ಮುಂಜಾನೆಗೆ ಗಣೇಶ್ ಸೂಕ್ತ ಆಯ್ಕೆ: ಎಸ್ ನಾರಾಯಣ್
ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ನಿರ್ದೇಶಕ ಎಸ್ ನಾರಾಯಣ್, ಇದೀಗ ತಮ್ಮ ಪುತ್ರ ಪಂಕಜ್ ಗಾಗಿ 'ಚೌಡಯ್ಯ' ಚಿತ್ರ ನಿರ್ದೇಶಿಸಲಿದ್ದಾರೆ. ಈ ಚಿತ್ರದ ಮುಹೂರ್ತದಂದು ನಾರಾಯಣ್, ಮಾರ್ಚ್ 2, 2012ರಂದು ಬಿಡುಗಡೆಗೆ ಸಜ್ಜಾಗಿರುವ ತಮ್ಮ ಚಿತ್ರ 'ಮುಂಜಾನೆ' ಬಗ್ಗೆ ಹೇಳಿಕೊಂಡರು.
"ಗೋಲ್ಡನ್ ಸ್ಟಾರ್ ಗಣೇಶ್, ಮುಂಜಾನೆ ಚಿತ್ರಕ್ಕೆ ಸೂಕ್ತ ಆಯ್ಕೆ. ಕಥೆ ಮಾಡುವಾಗಲೇ ನನ್ನ ಮನಸ್ಸಿಗೆ ಬಂದವರು ನಟ ಗಣೇಶ್. ಚಿತ್ರಕಥೆ ಮಾಡಿ, ಗಣೇಶ್ ಮುಂದೆ ನಾನು ಹೇಳುತ್ತಿದ್ದಂತೆ ಆತ ಯಾವುದೇ ಪ್ರಶ್ನೆಯನ್ನೂ ಕೇಳದೇ, 'ನಾನು ಶೂಟಿಂಗ್ ಗೆ ಯಾವಾಗ ಬರಲಿ?" ಎಂದಷ್ಟೇ ಕೇಳಿದರು. ಅದೇ ನನಗೆ ಇಷ್ಟವಾಗಿದ್ದಲ್ಲದೇ, ಗಣೇಶ್ ಅವರಿಗಾಗಿ ಹೆಚ್ಚಿನ ಆಸಕ್ತಿವಹಿಸಿ ಕೆಲಸಮಾಡಲೂ ನೆರವಾಯ್ತು" ಎಂದರು.
ಮುಂಜಾನೆ ಚಿತ್ರದಲ್ಲಿ ಗಣೇಶ್, ಮೂರು ಶೇಡ್ಸ್ ಇರುವ ಪಾತ್ರವನ್ನು ಅಚ್ಚುಕಟ್ಟಾಗಿ ಹಾಗೂ ಅಮೋಘವಾಗಿ ಅಭಿನಯಿಸಿದ್ದಾರೆ. ಈ ಪಾತ್ರಕ್ಕೆ ಗಣೇಶ್ ಬಿಟ್ಟರೆ ಬೇರೆ ಯಾರೂ ನ್ಯಾಯ ಸಲ್ಲಿಸಲು ಸಾಧ್ಯವಿರಲಿಲ್ಲ ಎಂಬಷ್ಟು ಚೆನ್ನಾಗಿ ನಟಿಸಿದ್ದಾರೆ" ಎಂದಿದ್ದಾರೆ ಕಲಾಸಾಮ್ರಾಟ್ ಎಸ್ ನಾರಾಯಣ್. ಅವರ ಈ ಹೇಳಿಕೆಯಿಂದ ಸಹಜವಾಗಿ ಗಣೇಶ್ ನಟನೆ ನೋಡಲು ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಲೇಬೇಕಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











