ಕಾಶೀನಾಥ್ ಕುಟುಂಬದ ಪರಿಸ್ಥಿತಿ ಈಗ ಹೇಗಿದೆ? : ಕಾಶೀ ಪುತ್ರನ ನೋವಿನ ನುಡಿಗಳಿವು!
Recommended Video

''ಅಪ್ಪ ಹೋದ ಮೇಲೆ ನಾನು ಎಲ್ಲಿಯೂ ಏನೂ ಮಾತನಾಡಿರಲ್ಲ. ನನಗೆ ಅದರ ಬಗ್ಗೆ ಮಾತನಾಡುವುದಕ್ಕೆ ಆಗುವುದಿಲ್ಲ..'' ಹೀಗೆ ಹೇಳಿ ಒಂದು ಕ್ಷಣ ಮೌನವಾದರು ಕಾಶೀನಾಥ್ ಪುತ್ರ ಅಭಿಮನ್ಯು ಕಾಶೀನಾಥ್.
ಕಾಶೀನಾಥ್ ಒಬ್ಬ ಪ್ರತಿಭಾವಂತ ನಟ, ನಿರ್ದೇಶಕ ಎನ್ನುವುದಕ್ಕಿಂತ ಹೆಚ್ಚಾಗಿ ಒಬ್ಬ ಅದ್ಬುತ ಮನುಷ್ಯ. ಕಾಶೀನಾಥ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವವರು ಸಿಗುವುದೇ ಇಲ್ಲ. ಅಂದಿನಿಂದ ಇಂದಿನವರಗೆ ಆ ವ್ಯಕ್ತಿಗೆ ಜನ ನೀಡುವ ಗೌರವ ಪ್ರೀತಿ ದೊಡ್ಡ ಮಟ್ಟದ್ದು.
ಕಾಶೀನಾಥ್ ವಿಧಿವಶರಾದ ಮೇಲೆ ಅವರ ಕುಟುಂಬದ ಪರಿಸ್ಥಿತಿ ಹೇಗಿದೆ?, ಅವರ ಪುತ್ರ ಅಭಿಮನ್ಯು ಈಗ ಏನು ಮಾಡುತ್ತಿದ್ದಾರೆ? ಎಂಬ ಕುತೂಹಲ ಹಾಗೂ ಸಣ್ಣ ಕಾಳಜಿಯ ಜೊತೆಗೆ ಅವರಿಗೆ ದೂರವಾಣಿ ಕರೆ ಮಾಡಿದೆವು. ಅದೇ ರೀತಿ ಅಭಿಮನ್ಯು ಈ ಸಣ್ಣ ಸಂದರ್ಶನದಲ್ಲಿ ಅನೇಕ ವಿಷಯಗಳನ್ನು ಹೇಳಿಕೊಂಡರು.
ತಂದೆ ನಿಧನರಾದ ಮೇಲೆ ಎಲ್ಲಿಯೂ ಮಾತನಾಡಿರದ ಅವರು ಇಲ್ಲಿ ತಮ್ಮ ದುಃಖವನ್ನು ಹಂಚಿಕೊಂಡರು. ಅವರ ಸಂಪೂರ್ಣ ಮಾತುಗಳು ಮುಂದಿವೆ ಓದಿ...
ಸಂದರ್ಶನ : ನವಿ ಕನಸು (ನವೀನ್ ಎಂ ಎಸ್)

ನೀವು ಈಗ ಏನು ಮಾಡುತ್ತೀದ್ದೀರಾ?
''ಬೆಸಿಕಲಿ ನಾನು ಒಬ್ಬ ಪರಿಪೂರ್ಣ ಚಿತ್ರರಂಗದ ವ್ಯಕ್ತಿಯಾಗಿಲ್ಲ. ನಮ್ಮ ತಂದೆ ನನ್ನನ್ನು ಆ ರೀತಿಯಾಗಿ ಬೆಳೆಸಲಿಲ್ಲ. ನಮ್ಮ ತಂದೆ ಹೋದ ಮೇಲೆ ನಾನು ಎಲ್ಲಿಯೂ ಅವರ ಬಗ್ಗೆ ಒಂದು ಮಾತನ್ನು ಆಡಿಲ್ಲ. ಏಕೆಂದರೆ, ಅವರ ಬಗ್ಗೆ ನಾನು ಮಾತನಾಡುವುದಕ್ಕೆ ಆಗಲ್ಲ. ಆ ಬಗ್ಗೆ ಮಾತನಾಡಿದ ತಕ್ಷಣ ಎಮೋಷನಲ್ ಆಗುತ್ತೇನೆ.''

ನಿಮ್ಮ ಕಷ್ಟದಲ್ಲಿ ಕಾಶೀನಥ್ ಅವರ ಶಿಷ್ಯಂದಿರು ಯಾರಾದರೂ ಸಹಾಯಕ್ಕೆ ಬಂದ್ರಾ?
''ಅದರ ಬಗ್ಗೆ ನೀವು ಕೇಳಲು ಬಾರದು... ನಾನು ಏನೂ ಹೇಳಲು ಬಾರದು..''. ಈ ರೀತಿ ತಮ್ಮ ಒಂದೇ ಮಾತಿನಲ್ಲಿ ಉತ್ತರಿಸಿದರು. ಅಲೋಕ್ ಮಾತಿನ ಅರ್ಥವನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.

ಸರ್ಕಾರದ ಅಥವಾ ಚಿತ್ರರಂಗದಿಂದ ನಿಮಗೆ ಸಹಾಯದ ಅಗತ್ಯವಿದೆಯೇ?
''ನಮ್ಮ ತಂದೆಗೆ ಆ ರೀತಿಯ ಯಾವುದೇ ಅಪೇಕ್ಷೆಗಳು ಇರಲಿಲ್ಲ. ಅದೇ ರೀತಿ ನಾನೂ ಏನಾದರೂ ಬೇಕು ಎಂದು ಕೇಳುವುದಿಲ್ಲ. ಒಬ್ಬ ನಟನಾಗಿ ಜನ ಅಪ್ಪನ ಮೇಲೆ ಪ್ರೀತಿ ಇಟ್ಟಿದ್ದಾರೆ ಅಂತ ಗೊತ್ತಿತ್ತು. ಆದರೆ, ಈ ಮಟ್ಟಕ್ಕೆ ಜನ ಅವರನ್ನು ಪ್ರೀತಿಸುತ್ತಾರೆ ಅಂತ ತಿಳಿದಿರಲಿಲ್ಲ. ಕಡೆ ದಿನ ಅವರನ್ನು ಎಷ್ಟೊಂದು ಗೌರವದಿಂದ ಜನ ಕಳುಹಿಸಿಕಟ್ಟಾಗಲೇ ನನಗೆ ಅದರ ಅರಿವಾಯ್ತು. ಅದಕ್ಕಿಂತ ದೊಡ್ಡ ಅವಾರ್ಡ್, ಇನ್ನೊಂದು ಇಲ್ಲ.''

ಮನೆಯಲ್ಲಿ ನಾನು ಒಬ್ಬನೇ ಮಗ
''ಕೆಲವು ದಿನಗಳಿಂದ ಡಾಕ್ಯುಮೆಂಟೇಶನ್ ಗಳ ಕೆಲಸ ತುಂಬ ಇತ್ತು. ಮೂರು ತಿಂಗಳಿನಲ್ಲಿ ಎಲ್ಲ ಮುಗಿಯುತ್ತದೆ ಎಂದುಕೊಂಡಿದ್ದೆ. ಆದರೆ, ತುಂಬ ಪ್ರೊಸೀಜರ್ ಇತ್ತು. ಮನೆಯಲ್ಲಿ ನಾನು ಒಬ್ಬನೇ ಮಗ. ಎಲ್ಲವನ್ನು ನಾನೇ ನೋಡಿಕೊಳ್ಳಬೇಕು. ನಾನು ನಟ ಎನ್ನುವುದನ್ನೆಲ್ಲ ಮರೆತು ಆಗಬೇಕಿದ್ದ ಬೇರೆ ಬೇರೆ ಕೆಲಸಗಳನ್ನು ಮುಗಿಸಿಕೊಂಡೆ.

ಒಂದೆರಡು ಕಥೆಗಳ ಸಿನಿಮಾ ಮಾಡಬೇಕಿತ್ತು
''ಕಳೆದ ಎರಡು ವರ್ಷಗಳಿಂದ ಚಿತ್ರರಂಗದಿಂದ ಆಚೆನೇ ಇದ್ದೆ. ಅಪ್ಪನಿಗೆ ಹಾಗೆ ಆಗಿದ್ದು ತುಂಬ ಆಘಾತ ನೀಡಿದ ಘಟನೆ. ಅವರಿಗೆ ಹಾಗೆ ಆಗುತ್ತದೆ ಎನ್ನುವುದು ನಮ್ಮ ಮನಸ್ಸಿನಲ್ಲಿ ಇರಲೇ ಇಲ್ಲ. ಅವರು ಇರುವಾಗ ಒಂದೆರಡು ಕಥೆಗಳ ಮೇಲೆ ವರ್ಕ್ ಮಾಡಿದ್ವಿ. ತುಂಬ ಡಿಫರೆಂಟ್ ಆಗಿತ್ತು. ಆ ಒಳ್ಳೆಯ ಕಥೆಯನ್ನು ಸಿನಿಮಾ ಮಾಡಬೇಕು ಅಂತ ಪ್ಲಾನ್ ಇತ್ತು. ಅದೆಲ್ಲ ಆಗುವ ಮೊದಲೇ ಅವರು ಹೋದರು.''

ನಿಧಾನವಾಗಿ ದುಃಖದಿಂದ ಆಚೆ ಬರುತ್ತಿದ್ದೇನೆ
''ನಿಧಾನವಾಗಿ ಎಲ್ಲ ದುಃಖಗಳಿಂದ ಆಚೆ ಬರುತ್ತಿದ್ದೇನೆ. ಆಗಸ್ಟ್ ತಿಂಗಳಿನಿಂದ ಬೇರೆ ಬೇರೆ ವಿಷಯಗಳ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳುತ್ತಿದ್ದೇನೆ. ಈಗ ನಾನು ಎಲ್ಲ ಮರೆತು ರೆಡಿ ಆಗುತ್ತಿದ್ದೇನೆ. ಆ ಎರಡು ಕಥೆಗಳು ಮುಗಿದಿವೆ. ಒಳ್ಳೆಯ ನಿರ್ಮಾಪಕರನ್ನು ನೋಡಿ ಆ ಸಿನಿಮಾಗಳನ್ನು ಮಾಡಬೇಕು.''

ಡೈರೆಕ್ಷನ್ ಕಡೆ ನನಗೆ ಒಲವಿಲ್ಲ
''ನಾನು ಮೊದಲಿನಿಂದ ಹೇಳುತ್ತಿದ್ದೇನೆ. ನನಗೆ ಆಕ್ಟಿಂಗ್ ಬಿಟ್ಟು ಡೈರೆಕ್ಷನ್ ಕಡೆ ಅಷ್ಟೊಂದು ಒಲವಿಲ್ಲ. ಒಲವು ಎನ್ನುವುದಕ್ಕಿಂತ ಆ ಟ್ಯಾಲೆಂಟ್ ನನಗೆ ಇಲ್ಲ. ನನಗೆ ಡೈರೆಕ್ಷನ್ ಗೆ ಬೇಕಾದ ಶಕ್ತಿ ಇದ್ದರೆ ಮಾತ್ರ ಮಾಡುತ್ತೇನೆ. ಸುಮ್ಮನೆ ನಮ್ಮ ಅಪ್ಪ ದೊಡ್ಡ ನಿರ್ದೇಶಕ ಅಂತ ಅವರ ಹೆಸರನ್ನು ಬಳಸಿಕೊಂಡು ನಿರ್ದೇಶಕ ಆಗಲ್ಲ. ನಾನು ಒಬ್ಬ ಕಲಾವಿದನಾಗಿಯೇ ಇರುತ್ತೇನೆ. ಕಲಾವಿದನಾಗಿ ಒಳ್ಳೆಯ ಹೆಸರು ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಹೋರಾಡುತ್ತಿದ್ದೇನೆ.''

ತರುಣ್ ಸುಧೀರ್ ಮತ್ತು ನಮ್ಮ ಚಿಕ್ಕಪ್ಪ ಎಲ್ಲ ವ್ಯವಸ್ಥೆ ಮಾಡಿದರು
''ಅಪ್ಪ ಹೋದ ದಿನ ನಾವು ಏನು ವ್ಯವಸ್ಥೆ ಮಾಡಿರಲಿಲ್ಲ. ದೇವರೇ ಎಲ್ಲ ಮಾಡಿದ. ನಮ್ಮ ಮನೆಯಲ್ಲಿ ಇರುವವರು ಯಾರೂ ಚಿತ್ರರಂಗದವರಲ್ಲ. ಆ ದಿನ ನಾನು ಏನನ್ನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಅಂತ ಗೊತ್ತಾಗುತ್ತಿರಲಿಲ್ಲ. ಇವತ್ತಿಗೂ ಅಂದು ನೆಡೆದ ದೃಶ್ಯ ನೆನಪಿಗೆ ಬರಲ್ಲ. ತರುಣ್ ಸುಧೀರ್ ಮತ್ತು ನಮ್ಮ ಚಿಕ್ಕಪ್ಪ ಇಬ್ಬರು ಸೇರಿ ದೊಡ್ಡ ಗ್ರೌಂಡ್ ನಲ್ಲಿ ಅಂತಿಮ ದರ್ಶನದ ಎಲ್ಲ ವ್ಯವಸ್ಥೆ ಮಾಡಿದರು. ಫ್ರೆಂಡ್ಸ್, ಸಂಬಂಧಿಗಳು ಧೈರ್ಯ ನೀಡಿದರು.''

ಅಮ್ಮನ ಬಳಿ ಸಹ ವಿಷಯ ಹೇಳಿಕೊಂಡಿರಲಿಲ್ಲ
''ಎರಡು ವರ್ಷಗಳಿಂದ ಅವರಿಗೆ ಆರೋಗ್ಯದಲ್ಲಿ ಏನಾಗಿತ್ತು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ನಮ್ಮ ಅಮ್ಮನಿಗೆ ಸಹ ಅಪ್ಪ ಹೋದ ದಿನ ಆ ವಿಷಯ ತಿಳಿಯಿತು. ನಮ್ಮ ತಾಯಿಗೆ ಮುಂಚೆಯೇ ವಿಷಯ ತಿಳಿದರೆ ಅದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕೆ ನಮ್ಮ ತಂದೆ ಅವರ ಬಳಿ ಕೂಡ ಮುಚ್ಚಿಟ್ಟಿದ್ದರು.''

ಅಪ್ಪ ಹೇಳಿದ್ದು ಇದೊಂದು ಮಾತು
''ನಮ್ಮ ತಂದೆ ನನಗೆ ಹೇಳಿರುವುದು ಒಂದೇ. ಜೀವನದಲ್ಲಿ ಏನೋ ಒಂದು ಆಯ್ತು ಎನ್ನುವ ಕಾರಣಕ್ಕೆ ಕುಗ್ಗಿ ಹೋಗಬೇಡ. ಆ ರೀತಿ ಆಗಿ ಬಿಟ್ಟರೆ ಜೀವನದಲ್ಲಿ ಏನು ಮಾಡಲು ಸಾಧ್ಯವಿಲ್ಲ. ಹಿಂದೆ ಆಗಿದ್ದನ್ನು ಮರೆತು ಮುಂದೆ ಏನಾಗಬೇಕು ಎಂಬುದರ ಬಗ್ಗೆ ಯೋಜನೆ ಮಾಡು ಎಂದಿದ್ದರು.''

ಜನರ ಪ್ರೀತಿ ಗೌರವಕ್ಕಿಂತ ದೊಡ್ಡದು ಯಾವುದೂ ಇಲ್ಲ
''ನಮ್ಮ ತಂದೆಯ ಮೇಲೆ ಜನರು ಇಟ್ಟಿರುವ ಗೌರವ ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ ನಮಗೆ ಅಷ್ಟೇ ಸಾಕು. ಅಪ್ಪನಿಗೆ ಏನು ಸಿಗಬೇಕು ಎಲ್ಲವನ್ನು ಆ ದೇವರು ಕೊಟ್ಟ.'' ಹೀಗೆ ಹೇಳಿ ತಮ್ಮ ಮಾತು ಮುಗಿಸಿದರು ಅಲೋಕ್.


Click it and Unblock the Notifications











