ಕ್ರೇಜಿಸ್ಟಾರ್ ರವಿಮಾಮ ಜೊತೆ 'ಸೀಜರ್' ಹಿಡಿದ ಚಿರು ಸರ್ಜಾ
ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಇದೀಗ ಕೈ ತುಂಬಾ ಕೆಲಸ ಇರುವ ಕಾರಣ ಸದ್ಯಕ್ಕೆ ಸಖತ್ ಬಿಜಿಯಾಗಿ ಬಿಟ್ಟಿದ್ದಾರೆ. ಮೊನ್ನೆ ಮೊನ್ನೆ 'ಲಕ್ಷ್ಮಣ' ಚಿತ್ರದಲ್ಲಿ ಖಾಕಿ ತೊಟ್ಟು ಖದರ್ ತೋರಿದ ನಂತರ ಇದೀಗ ಮತ್ತೆ 'ಸೀಜರ್' ಎಂಬ ವಿಭಿನ್ನ ಸಿನಿಮಾದಲ್ಲಿ ಮಿಂಚಲಿದ್ದಾರೆ.
ಅಂದಹಾಗೆ ಮಲ್ಟಿಸ್ಟಾರರ್ ಚಿತ್ರಗಳಲ್ಲಿ ಕ್ರೇಜಿಸ್ಟಾರ್ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸುದೀಪ್ ಅವರ ಜೊತೆ 'ಮಾಣಿಕ್ಯ', ಗಣೇಶ್ ಜೊತೆ 'ಮುಂಗಾರು ಮಳೆ 2' ಚಿತ್ರದಲ್ಲಿ ಅಭಿನಯಿಸಿದ ನಂತರ, ಇದೀಗ ಚಿರಂಜೀವಿ ಸರ್ಜಾ ಅವರ ಜೊತೆ 'ಸೀಜರ್' ಎಂಬ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.[ಖಾಕಿ ತೊಟ್ಟು ಖಡಕ್ ಎಸಿಪಿ ಆದ ರವಿಚಂದ್ರನ್]

ಭೂಗತ ಲೋಕದ ಕಥೆಯಾಧರಿತ 'ಸೀಜರ್' ಎಂಬ ವಿಭಿನ್ನ ಸಿನಿಮಾ ಸುಮಾರು ಎರಡು ವರ್ಷಗಳ ಹಿಂದೆಯೇ ಸೆಟ್ಟೇರಿತ್ತು. ಇದೀಗ ಸದ್ಯದಲ್ಲೇ ಚಿತ್ರೀಕರಣ ಆರಂಭಿಸಲಿದ್ದು, ಚಿತ್ರದಲ್ಲಿ ನಟ ಚಿರು ಸರ್ಜಾ ಅವರು ಸಖತ್ ರಗಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ಆಟಗಾರ' ಚಿತ್ರದ ನಂತರ ಚಿರು ಸರ್ಜಾ ಅವರು ತೆರೆಮರೆಗೆ ಸರಿದಿದ್ದು, ಇದೀಗ 'ಸೀಜರ್' ಮೂಲಕ ಭರ್ಜರಿಯಾಗಿ ಮತ್ತೆ ತಮ್ಮ ಅಭಿಮಾನಿಗಳೆದುರು ಪ್ರತ್ಯಕ್ಷವಾಗಿದ್ದಾರೆ. ಈ ನಡುವೆ ಚೈತನ್ಯ ಅವರ ಸಿನಿಮಾದಲ್ಲಿ ಕೂಡ ಚಿರು ಬಿಜಿಯಾಗಿದ್ದಾರೆ.[ಚಿರಂಜೀವಿ ಸರ್ಜಾ - ಚೈತನ್ಯ 'ಪರಾರಿ'.! ಎಲ್ಲಿದ್ದಾರೋ? ಏನ್ಮಾಡ್ತಿದ್ದಾರೋ?]

ನಿರ್ದೇಶಕ ವಿನಯ್ ಕೃಷ್ಣ ಆಕ್ಷನ್-ಕಟ್ ಹೇಳಿರುವ 'ಸೀಜರ್' ಚಿತ್ರದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೂ ಒಂದು ವಿಭಿನ್ನ ಪಾತ್ರವಿದೆ. ಕ್ರೇಜಿಸ್ಟಾರ್ ಸ್ಟಾರ್ ರವಿಮಾಮ ಅವರ ಪಾತ್ರದ ಬಗ್ಗೆ ಗೌಪ್ಯತೆ ಕಾಪಾಡಿದ್ದು, ಈ ಬಾರಿ ಅವರು ಯಾವುದೇ ಸಹೋದರ ಅಥವಾ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಅನ್ನೋದು ವಿಶೇಷ.[ತಮಿಳು-ತೆಲುಗು ಅಂಗಳಕ್ಕೆ ಜಿಗಿದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು']

ಇನ್ನು ನಟಿ ಪಾರುಲ್ ಯಾದವ್ ಅವರು ಕೂಡ ಈ ಚಿತ್ರದ ಭಾಗವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ನಾಯಕಿಯ ಹುಡುಕಾಟದಲ್ಲಿ ತೊಡಗಿರುವ ಚಿತ್ರತಂಡ, 'ಸೀಜರ್' ಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭ ಮಾಡಲಿದೆ.


Click it and Unblock the Notifications











