ಗಾಂಧಿನಗರದ ಗಲ್ಲಿಯಿಂದ ಆಫ್ರಿಕಾಗೆ 'ರಾಜ್'
ಪ್ರೇಮ್ ನಿರ್ದೇಶನದ 'ರಾಜ್' ಚಿತ್ರ ದಿನದಿಂದ ದಿನಕ್ಕೆ ಹೊಸ ಹೊಸ ಸಾಹಸಕ್ಕೆ ಅಣಿಯಾಗುತ್ತಿದೆ. ಪುನೀತ್ ಅಭಿನಯದ ಚಿತ್ರವೊಂದು ಅಂದು ಬಿಡುಗಡೆಯಾಗಿರುತ್ತದೆ. ಪುನೀತ್ರನ್ನು ಅಭಿಮಾನಿಗಳು ಮೆರವಣಿಗೆಯಲ್ಲಿ ವಿಜೃಂಭಣೆಯಿಂದ ಚಿತ್ರಮಂದಿರಕ್ಕೆ ಕರೆತರುತ್ತಾರೆ.
ಆಟೋ ಚಾಲಕರು, ಸಾರ್ವಜನಿಕರು ಸೇರಿ ಲಕ್ಷಾಂತರ ಅಭಿಮಾನಿಗಳು ಬಿಡುಗಡೆಯ ಸಂದರ್ಭದಲ್ಲಿ ಹರ್ಷದಿಂದ ಜೈಕಾರ ಹಾಕುತ್ತಿರುತ್ತಾರೆ. ಆಗ ಪುನೀತ್ ನಿಮ್ಮ ಮುಂದೆ ನಾನಿರುತ್ತೇನೆ ಎಂದು ಹಾಡುತ್ತಾ ಜನರನ್ನು ಪ್ರೀತಿಯಿಂದ ಅಭಿನಂದಿಸುವ ಈ ದೃಶ್ಯದೊಂದಿಗೆ ಚಿತ್ರಕ್ಕೆ ಕುಂಬಳಕಾಯಿ ಒಡೆದುಲಾಗುತ್ತದೆ. ಇದು ಚಿತ್ರದಲ್ಲೊಂದು ಚಿತ್ರ, ಅಂದರೆ, ರಾಜ್ ಚಿತ್ರದಲ್ಲಿ ಬರುವ ಒಂದು ದೃಶ್ಯವಾಗಿದೆ.
ಈ ಹಾಡಿನ ನಂತರ ಚಿತ್ರತಂಡ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಿದೆ. ಈ ಹಾಡಿನ ಚಿತ್ರೀಕರಣಕ್ಕಾಗಿ ಜಿಮ್ಮಿ ಜಿಪ್ ಕ್ಯಾಮೆರಾವನ್ನು ಪ್ರಪ್ರಥಮ ಬಾರಿಗೆ ವಿದೇಶಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಸೀತಾ ಭೈರವೇಶ್ವರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುರೇಶ್ ಗೌಡ್ರು ಹಾಗೂ ಶ್ರೀನಿವಾಸಮೂರ್ತಿ ನಿರ್ಮಿಸುತ್ತಿರುವ ರಾಜ್ ಚಿತ್ರಕ್ಕೆ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ಪ್ರೇಮ್.
ಎಸ್. ಕೃಷ್ಣಾರ ಛಾಯಾಗ್ರಹಣ, ವಿ.ಹರಿಕೃಷ್ಣರ ಸಂಗೀತ ಸಂಯೋಜನೆ ಇದ್ದು, ಶ್ರೀನಿವಾಸ್ ಪಿ. ಬಾಬು, ದಶಾವರ ಚಂದ್ರು, ವಿ. ಆನಂದ್ ಪ್ರಿಯಾ, ನಾಗೇಶ್, ಸಿ. ಸೇತು, ಹಾಗೂ ಮೋಹನ್ ರಾಜ್ ಪ್ರೇಮ್ ಜೊತೆಗೆ ಸತತವಾಗಿ ದುಡಿಯುತ್ತಿದ್ದಾರೆ. ಪುನೀತ್ ಜೊತೆಗೆ ನಾಯಕಿಯಾಗಿ ಬಾಲಿವುಡ್ ನಟಿ ನಿಶಾ ಕೋಠಾರಿ ನಟಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











