ಬೆಂಗಳೂರಲ್ಲಿ 3 ಲಕ್ಷ ಹಣ ಕಳೆದುಕೊಂಡ ಎಸ್.ನಾರಾಯಣ್
ಸ್ಯಾಂಡಲ್ ವುಡ್ನ ಖ್ಯಾತ ನಿರ್ದೇಶಕ, ನಟ ಎಸ್.ನಾರಾಯಣ್ ಬೆಂಗಳೂರಿನಲ್ಲಿ ಹಣ ಮತ್ತು ಮಹತ್ವದ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಜುಲೈ 29ರ ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವಿಜಯನಗರದ ಮಾರುತಿ ಮಂದಿರದ ಬಳಿ ಕಾರು ನಿಲ್ಲಿಸಿ ಎಸ್ ನಾರಾಯಣ್ ಬ್ಯಾಂಕ್ ತೆರಳಿದ್ದರು. ಆಗ ಕಳ್ಳರು ಕೈಚಳಕ ತೋರಿಸಿದ್ದಾರೆ. [ಸುದೀಪ್ ಪತ್ನಿಯ ಕಾರಿನಲ್ಲಿ ಕಳ್ಳತನ]

ಕಾರಿನಲ್ಲಿದ್ದ ಮೂರು ಲಕ್ಷ ರೂ. ಹಣ ಮತ್ತು ಮಹತ್ವದ ದಾಖಲೆಗಳು ಕಾಣೆಯಾಗಿವೆ ಎಂದು ಎಸ್.ನಾರಾಯಣ್ ವಿಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಕಲಿ ಕೀ ಬಳಸಿ ಕಾರಿನ ಬಾಗಿಲು ತೆರದ ಕಳ್ಳರು ಸೂಟ್ಕೇಸ್ ಅಪಹರಿಸಿದ್ದಾರೆ ಎಂದು ಎಸ್.ನಾರಾಯಣ್ ದೂರಿನಲ್ಲಿ ತಿಳಿಸಿದ್ದಾರೆ. ಮಾರುತಿ ಮಂದಿರದ ಬಳಿ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ.
ಸುದೀಪ್ ಪತ್ನಿ ಹಣ ಕಳೆದುಕೊಂಡಿದ್ದರು : 2013ರಲ್ಲಿ ನಟ ಸುದೀಪ್ ಅವರ ಪತ್ನಿ ಪ್ರಿಯಾ ಕಾರಿನಲ್ಲಿದ್ದ ಹಣವನ್ನು ಕಳ್ಳರು ದೋಚಿದ್ದರು. ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಕಾರು ನಿಲ್ಲಿಸಿ ಸ್ಥಳೀಯ ಮಾಲ್ ಬಳಿಗೆ ತೆರಳಿದ್ದ ಅವರು ವಾಪಸ್ ಬರುವಷ್ಟರಲ್ಲಿ ಕಾರಿನಲ್ಲಿದ್ದ ಫೋನ್, ಹಣ ಮತ್ತು ಚಿನ್ನಭರಣ ಕಳುವಾಗಿತ್ತು.


Click it and Unblock the Notifications











