ಆಕ್ರೋಶಗೊಂಡ 50 ವಿಜೇತರು ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿಲ್ಲ: ಕಾರಣವೇನು.?
ವಿವಾದ ನಡುವೆಯೂ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಸಂಪ್ರದಾಯವಾಗಿ ಮುಕ್ತಾಯವಾಗಿದೆ. 2017ನೇ ಸಾಲಿನ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ (ಮೇ 3) ದೆಹಲಿಯಲ್ಲಿ ನಡೆಯಿತು. ಪ್ರಶಸ್ತಿ ವಿಜೇತರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಕೇಂದ್ರ ಸಚಿವೆ ಸ್ಮ್ರತಿ ಇರಾನಿ ಪ್ರಶಸ್ತಿ ಪ್ರದಾನ ಮಾಡಿದ್ರು.
ಈ ಮಧ್ಯೆ ಸುಮಾರು 50ಕ್ಕೂ ಪ್ರಶಸ್ತಿ ವಿಜೇತರು ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಸ್ವೀಕರಿಸದೇ ಸಮಾರಂಭಕ್ಕೆ ಗೈರಾಗಿದ್ದರು. 64 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಘಟನೆ ನಡೆದಿರುವುದು ವಿಷಾದನೀಯ.

ರಾಷ್ಟ್ರ ಚಲನಚಿತ್ರ ಪ್ರಶಸ್ತಿಯನ್ನ ರಾಷ್ಟ್ರಪತಿಗಳ ಹಸ್ತದಿಂದಲೇ ನೀಡಬೇಕು, ಇಲ್ಲವಾದಲ್ಲಿ ನಾವು ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ವಿಜೇತರು ಮುನಿಸಿಕೊಂಡಿದ್ದರು. ಯಾಕಂದ್ರೆ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕೇವಲ 11 ಜನ ವಿಜೇತರಿಗೆ ಮಾತ್ರ ಪ್ರಶಸ್ತಿ ಪ್ರದಾನ ಮಾಡಿದರು. ಉಳಿದ ಪ್ರಶಸ್ತಿಗಳನ್ನ ಕೇಂದ್ರ ಸಚಿವೆ ಸ್ಮ್ರತಿ ಇರಾನಿ ಮತ್ತು ರಾಜ್ಯವರ್ಧನ್ ರಾಥೋರ್ ಅವರು ನೀಡಿದರು. ಇದು ಮೊದಲೇ ತಿಳಿದಿದ್ದ ವಿಜೇತರು ಇದನ್ನ ಖಂಡಿಸಿ ಪ್ರಶಸ್ತಿ ಪ್ರದಾನ ಸಮಾರಂಭವನ್ನ ಬಹಿಷ್ಕರಿಸಿದರು.
ಇನ್ನುಳಿದಂತೆ ದಿವಂಗತ ನಟಿ ಶ್ರೀದೇವಿ ಪರವಾಗಿ ಪತಿ ಬೋನಿ ಕಪೂರ್ ಮತ್ತು ಮಕ್ಕಳು, ದಿವಂಗತ ನಟ ವಿನೋದ್ ಖನ್ನಾ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸೇರಿದಂತೆ ಹಲವರು ಪ್ರಶಸ್ತಿ ಸ್ವೀಕರಿಸಿದರು.


Click it and Unblock the Notifications











