'ಲವ್ ಯು ರಚ್ಚು' ದುರ್ಘಟನೆ: ವಿಚಾರಣೆಗೆ ಹಾಜರಾದ ನಟ ಅಜಯ್ ರಾವ್
'ಲವ್ ಯು ರಚ್ಚು' ಸಿನಿಮಾ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಸಾಹಸ ಕಲಾವಿದ ವಿವೇಕ್ ಮೃತಪಟ್ಟ ಬಗ್ಗೆ ತನಿಖೆ ನಡೆಸುತ್ತಿರುವ ರಾಮನಗರ ಪೊಲೀಸರ ಎದುರು ಸಿನಿಮಾದ ನಾಯಕ ಅಜಯ್ ರಾವ್ ಇಂದು ವಿಚಾರಣೆಗೆ ಹಾಜರಾದರು.
ಬಿಡದಿ ಬಳಿ ಜೋಗಿಪಾಳ್ಯ ಹಳ್ಳಿಯಲ್ಲಿ ಅಜಯ್ ರಾವ್, ರಚಿತಾ ರಾಮ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣ ನಡೆಯಬೇಕಾದರೆ ನಡೆದ ದುರ್ಘಟನೆಯಲ್ಲಿ ಸಾಹಸ ಕಲಾವಿದ ವಿವೇಕ್ ಮೃತಪಟ್ಟಿದ್ದರು. ಘಟನೆ ಸಂಬಂಧ ಬಿಡದಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ನಟ ಅಜಯ್ ರಾವ್ಗೆ ಪೊಲೀಸರು ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಕೇಳಿದ್ದರು.
ಬಿಡದಿ ಪೊಲೀಸ್ ಠಾಣೆಗೆ ಇಂದು ಮಧ್ಯಾಹ್ನದ ವೇಳೆಗೆ ಆಗಮಿಸಿದ ಅಜಯ್ ರಾವ್ ಅನ್ನು ಡಿವೈಎಸ್ಪಿ ಮೋಹನ್ ವಿಚಾರಣೆ ನಡೆಸಿದರು.
ಘಟನೆಗೆ ಸಂಬಂಧಿಸಿದಂತೆ ಸಿನಿಮಾ ನಿರ್ದೇಶಕ, ಸಾಹಸ ನಿರ್ದೇಶಕ, ಮ್ಯಾನೇಜರ್ ಹಾಗೂ ಕ್ರೇನ್ ಡ್ರೈವರ್ ಅನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ. ಸಿನಿಮಾಕ್ಕೆ ಸಂಬಂಧಿಸಿದ ಇನ್ನೂ ಕೆಲವರಿಗೆ ನೊಟೀಸ್ ಜಾರಿ ವಿಚಾರಣೆ ನಡೆಸುತ್ತಿದ್ದು, ಸಿನಿಮಾದ ನಾಯಕಿ ರಚಿತಾ ರಾಮ್ ಅವರಿಗೂ ನೊಟೀಸ್ ಜಾರಿ ಮಾಡಿ ವಿಚಾರಣೆಯನ್ನೂ ನಡೆಸಲಾಗಿದೆ. ಇಂದು ಅಜೆಯ್ ರಾವ್ ವಿಚಾರಣೆ ನಡೆಸಲಾಗುತ್ತಿದೆ.

ಸೆಟ್ನಲ್ಲಿದ್ದ ಅಜಯ್ ರಾವ್
ಜೋಗಿಪಾಳ್ಯದ ತೋಟದಲ್ಲಿ ಫೈಟ್ ದೃಶ್ಯ ಚಿತ್ರೀಕರಣ ಮಾಡಬೇಕಾದರೆ ಘಟನೆ ಸಂಭವಿಸಿದ್ದು, ಘಟನೆ ನಡೆದಾಗ ಅಜಯ್ ರಾವ್ ಸೆಟ್ನಲ್ಲಿ ಹಾಜರಿದ್ದರು. ಈ ಬಗ್ಗೆ ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ತಾವು ಘಟನೆ ನಡೆದ ಸ್ಥಳದಿಂದ ತುಸು ದೂರದಲ್ಲಿ ಇದ್ದುದಾಗಿಯೂ ಶಬ್ದ ಕೇಳಿ ಓಡಿ ಬಂದಿದ್ದಾಗ್ಯೂ ಈ ಮೊದಲೇ ಹೇಳಿದ್ದಾರೆ. ಆದರೆ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ರಂಜಿತ್, 'ನಟ ಅಜಯ್ ರಾವ್ ಸ್ಥಳದಲ್ಲಿಯೇ ಇದ್ದರೂ ನಮಗೆ ಸಹಾಯ ಮಾಡಲಿಲ್ಲ'' ಎಂದು ಆರೋಪಿಸಿದ್ದರು.

ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ?
ಅಜಯ್ ರಾವ್ಗೆ ಪೊಲೀಸರ ನೊಟೀಸ್ ಹೋಗುತ್ತಿದ್ದಂತೆ ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ರಾಮನಗರದ 3ನೇ ಹೆಚ್ಚುವರಿ ಸೆಷನ್ ಕೋರ್ಟ್ ಗೆ ಅಜಯ್ ರಾವ್ ಅರ್ಜಿ ಸಲ್ಲಿಸಿದ್ದು ಇಂದೇ ಆಗಸ್ಟ್ 26ರಂದು ಅಜಯ್ ರಾವ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಆದರೆ ಈ ನಡುವೆಯೇ ಅಜಯ್ ರಾವ್ ವಿಚಾರಣೆಗೆ ಹಾಜರಾಗಿದ್ದಾರೆ. ಬಂಧನ ಭೀತಿ ಇರುವ ಕಾರಣ ಅಜಯ್ ರಾವ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಅಜಾಗರೂಕತೆಯಿಂದ ದುರ್ಘಟನೆ ನಡೆದಿದೆ ಎಂದಿದ್ದ ಅಜಯ್ ರಾವ್
ಘಟನೆ ನಡೆದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ನಟ ಅಜಯ್ ರಾವ್, ಸೂಕ್ತವಾಗಿ ಜಾಗೃತೆ ವಹಿಸದೇ ಇದ್ದುದ್ದರಿಂದ, ಸೂಕ್ತ ರಕ್ಷಣಾ ಸಲಕರಣೆಗಳು ಇಲ್ಲದ ಕಾರಣದಿಂದ ಈ ಅವಘಡ ಸಂಭವಿಸಿದೆ. ಐರನ್ ರೋಪ್ ಏಕೆ ಬಳಸುತ್ತೀರಿ ಎಂದು ನಾನು ಪ್ರಶ್ನೆ ಮಾಡಿದ್ದೆ ಆದರೆ ಹೀಗೆ ಪ್ರಶ್ನೆ ಮಾಡುವುದರಿಂದ ನಾನು ಕೆಟ್ಟವನಾದೆ ಎಂದು ಅಜಯ್ ರಾವ್ ಹೇಳಿದ್ದರು. ಹಾಗಾಗಿ ಅಜಯ್ ರಾವ್ ವಿಚಾರಣೆ ಈ ಪ್ರಕರಣದಲ್ಲಿ ಬಹುಮುಖ್ಯ ಎನಿಸಿಕೊಳ್ಳಲಿದ್ದು, ಬೇಜವಾಬ್ದಾರಿಯಿಂದ ಫೈಟ್ ಮಾಸ್ಟರ್ ವರ್ತಿಸಿದ್ದಕ್ಕೆ ಘಟನೆ ನಡೆದಿದ್ದಾದರೆ ಫೈಟ್ ಮಾಸ್ಟರ್ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

ವಿಚಾರಣೆ ಬಳಿಕ ರಚಿತಾ ರಾಮ್ ಏನು ಹೇಳಿದ್ದರು?
ಆಗಸ್ಟ್ 24ರಂದು ಇದೇ ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿದ್ದ ನಟಿ ರಚಿತಾ ರಾಮ್, ವಿಚಾರಣೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿ, ''ನಾನು ವಿಚಾರಣೆಗಾಗಿ ಇವತ್ತು ಬಂದಿದ್ದೇನೆ. ಅವಘಡ ನಡೆದ ಸಂದರ್ಭದಲ್ಲಿ ನಾನು ಸ್ಥಳದಲ್ಲಿ ಇರಲಿಲ್ಲ, ಮೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೆ. ಹಾಗಾಗಿ ನನಗೆ ಗೊತ್ತಿದ್ದ ವಿಚಾರವನ್ನ ತಿಳಿಸಿದ್ದೇನೆ. ಚಿತ್ರೀಕರಣ ವೇಳೆ ನಡೆದ ದುರಂತದ ಸಂದರ್ಭದಲ್ಲಿ ನಾನು ಸ್ಥಳದಲ್ಲಿ ಇರಲಿಲ್ಲ. ಅದನ್ನ ಹೇಳಲು ಅಷ್ಟೇ ನಾನು ಪೊಲೀಸ್ ಠಾಣೆಗೆ ಬಂದಿದ್ದೇನೆ. ಮಾಧ್ಯಮಗಳಲ್ಲಿ ನೋಡಿದ ಬಳಿಕ ಫೈಟರ್ ವಿವೇಕ್ ಸಾವಿನ ವಿಚಾರ ತಿಳಿಯಿತು. ಆದರೆ ಹೇಗಾಯಿತು ಎಂಬುದು ನನಗೆ ಗೊತ್ತಿಲ್ಲ. ನಾನು ಹಳೇ ಶೆಡೂಲ್ ನಲ್ಲಿ ಇದ್ದೇ, ಆದರೆ ಇದು ಹೊಸ ಶೆಡೂಲ್ ಶೂಟಿಂಗ್ನಲ್ಲಿ ನಾನು ಇರಲಿಲ್ಲ. ಟಿವಿ ಮಾಧ್ಯಮಗಳು ಹಳೇ ವಿಡಿಯೋಗಳು ಹಾಕಿದ್ದಾರೆ ಅಷ್ಟೇ, ಚಿತ್ರದ ಫೈಟಿಂಗ್ ಸೀನ್ ನಲ್ಲಿ ಹೀರೋಯಿನ್ಗೆ ಕೆಲಸ ಇರೋದಿಲ್ಲ. ಹಾಗಾಗಿ ಯಾವ ರೀತಿಯ ಶೂಟ್ ಕಂಪೋಸ್ ಮಾಡಿದ್ದರೂ ಎಂಬ ಮಾಹಿತಿ ನನಗೆ ಇಲ್ಲ'' ಎಂದಿದ್ದರು.


Click it and Unblock the Notifications











