ಏ.24ರಂದು ಸದಾಶಿವನಗರ ಹೊಸ ಮನೆಗೆ ಪುನೀತ್
ವರನಟ ಡಾ.ರಾಜ್ ಕುಮಾರ್ ಅವರು ಬಾಳಿ ಬದುಕಿದ ಸದಾಶಿವನಗರದ ಮನೆ ಇದೀಗ ನವೀಕೃತಗೊಂಡು ಗೃಹ ಪ್ರವೇಶಕ್ಕೆ ಅಣಿಯಾಗಿದೆ. ಅಣ್ಣಾವ್ರ ಹುಟ್ಟುಹಬ್ಬದ ದಿನ ಏ.24ರಂದು ಪಾರ್ವತಮ್ಮ ರಾಜ್ಕುಮಾರ್ ಹಾಗೂ ಅವರ ಪುತ್ರರಾದ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹೊಸ ಮನೆಗೆ ಗೃಹ ಪ್ರವೇಶ ಮಾಡಲಿದ್ದಾರೆ.
ಇಷ್ಟು ದಿನ ಪಾರ್ವತಮ್ಮ, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ಅವರು ಗಂಗೇನಹಳ್ಳಿಯ ಬಂಗಲೆಯೊಂದರಲ್ಲಿ ವಾಸವಾಗಿದ್ದರು. ಏ.24 ಹಾಗೂ 25ರಂದು ನಡೆಯುವ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ರಾಜ್ ಕುಟುಂಬಿಕರು ಕೇವಲ ಬಂಧು ಮಿತ್ರರನ್ನು ಮಾತ್ರ ಆಹ್ವಾನಿಸಿದ್ದಾರೆ.
ಏ.26ರಂದು ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ 'ಅಣ್ಣಾ ಬಾಂಡ್' ಚಿತ್ರ ತೆರೆಕಾಣುತ್ತಿದೆ. ಏ.27ರಂದು ಗೃಹ ಪ್ರವೇಶದ ಸಂಭ್ರಮಕ್ಕೆ ಕನ್ನಡ ಚಿತ್ರರಂಗದ ಹಲವು ತಾರೆಗಳು ಹಾಗೂ ಗಣ್ಯರು ಸಾಕ್ಷಿಯಾಗಲಿದ್ದಾರೆ. ಸರಿಸುಮಾರು 20 ವರ್ಷಗಳ ಕಾಲ ರಾಜ್ ಕುಮಾರ್ ಅವರು ಈ ಮನೆಯಲ್ಲಿ ಬಾಳಿ ಬದುಕಿದ್ದನ್ನು ಇಲ್ಲಿ ಸ್ಮರಿಸಬಹುದು.
ಇತ್ತೀಚೆಗೆ ಪಾರ್ವತಮ್ಮನವರು ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ 'ಅಣ್ಣಾಬಾಂಡ್' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಅವರ ಆಗಮನ ಚಿತ್ರೋದ್ಯಮಕ್ಕೆ ಮತ್ತಷ್ಟು ಹುರುಪು ತಂದಿತ್ತು.
ಇದೀಗ ಹಳೆಯ ಮನೆಯನ್ನು ನವೀಕರಿಸಿ ನಾಲ್ಕು ಅಂತಸ್ತಿನ ಭವ್ಯ ಬಂಗಲೆಯನ್ನು ನಿರ್ಮಿಸಲಾಗಿದೆ. ರಾಜ್ ಅವರು ಇದ್ದಾಗಲೆ ಮನೆಯನ್ನು ನವೀಕರಿಸಬೇಕೆಂಬ ಆಸೆ ಕೈಗೂಡಿರಲಿಲ್ಲ. ಡಾ.ರಾಜ್ ಸಂಸ್ಥೆ ನಿರ್ಮಾಣದ ಬಹುತೇಕ ಚಿತ್ರಗಳು ಸದಾಶಿವರನಗರದ ಹಳೆ ಬಂಗಲೆಯಲ್ಲೇ ಸೆಟ್ಟೇರಿದ್ದವು. ಹಳೆ ಬಂಗಲೆಯನ್ನು ಡಾ.ರಾಜ್ ಅವರು ರು.11 ಲಕ್ಷಕ್ಕೆ 'ಬೇಡರ ಕಣ್ಣಪ್ಪ' ಚಿತ್ರದ ನಿರ್ಮಾಪಕ ಎ.ವಿ.ಮೇಯಪ್ಪ ಚೆಟ್ಟಿಯಾರ್ ಅವರಿಂದ ಖರೀಸಿದ್ದರು. (ಒನ್ಇಂಡಿಯಾ ಕನ್ನಡ)


Click it and Unblock the Notifications











