'ಅಂಬಿ ಪಾರ್ಥಿವ ಶರೀರ ಮಂಡ್ಯಗೆ ತನ್ನಿ' ಎಂದಿದ್ದು ನಾನೇ: ಅಭಿಷೇಕ್
Recommended Video
ಮಂಡ್ಯದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅಭಿಷೇಕ್ ಅಂಬರೀಶ್ ವಿರೋಧಿ ಬಣವನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಚಾರ ವೇಳೆ ಮಾತಿನ ಬಾಣಗಳನ್ನು ಹರಿಬಿಡುತ್ತಿದ್ದ ಮೈತ್ರಿ ಸರ್ಕಾರದ ಬೆಂಬಲಿಗರ ವಿರುದ್ಧ ಅಭಿಷೇಕ್ ಗುಡುಗಿದ್ದಾರೆ. ಅಪ್ಪನ ಸಾವಿನ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದವರಿಗೆ ಅಭಿಷೇಕ್ ಹರಿತವಾದ ಮಾತಿನಲ್ಲೇ ಇರಿದಿದ್ದಾರೆ.
ಮಂಡ್ಯ ಪ್ರಚಾರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥೀವ ಶರೀರದ ರವಾನೆ ವಿಷಯ ರಾಜಕೀಯವಾಗಿ ಭಾರಿ ಎಳೆದಾಡಲಾಗುತ್ತಿತ್ತು. ಮೈತ್ರಿ ಅಭ್ಯರ್ಥಿಯ ಬೆಂಬಲಿಗರು ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥಿವ ಶರೀರವನ್ನೆ ಅಸ್ತ್ರವನ್ನಾಗಿ ಇಟ್ಟುಕೊಂಡು ಪ್ರಚಾರದ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿತ್ತು.
"ಅಂಬರೀಶ್ ಪಾರ್ಥೀವ ಶರೀರವನ್ನು ಮಂಡ್ಯಗೆ ರವಾನೆ ಮಾಡಲು ಹೇಳಿದ್ದೆ ನಾನು" ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದ ಮಾತಿಗೆ ಅಭಿಷೇಕ್ ಈಗ ಉತ್ತರ ನೀಡಿದ್ದಾರೆ. ಅಂತ್ಯಕ್ರಿಯೆ ವಿಚಾರದಲ್ಲಿ ರಾಜಕೀಯ ಮಾಡಿದವರಿಗೆ ಅಮ್ಮ, ಮಗ ಇಬ್ಬರು ಸರಿಯಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದೆ ಓದಿ..

ಅಪ್ಪನ ಮೇಲೆ ಆಣೆ ನಾನೆ ಹೇಳಿದ್ದು
"ನವೆಂಬರ್ 24 ರಾತ್ರಿ 9.30ಕ್ಕೆ ವಿಕ್ರಮ್ ಆಸ್ಪತ್ರೆಯಲ್ಲಿ ನಾನು ಇದ್ದೆ. ಮಂಡ್ಯಗೆ ಅಂಬರೀಶ್ ಅವರನ್ನು ಕರೆದು ಕೊಂಡು ಹೋಗಿಲ್ಲ ಅಂದ್ರೆ ತಪ್ಪಾಗುತ್ತೆ ಮುಖ್ಯಮಂತ್ರಿಗಳೇ ಎಂದು ನಾನೇ ಹೇಳಿದ್ದು. ಅಪ್ಪನ ಮೇಲೆ ಆಣೆ ಮಾಡಿ ಹೇಳುತ್ತೇನೆ" ಎಂದು ಹೇಳುವ ಮೂಲಕ ಪಾರ್ಥೀವ ಶರೀರದ ರವಾನೆಯ ಗೊಂದಲಕ್ಕೆ ಉತ್ತರ ನೀಡಿದ್ದಾರೆ.

ಅಂಬರೀಶ್ ಗೆ ಗೌರವ ಸಲ್ಲಿಸಿದ್ದು ಸರ್ಕಾರ ಅಲ್ಲ ಜನ
"ಅಂಬರೀಶ್ ನಿಧನದ ಮಾರನೆ ದಿನ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಮುಖ್ಯಮಂತ್ರಿಗಳು ಬಂದು ಬೆನ್ನು ತಟ್ಟಿ ಕಿವಿಯಲ್ಲಿ ಹೇಳ್ತಾರೆ, ನೀನು ಕೇಳಿದ್ದು ಆಗಲ್ಲ. ಭದ್ರತೆ ಸಮಸ್ಯೆ ಇದೆ, ಜನ ಜಾಸ್ತಿ ಇದ್ದಾರೆ, ಜನ ಬೆಂಕಿಯಾಗಿದ್ದಾರೆ ಎಂದು ಹೇಳಿ ನಿರಾಕರಿಸಿದ್ದರು" ಆದ್ರೆ ಮಂಡ್ಯದ ಅಭಿಮಾನಿಯೊಬ್ಬ "ಅಂಬರೀಶ್ ಅವರನ್ನು ಕರ್ಕೊಂಡು ಬಂದಿಲ್ಲ ಅಂದ್ರೆ ಸುಮ್ಮನೆ ಬಿಡಲ್ಲ ಎಂದು ಹೇಳಿದ ಮಾತು ನೆನಪಿದೆ. ಅಂಬರೀಶ್ ಅವರಿಗೆ ಗೌರವ ಸಲ್ಲಿಸಿದ್ದು ಸರ್ಕಾರ ಅಲ್ಲ. ಕರ್ನಾಟಕ ಜನ ಮತ್ತು ಮಂಡ್ಯದ ಜನ"

ನೋವು ತೋರಿಸಲು ನನಗೆ ಗೊತ್ತಿಲ್ಲ
"ನೋವು ತೋರಿಸಲು ನನಗೆ ಗೊತ್ತಿಲ್ಲ ಎಂದು ಹೇಳಿದೆ. ತಪ್ಪಾ ನಂದು" ಎಂದು ಅಭಿಷೇಕ್ ಮಂಡ್ಯ ಜನರನ್ನೆ ಕೇಳಿದ್ದಾರೆ. ಈ ಹಿಂದೆ ಪ್ರಚಾರದ ವೇಳೆ "ಗಂಡ ಸತ್ತ ನೋವು ಸುಮಲತಾ ಮುಖದಲ್ಲಿ ಕಾಣುತ್ತಿಲ್ಲ" ಎಂದು ಮೈತ್ರಿ ಸರ್ಕಾರದ ಬೆಂಬಲಿಗರು ಹೇಳಿದ್ದರು.

ಅಂಬಿ ಸಮಾಧಿ ಮೇಲೆ ಮಗನ ರಾಜಕೀಯ
ಅಂಬರೀಶ್ ಅಂತ್ಯಕ್ರಿಯೆ ರಾಜಕೀಯ ಮಾಡುತ್ತಿದ್ದಾರೆ ಎಂದು ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದರು. ಅಭಿಷೇಕ್ ಹೇಳಿದ್ದು ನಿಜ ಅಂಬರೀಶ್ ಅವರನ್ನು ಕರೆದುಕೊಂಡು ಹೋಗಲು ಹೇಳಿದ್ದೇ ಅಭಿಷೇಕ್. ಈಗ ಮುಖ್ಯಮಂತ್ರಿಗಳು ಸಾವಿನ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಅಂಬರೀಶ್ ಈ ಮಣ್ಣಿನ ಮಗ, ಮಂಡ್ಯಗೆ ಕರೆತರದೆ ಇರುವಷ್ಟು ಯೋಗ್ಯತೆ ಇರಲ್ಲಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಅಂಬರೀಶ್ ಸಮಾಧಿ ಮೇಲೆ ಮಗನ ರಾಜಕೀಯಕ್ಕೆ ನಾಂದಿ ಹಾಡಲು ಹೊರಟಿದ್ದಾರೆ ಎಂದು ಸುಮಲತಾ ಆರೋಪಿಸಿದರು.


Click it and Unblock the Notifications











