ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅಭಿಮಾನಿಗಳ ಸಾಗರ
ಕನ್ನಡ ಚಿತ್ರರಂಗ ಕಂಡ ಅನುಪಮ ನಟ ವಿಷ್ಣುವರ್ಧನ್. ಅವರು ಕನ್ನಡ ಚಿತ್ರರಸಿಕರನ್ನು ಅಗಲಿ ಇಂದಿಗೆ (ಡಿ.30) ಒಂದು ವರ್ಷವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿನ ಎರಡು ಎಕರೆ ಸ್ಥಳದಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಡಿಗಲ್ಲು ಹಾಕಲಿದ್ದಾರೆ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಸ್ಥಳದಲ್ಲಿ ರಕ್ತದಾನ, ನೇತ್ರದಾನದಂತಹ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ವಿಷ್ಣು ನೆನಪಿನಾರ್ಥ ಆರ್ಯೋಜಿಸಿರುವ ಶಿಬಿರದಲ್ಲಿ ಆರೋಗ್ಯ ತಪಾಸಣೆ, ದಂತ ತಪಾಸಣೆ, ಕಣ್ಣಿನ ಪರೀಕ್ಷೆ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮಹತ್ತರ ಕಾರ್ಯಕ್ಕೆ ರೋಟರಿ ಇಂಟರ್ನ್ಯಾಷನಲ್, ಹಾಲಪ್ಪ ಫೌಂಡೇಷನ್, ಮಣಿಪಾಲ್ ಆಸ್ಪತ್ರೆ, ಯುನಿಟಿ ಹೆಲ್ಪ್ಲೈನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಶಂಕರ ನೇತ್ರಾಲಯ, ವಿಕ್ಟೋರಿಯ ಆಸ್ಪತ್ರೆಯ ತಜ್ಞ ವೈದ್ಯರು ಕೈಜೋಡಿಸಿದ್ದಾರೆ.
ಇಸಿಜಿ ವ್ಯಾನ್, ಕಾರ್ಡಿಯೋ ವ್ಯಾನ್ ಮತ್ತು ಆಂಬುಲೆನ್ಸ್ ಕೂಡ ಸ್ಥಳದಲ್ಲೇ ಇರುತ್ತವೆ. ವಿಷ್ಣು ಅಭಿಮಾನಿಗಳು ಹಮ್ಮಿಕೊಂಡಿರುವ ಮೌನ ಮೆರವಣಿಗೆಯ ಪಾದಯಾತ್ರೆ ಈಗಾಗಲೆ ಅಭಿಮಾನ್ ಸ್ಟುಡಿಯೋಗೆ ತಲುಪಿದೆ. ಮೌನ ಮೆರವಣಿಗೆಯ ಪಾದಯಾತ್ರೆಯು ಬೆಂಗಳೂರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದಇಂದು ಬೆಳಗ್ಗೆಯೇ ಆರಂಭವಾಗಿತ್ತು.
ಇದೇ ಸಂದರ್ಭದಲ್ಲಿ 1000 ಬಲೂನುಗಳನ್ನು ಗಾಳಿಯಲ್ಲಿ ಹಾರಿಬಿಡಲಾಯಿತು. ಡಾ.ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಸೇರಿದಂತೆ ವಿಷ್ಣು ಕುಟುಂಬವರು ಮೌನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕನ್ನಡದ ಹೊಸ ಟಿವಿ ವಾಹಿನಿ 'ಜನಶ್ರೀ' ಕೂಡ ವಿಷ್ಣು ಅವರ ಪುಣ್ಯ ಸ್ಮರಣೆಗೆ ನೆರವಾಗುತ್ತಿರುವುದು ವಿಶೇಷ. ಡಿಸೆಂಬರ್ 30 ಮಧ್ಯಾಹ್ನ 12 ಗಂಟೆಗೆ ವಿಷ್ಣು ಸ್ಮಾರಕಕ್ಕೆ ಮುಖ್ಯಮಂತ್ರಿಗಳು ಅಡಿಗಲ್ಲು ಹಾಕಲಿದ್ದಾರೆ. [ವಿಷ್ಣುವರ್ಧನ್]


Click it and Unblock the Notifications











