ನೀವೂ ಹೇಳಬಹುದು ನಮಿತಾ ಐ ಲವ್ ಯೂ ಅಂತ!
ದುಂಡು ಮಲ್ಲಿಗೆ ನಮಿತಾ ಮತ್ತೆ ಕನ್ನಡ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ. ಕ್ರೇಜಿ ಸ್ಟಾರ್ ಚಿತ್ರಗಳನ್ನು ಬಿಟ್ಟು ಬೇರೆಯವರ ಜೊತೆ ಕನ್ನಡದಲ್ಲಿ ನಟಿಸುವುದಿಲ್ಲ ಎಂದಿದ್ದ ನಮಿತಾ ಈಗ ಸದ್ದಿಲ್ಲದಂತೆ ಎರಡು ಕನ್ನಡ ಚಿತ್ರಗಳನ್ನು ಒಪ್ಪಿದ್ದಾರೆ. ಆ ಎರಡು ಚಿತ್ರಗಳಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಇಲ್ಲ ಎಂಬುದು ಸುದ್ದಿ.
ತೆಲುಗಿನಲ್ಲಿ ಭಾರಿ ಯಶಸ್ಸನ್ನು ದಾಖಲಿಸಿದ 'ದುರ್ಯೋಧನ' ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ ಸಾಯಿ ಪ್ರಕಾಶ್. ಚಿತ್ರದ ಹೆಸರು 'ಭಗವಂತ'. ಈ ಚಿತ್ರದ ನಾಯಕನಟ ಸಾಯಿ ಕುಮಾರ್. ನಮಿತಾ ಅಭಿನಯಿಸಲಿರುವ ಮತ್ತೊಂದು ಚಿತ್ರದ ಹೆಸರು ಒಂಚೂರು ಭಿನ್ನವಾಗಿದೆ 'ನಮಿತಾ ಐ ಲವ್ ಯೂ'. ಈ ಚಿತ್ರವನ್ನು ರವಿತೇಜ ರೆಡ್ಡಿ ಎಂಬುವವರು ಜಯಸಿಂಹ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ.
ಸಂಗೀತ, ಸಂಭಾಷಣೆ, ಕತೆ, ಚಿತ್ರಕಥೆ ಹಾಗೂ ನಿರ್ದೇಶನದ ಭಾರಿ ಹೊರೆಯನ್ನು ನಿರ್ಮಾಪಕರೇ ಹೊತ್ತಿರುವುದು ವಿಶೇಷ. ಎಂ ಎಸ್ ಪಾಳ್ಯದ ಸಂಭ್ರಮ ಕಾಲೇಜಿನಲ್ಲಿ ಚಿತ್ರೀಕರಣ ನಡೆಯಲಿದೆ. ದಿವಾಕರ್ ಛಾಯಾಗ್ರಹಣ, ರಾಜೇಶ್ ಬ್ರಹ್ಮಾವರ್ ಅವರ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ಚಿತ್ರಕ್ಕಿದೆ. ಅಂದಹಾಗೆ ಈ ಚಿತ್ರದಲ್ಲಿ ನಮಿತಾ ಉಪನ್ಯಾಸಕಿಯಂತೆ.
ಚಿತ್ರದ ಉಳಿದ ಪಾತ್ರವರ್ಗಗಳೆಂದರೆ, ಶೋಭನಾ, ಶಿವಪ್ರಸಾದ್ ಗೊಲ್ಲಹಳ್ಳಿ, ಜಯಂತಿ, ಪೃಥ್ವಿರಾಜ್, ಟೆನ್ನಿಸ್ ಕೃಷ್ಣ, ಶ್ರೀಕಾಂತ್, ಅಕ್ಷತಾ ಶೆಟ್ಟಿ ಮತ್ತು ಡಿಂಗ್ರಿ ನಾಗರಾಜ್. ತಮ್ಮ ಚೊಚ್ಚಲ ಕನ್ನಡ ಚಿತ್ರ ನೀಲಕಂಠ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದ ನಮಿತಾ ಬಳಿಕ ಇಂದ್ರ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಕ್ರೇಜಿ ಸ್ಟಾರ್ ಹೂ ಚಿತ್ರದಲ್ಲಿ ನಟಿಸಿದ್ದರು. ಹಲವಾರು ಕಾರಣಗಳಿಗಾಗಿ ಹೂ ಚಿತ್ರ ಸುದ್ದಿ ಮಾಡಿತ್ತು.


Click it and Unblock the Notifications











