ರದಲ್ಲಿ ಭಿಕ್ಷುಕನ ಪಾತ್ರದ ಅನಗತ್ಯ ವೈಭವೀಕರಣ ಏಕೆ?
ಪ್ರೇಕ್ಷಕನನ್ನು ತೆರೆಯ ಮೇಲೆ ಹಿಡಿದಿಡುವ ಟ್ರಿಕ್ಕು ಅದು.
ನಂತರ ಸಂವಾದ ಪ್ರೇಕ್ಷಕರ ಕಡೆ ತಿರುಗಿದಾಗ ಬಹುತೇಕರು ತಮ್ಮನ್ನು ತಾವು ಈ ಚಿತ್ರದಲ್ಲಿ ಗುರುತಿಸಿಕೊಂಡೆವೆಂದು ಹೊಗಳಿದರು. ಚಿತ್ರ ಅದ್ಭುತ, ಶಾಂತ, ಸುಲಲಿತ ಧಾರೆ ಇತ್ಯಾದಿ ಹೊಗಳಿಕೆಗೆ ಪ್ರಕಾಶ್ ಕೈ ಮುಖದಲ್ಲಿ ಧನ್ಯಗೊಂಡ ಭಾವವಿತ್ತು.
ನಟ ರಾಜೇಶ್ ಧಾರಾವಾಹಿ ಮತ್ತು ಚಿತ್ರನಟನೆಯಲ್ಲಿರುವ ವ್ಯತ್ಯಾಸಗಳ ಬಗ್ಗೆ ಮಾತನಾಡಿದರು.ನಟ ರವಿ ಭಟ್ ಕಾರ್ಯಕ್ರಮ ನಿರೂಪಿಸಿದರು.ಸಂವಾದ ಡಾಟ್ ಕಾಂ ಕಾರ್ಯಕ್ರಮ ಆಯೋಜಿಸಿತ್ತು. ಅವಿರತ ತಂಡ ಕಾರ್ಯಕ್ರಮ ಸಹಕಾರ ನೀಡಿತ್ತು. ಕಾರ್ಯಕ್ರಮದಲ್ಲಿ ಬಿ ಸುರೇಶ್, ಶೈಲಜಾ ನಾಗ್, ಪ್ರಕಾಶ್ ರೈ, ರಾಜೇಶ್, ಬಾಲನಟಿ ಪ್ರಕೃತಿ, ಛಾಯಾಗ್ರಾಹಕ ಅನಂತ್ ಅರಸ್ ಉಪಸ್ಥಿತರಿದ್ದರು.


Click it and Unblock the Notifications











