ಅಭಿಷೇಕ್ ಅಂಬರೀಶ್ 'ಕಾಳಿ' ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ; ಫೋಟೊ ಹಂಚಿಕೊಂಡ ನಟಿ

ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ಸಪ್ತಮಿ ಗೌಡ ಈ ಚಿತ್ರದಲ್ಲಿದ್ದ ತನ್ನ ಬೋಲ್ಡ್ ಸಂಭಾಷಣೆಗಳಿಂದ ವೈರಲ್ ಆಗಿದ್ದವರು. ಆ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿದ್ದ ನಟಿ ಸಪ್ತಮಿ ಗೌಡಗೆ ಸಾಕಷ್ಟು ಆಫರ್ ಹುಡುಕಿ ಬರಲಿವೆ ಎಂದು ಹಲವರು ಭವಿಷ್ಯ ನುಡಿದಿದ್ದರು. ಆದರೆ ಈ ಚಿತ್ರದ ಬಳಿಕ ಸುಮಾರು ಎರಡು ವರ್ಷಗಳು ಬ್ರೇಕ್ ತೆಗೆದುಕೊಂಡಿದ್ದ ಸಪ್ತಮಿ ಗೌಡ ಈ ವರ್ಷ ಕಾಂತಾರ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಕಮ್ ಬ್ಯಾಕ್ ಮಾಡಿದ್ದು ದೇಶವ್ಯಾಪಿ ಹೆಸರು ಮಾಡಿದ್ದಾರೆ.
ಹೌದು, ಕಾಂತಾರ ಚಿತ್ರದಲ್ಲಿ ಲೀಲಾ ಪಾತ್ರದಲ್ಲಿ ಫಾರೆಸ್ಟ್ ಗಾರ್ಡ್ ಆಗಿ ನಟಿಸಿರುವ ನಟಿ ಸಪ್ತಮಿ ಗೌಡ ಈ ಒಂದು ಚಿತ್ರದಿಂದ ಇದೀಗ ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ತಮಿಳು ಚಿತ್ರರಂಗಗಳಿಂದಲೂ ಬೇಡಿಕೆ ಪಡೆದುಕೊಂಡಿರುವ ನಟಿ ಎನಿಸಿಕೊಂಡಿದ್ದಾರೆ. ನಟಿ ಸಪ್ತಮಿ ಗೌಡ ಅವರನ್ನು ಹಲವು ಆಫರ್ಸ್ ಹುಡುಕಿಕೊಂಡು ಬರುತ್ತಿದ್ದು, ನಟಿ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿತ್ತು.
ಸಪ್ತಮಿ ಗೌಡ ಮುಂದೆ ಕನ್ನಡ ಚಿತ್ರದಲ್ಲಿ ನಟಿಸ್ತಾರಾ ಅಥವಾ ಬೇರೆ ಭಾಷೆಯ ಚಿತ್ರಗಳ ಆಫರ್ಗಳಿಗೆ ಮಾನ್ಯತೆ ಕೊಡ್ತಾರಾ ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ನಟಿ ಸಪ್ತಮಿ ಗೌಡ ಅವರು ಅಭಿಷೇಕ್ ಅಂಬರೀಶ್ ಹಾಗೂ ಹೆಬ್ಬುಲಿ ಕೃಷ್ಣ ಕಾಂಬಿನೇಶನ್ನಲ್ಲಿ ಮೂಡಿ ಬರಲಿರುವ ಕಾಳಿ ಚಿತ್ರದಲ್ಲಿ ನಟಿಸುವುದಾಗಿ ಇತ್ತೀಚೆಗಷ್ಟೆ ಘೋಷಿಸಿದ್ದರು.
ಇನ್ನು ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನಿನ್ನೆ ( ನವೆಂಬರ್ 29 ) ಶ್ರೀ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿದ್ದು, ಈ ಪೂಜಾ ಕಾರ್ಯಕ್ರಮದಲ್ಲಿ ನಟ ಅಭಿಷೇಕ್ ಅಂಬರೀಶ್, ನಟಿ ಸಪ್ತಮಿ ಗೌಡ, ನಿರ್ದೇಶಕ ಕೃಷ್ಣ ಹಾಗೂ ನಿರ್ದೇಶಕಿ ಸ್ವಪ್ನ ಕೃಷ್ಣ ಸೇರಿದಂತೆ ಚಿತ್ರತಂಡದ ಇನ್ನಿತರರು ಭಾಗವಹಿಸಿದ್ದರು. ಈ ಮುಹೂರ್ತದ ಫೋಟೊಗಳನ್ನು ನಟಿ ಸಪ್ತಮಿಗೌಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಚರಣ್ ರಾಜ್ ಸಂಗೀತ ನಿರ್ದೇಶಕನಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಇದ್ದು, ಕೆಜಿಎಫ್ ಖ್ಯಾತಿಯ ಚಂದ್ರಮೌಳಿ ಸಂಭಾಷಣೆ ಬರೆಯಲಿದ್ದಾರೆ.


Click it and Unblock the Notifications











