ರಾವಣನಿಗೆ ದಕ್ಕಲಿಲ್ಲ ಅಧರಾಮೃತದ ಸಿಹಿ!
ನಟ ಸಂತೋಷ್ ಅವರನ್ನು ಉತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಹೊಸ ಚಿತ್ರದಲ್ಲಿ ನಾಯಕ ನಟನೂ ಆಗಿರುವ ಸಂತೋಷ್ ಕನಸುಗಳು ಒಂದೊಂದೇ ಅರಳ ತೊಡಗಿವೆ. ಇದೀಗ ಎರಡನೇ ನಾಯಕ ನಟನಾಗಿ ಅಭಿನಯಿಸಿರುವ 'ರಾವಣ' ಚಿತ್ರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.
ರಾವಣ ಚಿತ್ರದ ಮುಖ್ಯ ಪಾತ್ರಧಾರಿ ಯೋಗೀಶ್ ಅಲಿಯಾಸ್ ಲೂಸ್ ಮಾದ ಎಂಬುದು ಗೊತ್ತೇ ಇದೆ. ಈ ಚಿತ್ರದಲ್ಲಿ ಸಂತೋಷ್ ಮುಖ್ಯಪಾತ್ರದಲ್ಲಿ ನಟಿಸಿರುವುದು ವಿಶೇಷ. ರಾವಣ ಚಿತ್ರದ ನಾಯಕಿ ಸಂಚಿತಾ ಪಡುಕೋಣೆ ಗೆಳೆಯನಾಗಿ ಸಂತೋಷ್ ಕಾಣಿಸಲಿದ್ದಾರೆ.
ಚಿತ್ರದ ನಾಯಕಿಗೆ ತುಟಿಗೆ ತುಟಿ ಒತ್ತಿ ಚುಂಚಿಸುವ ದೃಶ್ಯವೊಂದಿದೆ. ಈ ಅಧರಾಮೃತ ಸವಿಯುವ ಅದೃಷ್ಟ ಚಿತ್ರದ ನಾಯಕ ನಟ ಯೋಗೀಶ್ ಗೆ ಒಲಿಯದೆ ಎರಡನೇ ನಾಯಕ ನಟ ಸಂತೋಷ್ ಗೆ ಒಲಿದಿದೆ. ತಮಿಳಿನ ಕಾದಲ್ ಕೊಂಡೇನ್ ಚಿತ್ರ ರೀಮೇಕ್ 'ರಾವಣ'. ಚಿತ್ರದ ಹಾಡೊಂದರಲ್ಲೂ ಸಂತೋಷ್ ನಾಯಕಿಯೊಂದಿಗೆ ಕುಣಿದಿದ್ದಾರೆ.
ಮೂಲ ಚಿತ್ರಕ್ಕೆ ಹೋಲಿಸಿದರೆ ರಾವಣ ಚಿತ್ರದಲ್ಲಿ ಸಂತೋಷ್ ಗೆ ಉತ್ತಮ ಪಾತ್ರ ದೊರೆತಿರುವ ಬಗ್ಗೆ ಗಾಂಧಿನಗರದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ರಾವಣ ಚಿತ್ರದಲ್ಲಿ ''ನಿನ್ನ ಮನೆವರೆಗೂ...''ಹಾಗೂ ''ಚಕ್ಲಿ ನಿಪ್ಪಟ್ಟು...'' ಎಂಬ ಹಾಡುಗಳು ಈಗಾಗಲೇ ಹಿಟ್ ಆಗಿವೆ. ಪ್ರೇಕ್ಷಕರ ಬಾಯಲಿ ಚಿತ್ರದ ಹಾಡುಗಳು ನಲಿದಾಡುತ್ತಿರುವುದೇ ಇದಕ್ಕೆ ಸಾಕ್ಷಿ.
ಯೋಗೀಶ್ ನಟನೆಯ ಚಿತ್ರಗಳ ಪೈಕಿ ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗಲಿದೆ ಎಂಬ ವಿಶ್ವಾಸ ಈಗಾಗಲೇ ವ್ಯಕ್ತವಾಗಿದೆ. ರಾವಣ ಚಿತ್ರ ಯೋಗಿಗೆ ಹೊಸ ತಿರುವು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಅಂದಹಾಗೆ ಈ ಶುಕ್ರವಾರ (ಡಿಸೆಂಬರ್ 4) ರಾವಣ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂಬುದು ನಿಮ್ಮ ಗಮನಕ್ಕಿರಲಿ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











