ನಿರ್ಮಾಪಕ ಗುರು ದೇಶಪಾಂಡೆ ನನಗೆ ಅಪಮಾನ ಮಾಡಿದ್ದಾರೆ: ಅಜಯ್ ರಾವ್
ನಟ ಅಜಯ್ ರಾವ್ ಮಿತ ಭಾಷಿ, ಯಾವುದೇ ವಿವಾದಗಳಿಲ್ಲದೆ ಇಷ್ಟು ವರ್ಷ ಚಿತ್ರರಂಗದಲ್ಲಿ ಬೆಳೆದು ಬಂದಿದ್ದಾರೆ. ಆದರೆ ಅವರೀಗ ಆಕ್ರೋಶಿತಗೊಂಡಿದ್ದಾರೆ. ತಮ್ಮ ಸಿಟ್ಟನ್ನು ಸಹ ಸಮಾಧಾನವಾಗಿಯೇ ತೋಡಿಕೊಂಡಿದ್ದಾರೆ ಅಜಯ್ ರಾವ್.
ಅಜಯ್ ರಾವ್, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಲವ್ ಯೂ ರಚ್ಚು' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಕೆಲವು ದಿನಗಳ ಹಿಂದೆ ಅದ್ಧೂರಿಯಾಗಿ ನಡೆದಿದೆ. ಆದರೆ ಆ ಕಾರ್ಯಕ್ರಮಕ್ಕೆ ನಾಯಕ ನಟ ಅಜಯ್ ರಾವ್ ಆಗಮಿಸಿರಲಿಲ್ಲ.
ತಮ್ಮದೇ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಅಜಯ್ ರಾವ್ ಆಗಮಿಸದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿತ್ತು. ಈ ಬಗ್ಗೆ ಅಜಯ್ ರಾವ್ ಅವರಿಗೆ ಪ್ರಶ್ನೆ ಮಾಡಿದಾಗ, ''ನನಗೆ ನಿರ್ಮಾಪಕರಿಂದ ಅಪಮಾನವಾಗಿದೆ ಹಾಗಾಗಿ ನನಗೆ ಅವರೊಟ್ಟಿಗೆ ಕಾಣಿಸಿಕೊಳ್ಳಲು ಇಷ್ಟವಾಗದೆ ಕಾರ್ಯಕ್ರಮಕ್ಕೆ ಬರಲಿಲ್ಲ'' ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅಜಯ್ ರಾವ್, ''ಲವ್ ಯೂ ರಚ್ಚು' ಸಿನಿಮಾದ ಬಗ್ಗೆ ನನಗೆ ಬಹಳ ನಿರೀಕ್ಷೆ ಇದೆ, ಪ್ರೀತಿಯೂ ಇದೆ. ಆದರೆ ನಿರ್ಮಾಪಕರಿಂದ ನನಗೆ ಘೋರ ಅಪಮಾನ ಆಗಿದೆ. ಹಾಗಿದ್ದಾಗ್ಯೂ ನಾನು ನನ್ನ ಆತ್ಮ ಗೌರವವನ್ನು ಕೊಂದುಕೊಂಡು ಅವರೊಟ್ಟಿಗೆ ವೇದಿಕೆ ಹಂಚಿಕೊಳ್ಳಲು ಮನಸ್ಸಾಕ್ಷಿ ಒಪ್ಪಲಿಲ್ಲ'' ಎಂದರು ಅಜಯ್ ರಾವ್.

ನಿರ್ಮಾಪಕ ಗುರು ದೇಶಪಾಂಡೆ ಅವಮಾನ ಮಾಡಿದ್ದಾರೆ: ಅಜಯ್ ರಾವ್
ಅವಮಾನ ಆಗಲು ಏನು ಕಾರಣ, ಯಾವ ರೀತಿಯ ಅವಮಾನ ಆಗಿದೆ ಎಂಬುದನ್ನು ಹೇಳದ ಅಜಯ್ ರಾವ್, ''ನಾವೆಲ್ಲರೂ ಒಂದೇ ಕುಟುಂಬದವರು. ನನಗೂ, ನಿರ್ಮಾಪಕರಿಗೂ ಮನಸ್ಥಾಪ ಇರುವುದು ನಿಜ. ನಮ್ಮಿಬ್ಬರ ಸಂಬಂಧ ಸರಿಯಿಲ್ಲದಿರುವುದು ಸಹ ನಿಜ. ಆದರೆ ಏನು ಜಗಳ, ಯಾಕಾಗಿ ಜಗಳ ಎಂಬಿತ್ಯಾದಿ ವಿಷಯಗಳನ್ನು ನಾನು ಬಹಿರಂಗಪಡಿಸುವುದಿಲ್ಲ. ಇಂದು ಮಾತ್ರ ಅಲ್ಲ, ಮುಂದೆಯೂ ನಾನು ಆ ವಿಷಯಗಳನ್ನು ಬಹಿರಂಗಪಡಿಸುವುದಿಲ್ಲ. ಮನೆ ಎಂದ ಮೇಲೆ ಜಗಳ ಸಾಮಾನ್ಯ. ಆದರೆ, ಅದನ್ನು ಬೀದಿಯಲ್ಲಿ ಜಗಜ್ಜಾಹೀರು ಮಾಡಬಾರದು. ಹಾಗಾಗಿ ನಾನು ಆ ವಿಷಯದ ಬಗ್ಗೆ ಮಾತನಾಡುವುದಿಲ್ಲ'' ಎಂದರು ಅಜಯ್ ರಾವ್.

ನನಗೂ ಆತ್ಮಗೌರವ ಇದೆ: ಅಜಯ್ ರಾವ್
''ಲವ್ ಯೂ ರಚ್ಚು' ಸಿನಿಮಾದ ಬಗ್ಗೆ ನನಗೆ ಅಪಾರ ಕಾಳಜಿ, ಪ್ರೀತಿ, ಅಭಿಮಾನ ಇದೆ. ಹಾಗಾಗಿ ನಾನು ನನ್ನ ಕಡೆಯಿಂದ ವೈಯಕ್ತಿಕವಾಗಿ ಸಿನಿಮಾಕ್ಕೆ ಪ್ರಚಾರ ಮಾಡುತ್ತೇನೆ. ಆದರೆ ಚಿತ್ರತಂಡದ ಜೊತೆ ಅದರಲ್ಲಿಯೂ ನಿರ್ಮಾಪಕರ ಜೊತೆ ನಾನು ಪ್ರಚಾರ ಮಾಡಲಾರೆ. ನನಗೂ ಆತ್ಮಗೌರವ ಇದೆ, ಅಪಮಾನ ಆದ ಜಾಗಕ್ಕೆ ನಾನು ಮರಳಿ ಹೋಗಲಾರೆ'' ಎಂದಿದ್ದಾರೆ ಅಜಯ್ ರಾವ್.

ವೈಯಕ್ತಿಕವಾಗಿ ಪ್ರಚಾರ ಮಾಡುತ್ತೇನೆ: ಅಜಯ್ ರಾವ್
''ಲವ್ ಯೂ ರಚ್ಚು' ಸಿನಿಮಾದ ಬಗ್ಗೆ ಅವರಿಗೂ ಪ್ರೀತಿ ಇದೆ, ನನಗೂ ಪ್ರೀತಿ ಇದೆ. 'ಲವ್ ಯೂ ರಚ್ಚು' ಅವರ ಸಿನಿಮಾ ಮಾತ್ರವಲ್ಲ, ನನ್ನ ಸಿನಿಮಾ ಸಹ ಹಾಗಾಗಿ ನಾನು ನನ್ನ ವೈಯಕ್ತಿಕ ಮಟ್ಟದಲ್ಲಿ ಸಿನಿಮಾಕ್ಕೆ ಏನೆಲ್ಲ ಪ್ರಚಾರ ಮಾಡಬೇಕೊ ಅದನ್ನೆಲ್ಲ ಮಾಡುತ್ತೀನಿ. ಸಿನಿಮಾ ಗೆಲ್ಲಬೇಕು ಎಂಬುದು ನನ್ನ ಆಸೆ ಸಹ. ಆದರೆ ಮುಂದೆಂದೂ ನಾನು ಹಾಗೂ ನಿರ್ಮಾಪಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ನನಗೆ ಅವರಿಂದ ಘೋರ ಅವಮಾನ ಆಗಿದೆ'' ಎಂದು ಪುನರುಚ್ಛಿಸಿದರು ಅಜಯ್ ರಾವ್.

ಪತ್ರವೊಂದು ಹರಿದಾಡುತ್ತಿದೆ
ಈ ನಡುವೆ 'ಲವ್ ಯೂ ರಚ್ಚು' ಸಿನಿಮಾಕ್ಕೆ ಸಂಬಂಧಿಸಿದ ಪತ್ರವೊಂದು ಹರಿದಾಡುತ್ತಿದ್ದು, ಪತ್ರದಲ್ಲಿ ಸಿನಿಮಾದ ನಿರ್ದೇಶಕ ಅಜಯ್ ರಾವ್ ಎಂದಿದೆ. ಶಂಕರ್ ಎಸ್ ರಾಜ್ ಅವರು ಕೇವಲ ನಾಮ್ ಕೆ ವಾಸ್ತೆ ನಿರ್ದೇಶಕರು, ಸಿನಿಮಾವನ್ನು ನಿರ್ದೇಶನ ಮಾಡಲು ನಮ್ಮ ಸಂಸ್ಥೆಯಿಂದ ಅನುಮತಿ ನೀಡಿರುತ್ತೇವೆ ಎಂದು ಬರೆದು ಅದರಲ್ಲಿ ಗುರು ದೇಶಪಾಂಡೆ, ನಟಿ ರಚಿತಾ ರಾಮ್ ಹಾಗೂ ಅಜಯ್ ರಾವ್ ಸಹಿ ಹಾಕಿರುವ ಪತ್ರವೊಂದು ಹರಿದಾಡುತ್ತಿದೆ. ಈ ಪತ್ರ ಸಹ ಹಲವು ಅನುಮಾನಗಳಿಗೆ ಕಾರಣವಾಗಿದೆ.


Click it and Unblock the Notifications











