ಅಭಿಷೇಕ್ ಹೇಳಿಕೆ: ಮತ್ತೊಂದು ರೋಚಕ ರಣರಂಗಕ್ಕೆ ವೇದಿಕೆ ಆಗುತ್ತಾ ಮಂಡ್ಯ?
ಮುಂದೆ ಮಂಡ್ಯದಲ್ಲಿ ನಡೆಯುವ ಪ್ರತಿಯೊಂದು ಚುನಾವಣೆಗಳು ಪ್ರತಿಷ್ಠೆಯ ಪ್ರತೀಕವಾಗಿರುತ್ತದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರವನ್ನು ಕಳೆದುಕೊಂಡ ಜೆಡಿಎಸ್, ಮುಂದಿನ ಎಲೆಕ್ಷನ್ನಲ್ಲಿ ಸುಮಲತಾಗೆ ಪಾಠ ಕಲಿಸುತ್ತೇವೆ ಎಂದು ಈಗಲೇ ಹೇಳುತ್ತಿದ್ದಾರೆ. ಮತ್ತೊಂದೆಡೆ ಲೋಕಸಭೆ ಚುನಾವಣೆಗೂ ಮುಂಚೆ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ತಕ್ಕ ಉತ್ತರ ಕೊಡ್ತೀವಿ ಎಂದು ಸುಮಲತಾ ಬೆಂಬಲಿಗರು ಸವಾಲ್ ಹಾಕಿರುವ ಉದಾಹರಣೆಗಳಿವೆ.
Recommended Video
ಹೀಗೆ, ಮುಂದಿನ ಚುನಾವಣೆ ಬಹಳ ರೋಚಕ ಹಾಗೂ ಪ್ರತಿಷ್ಠೆಗಳಿಂದ ಕೂಡಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದೀಗ, ಅಂಬರೀಶ್ ಪುತ್ರ ಅಭಿಷೇಕ್ ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶ ಮಾಡುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಇದು ಮಂಡ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದೆ. ಹಾಗಾದ್ರೆ, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ರೆಬೆಲ್ ಪುತ್ರ ಅಖಾಡಕ್ಕೆ ಧುಮುಕ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಅಷ್ಟಕ್ಕೂ, ಚುನಾವಣೆ ಸ್ಪರ್ಧೆ ಬಗ್ಗೆ ಅಭಿಷೇಕ್ ಹೇಳಿದ್ದೇನು? ಮುಂದೆ ಓದಿ...

ಜನರು ಬಯಸಿದರೆ ಚುನಾವಣೆಗೆ ಸ್ಪರ್ಧೆ
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಳುಗನ ಹಳ್ಳಿಗೆ ಭೇಟಿ ನೀಡಿದ್ದ ಅಭಿಷೇಕ್ ಅಂಬರೀಶ್, ''ಜನರು ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಾನು ಸಿದ್ಧ'' ಎಂದಿದ್ದಾರೆ. ಈ ಮೂಲಕ ಮುಂದಿನ ವಿಧಾನಸಭೆ ಎಲೆಕ್ಷನ್ನಲ್ಲಿ ಅಭಿಷೇಕ್ ಅಂಬರೀಶ್ ಸ್ಪರ್ಧಿಸುವ ಕುರಿತು ಪರೋಕ್ಷವಾಗಿ ಸುಳಿವು ಕೊಟ್ಟಿದ್ದಾರೆ.

ಏಳು ಕ್ಷೇತ್ರಕ್ಕೂ ಒಳ್ಳೆಯ ಶಾಸಕರು ಬೇಕು
''ಭವಿಷ್ಯದಲ್ಲಿ ಏನೇನೂ ಬದಲಾವಣೆಗಳು ಆಗುತ್ತೋ ಯಾರಿಗೂ ಗೊತ್ತು. ಕಳೆದ ವಾರ ಸಿಎಂ ಬದಲಾಗ್ತಾರೆ ಅಂತ ಯಾರಿಗಾದ್ರೂ ಗೊತ್ತಿತ್ತಾ? ಹಾಗಾಗಿ, ಭವಿಷ್ಯ ಏನು ಅಂತ ಈಗಲೇ ಹೇಳೋಕೆ ಸಾಧ್ಯನಾ? ಜನ ಬಯಸಿದರೆ ನಾನು ಬರ್ತೀನಿ. ಮಂಡ್ಯಗಾಗಲಿ ಮದ್ದೂರಿಗಾಗಲಿ ಏಳು ಕ್ಷೇತ್ರಗಳಿಗೂ ಒಳ್ಳೆಯ ಶಾಸಕರು ಸಿಗಬೇಕು. ಒಳ್ಳೆಯ ಪ್ರತಿನಿಧಿಗಳು ಸಿಗಬೇಕು'' ಎಂದು ಹೇಳಿರುವ ಅಭಿಷೇಕ್ ಮಂಡ್ಯ ಜನರಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.

ಲೋಕಸಭೆ ವೇಳೆ ಪ್ರಚಾರ
ಸುಮಲತಾ ಸ್ಪರ್ಧೆ ವೇಳೆ ಅಭಿಷೇಕ್ ಅಂಬರೀಶ್ ಸಹ ಮಂಡ್ಯದಲ್ಲಿ ಪ್ರಚಾರ ಕೈಗೊಂಡಿದ್ದರು. ಅಮ್ಮನ ಪರವಾಗಿ, ನಟ ದರ್ಶನ್ ಮತ್ತು ಯಶ್ ಜೊತೆ ಸೇರಿ ಹಳ್ಳಿ-ಹಳ್ಳಿಗಳಲ್ಲೂ ಪ್ರಚಾರ ಮಾಡಿದ್ದರು. ಅದರ ಪರಿಣಾಮ ಸುಮಲತಾ ಸಂಸದರಾಗಿ ಆಯ್ಕೆಯಾದರು. ಇದೀಗ, ಅಮ್ಮನ ಹಾದಿಯಲ್ಲಿ ಅಭಿಷೇಕ್ ಸಹ ಹೆಜ್ಜೆ ಇಡಲು ತೀರ್ಮಾನಿಸಿರಬಹುದು ಎಂದೆನಿಸುತ್ತಿದೆ.

ಹೊಸ ಪಕ್ಷ ಕಟ್ಟುವಂತೆ ಒತ್ತಾಯ
ಕೆಆರ್ಎಸ್ ಡ್ಯಾಂ ವಿಚಾರವಾಗಿ ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ಮಾತಿನ ಸಮ ನಡೆದಿತ್ತು. ಈ ಸಮಯದಲ್ಲಿ ಅಂಬರೀಶ್ ಬೆಂಬಲಿಗರು ಸುಮಲತಾ ಅವರನ್ನು ಭೇಟಿ ಮಾಡಿ, ''ಹೊಸ ಪಕ್ಷ ಸ್ಥಾಪಿಸಿ, ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿ, ನಾವು ಗೆಲ್ಲಿಸಿಕೊಂಡು ಬರ್ತೀವಿ'' ಎಂದು ಒತ್ತಾಯಿಸಿದ್ದರು. ಈಗ ಅಭಿಷೇಕ್ ಬೇರೆ ಚುನಾವಣೆ ಸ್ಪರ್ಧೆಗೆ ಸಿದ್ದ ಎಂದು ಹೇಳಿದ್ದಾರೆ. ಇದೆಲ್ಲ ಬೆಳವಣಿಗೆ ಗಮನಿಸುತ್ತಿದ್ದರೆ ಮತ್ತೊಂದು ರಣರಂಗಕ್ಕೆ ಮಂಡ್ಯ ವೇದಿಕೆ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಸಿನಿಮಾ ಮೇಲೆ ಆಸಕ್ತಿ
ಈ ಹಿಂದಿನಿಂದಲೂ ನನಗೆ ರಾಜಕೀಯ ಆಸಕ್ತಿ ಇಲ್ಲ, ಸಿನಿಮಾಗಳನ್ನು ಮಾಡುತ್ತೇನೆ ಎಂದು ಹೇಳುತ್ತಿದ್ದ ಅಭಿಷೇಕ್ಗೆ ರಾಜಕೀಯದ ಮೇಲೆ ಆಸಕ್ತಿ ಮೂಡಿದೆ ಎನ್ನಲಾಗಿದೆ. 'ಅಮರ್' ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಕಳೆದಿದೆ. ಎರಡನೇ ಚಿತ್ರ 'ಬ್ಯಾಡ್ ಮ್ಯಾನರ್ಸ್' ಆರಂಭಿಸಿದ್ದಾರೆ. ದುನಿಯಾ ಸೂರಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ರಚಿತಾ ರಾಮ್ ಸಹ ನಟಿಸುತ್ತಿದ್ದಾರೆ.


Click it and Unblock the Notifications











