ಚಿತ್ರ ನಿರ್ದೇಶನಕ್ಕೆ ನವರಸ ನಾಯಕ ಜಗ್ಗೇಶ್ ಎಂಟ್ರಿ
ನಟ, ನಿರ್ಮಾಪಕ ಕಮ್ ರಾಜಕಾರಣಿ ಜಗ್ಗೇಶ್ ಈಗಾಗಲೆ ಗಾಯಕರಾಗಿ ಒಂದೆರಡು ಹಾಡುಗಳನ್ನೂ ಹಾಡಿ ಗುರುತಿಸಿಕೊಂಡದ್ದು ಉಂಟು. 'ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ', 'ಭಂಡ ನನ್ನ ಗಂಡ' (ಅತಿಂಥ ಗಂಡು ನಾನಲ್ಲ...) ಚಿತ್ರಗಳಲ್ಲಿ ಜಗ್ಗೇಶ್ ಹಾಡಿ ಕುಣಿದಿದ್ದರು. ಆದರೆ ಅವರಿಗೆ ಇದುವರೆಗೂ ಆಕ್ಷನ್ ಕಟ್ ಹೇಳುವ ಸೌಭಾಗ್ಯ ಸಿಕ್ಕಿರಲಿಲ್ಲ.
ಈಗವರು ತಮ್ಮ ಪುತ್ರ ಗುರುರಾಜ್ಗೆ ಮೊಟ್ಟಮೊದಲ ಬಾರಿಗೆ ಲೈಟ್ಸ್ ಕ್ಯಾಮೆರಾ ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಈ ಚಿತ್ರವನ್ನು ಗುರುರಾಜ್ ಬ್ಯಾನರ್ಸ್ ಲಾಂಛನದಲ್ಲಿ ಜಗ್ಗೇಶ್ ನಿರ್ಮಿಸುತ್ತಿದ್ದು ಇತ್ತೀಚೆಗಷ್ಟೇ ಪೂಜೆ, ಹೋಮವನ್ನೂ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದರು. ಇದೀಗ ರಾಯರ ಅನುಗ್ರಹಕ್ಕಾಗಿ ಜಗ್ಗೇಶ್ ಮಂತ್ರಾಲಯಕ್ಕೂ ಪಾದ ಬೆಳೆಸಿದ್ದಾರೆ.
ಗುರುರಾಜ್ ಅಭಿನಯದ 'ಗಿಲ್ಲಿ' ಹಾಗೂ 'ಸಂಕ್ರಾಂತಿ' ಚಿತ್ರಗಳು (ಎರಡೂ ರೀಮೇಕ್) ಬಾಕ್ಸಾಫೀಸಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಈಗ ಹೇಗಾದರೂ ಮಾಡಿ ತಮ್ಮ ಮಗನಿಗೆ ಒಂದು ಬ್ರೇಕ್ ಕೊಡಬೇಕು ಎಂದು ಜಗ್ಗೇಶ್ ತೀರ್ಮಾನಿಸಿದಂತಿದೆ. ಇದಕ್ಕಾಗಿ ಮಗನನ್ನು ಬ್ಯಾಂಕಾಕ್ಗೆ ಕಳುಹಿಸಿ ಕಿಕ್ ಬಾಕ್ಸಿಂಗ್ನಲ್ಲೂ ತರಬೇತಿ ಕೊಡಿಸಿದ್ದಾರೆ. ಚಿತ್ರದ ವಿವರಗಳು ಇನ್ನಷ್ಟೇ ಹೊರಬೀಳಬೇಕು. (ಏಜೆನ್ಸೀಸ್)


Click it and Unblock the Notifications











