ಚಿಂಗಾರಿಗೆ ಪ್ರೇಕ್ಷಕರಿಂದ ಪ್ರಶಂಸೆಯ ಸುರಿಮಳೆ
ದರ್ಶನ್ ನಾಯಕತ್ವ ಹಾಗೂ ಎ. ಹರ್ಷ ನಿರ್ದೇಶನದ 'ಚಿಂಗಾರಿ' ಚಿತ್ರಕ್ಕೆ ರಾಜ್ಯದೆಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿನ್ನೆ ರಾತ್ರಿಯಿಂದಲೇ ದರ್ಶನ್ 'ಕಟೌಟ್'ಗೆ ಹಾರ ಸಮರ್ಪಣೆ ಹಾಗೂ ಹಾಲಿನ ಅಭಿಷೇಕ ಮಾಡುತ್ತಿದ್ದ ಅವರ ಅಭಿಮಾನಿಗಳು ಇಂದು ಚಿತ್ರ ನೋಡಿ ತುಂಬಾ ಖುಷಿಯಾಗಿದ್ದಾರೆ. ಕಾರಣ, ಚಿತ್ರ ಚೆನ್ನಾಗಿದೆ. ಒಳ್ಳೆಯ ಪ್ರತಿಕ್ರಿಯೆ ಎಲ್ಲೆಡೆ ಕೇಳಿಬರುತ್ತಿದೆ. ದರ್ಶನ್ ಅಭಿಮಾನಿಗಳ ಹೊರತಾಗಿಯೂ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಿದೆ.
ಚಿಂಗಾರಿ ನೋಡಿ ಹೊರಬಂದ ಪ್ರೇಕ್ಷಕರಿಂದ "ಚಿತ್ರ ತಂಬಾ ಚೆನ್ನಾಗಿದೆ" ಎಂಬ ಅನಿಸಿಕೆ ವ್ಯಕ್ತವಾಗಿದೆ. ಎಲ್ಲೆಡೆ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಸಹಜವಾಗಿಯೇ ಚಿತ್ರತಂಡ ಖುಷಿಖುಷಿಯಾಗಿದೆ. ಪ್ರಮುಖ ಚಿತ್ರಮಂದಿರ 'ಅನುಪಮ'ದಲ್ಲಿ ಸೇರಿದ್ದ ಚಿತ್ರದ ಬಹಳಷ್ಟು ಕಲಾವಿದರು ಪರಸ್ಪರ ಖುಷಿಯನ್ನು ಹಂಚಿಕೊಂಡ ದೃಶ್ಯ ಕಂಡುಬಂತು. ಹೊರಬರುತ್ತಿದ್ದ ಪ್ರೇಕ್ಷಕರ ಹೊಗಳಿಕೆ, ಕರತಾಡನ ಮುಗಿಲುಮುಟ್ಟಿತ್ತು.
ಒಟ್ಟಿನಲ್ಲಿ, ಕನ್ನಡ ಸಿನಿಪ್ರೇಕ್ಷಕರಿಗೆ ಕಳೆದ ವರ್ಷದ ಕೊನೆಯಲ್ಲಿ ಬಂದ ವಿಷ್ಣುವರ್ಧನ, ಶೈಲೂ, ಸಿದ್ಲಿಂಗು ಹೀಗೆ ಬೇರೆ ಬೇರೆ ಶೈಲಿಯ ಪ್ರೇಕ್ಷಕರನ್ನು ಸೆಳೆಯಬಲ್ಲ ಚಿತ್ರಗಳು ಬರುತ್ತಿವೆ. ಬಿಗ್ ಸ್ಟಾರ್ ಹಾಗೂ ಬಿಗ್ ಬಜೆಟ್ ಚಿತ್ರ 'ಚಿಂಗಾರಿ' ಮೂಲಕ ಹೊಸ ವರ್ಷದ ಪ್ರಾರಂಭದಲ್ಲೇ ಕನ್ನಡಚಿತ್ರವೊಂದು ಪ್ರೇಕ್ಷಕರ ಪಾಲಿಗೆ ಹಬ್ಬದೂಟವಾಗಿದೆ. ಹೀಗೆ ಒಂದರಹಿಂದೊಂದು ಒಳ್ಳೊಳ್ಳೆಯ ಸಿನಿಮಾಗಳು ಬರುತ್ತಿರಲಿ ಎಂಬ ಕನ್ನಡ ಸಿನಿಪ್ರೇಕ್ಷಕರ ಒಕ್ಕೊರಲಿನ ಕೂಗು ಎಲ್ಲಡೆ ಕೇಳಿ ಬರುತ್ತಿದೆ.


Click it and Unblock the Notifications











